ದರ್ಶನ್ ಅಭಿಮಾನಿಗಳಿಗೆ ಡಬಲ್ ಧಮಾಕಾ; 'D56' ಚಿತ್ರಕ್ಕೆ ನಾಯಕಿ ರಾಧನಾ ರಾಮ್
ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ದರ್ಶನ್ ಅಭಿಮಾನಿಗಳಿಗೆ ಡಬಲ್ ಸರ್ಪ್ರೈಸ್ ಸಿಕ್ಕಿದೆ. 'D56' ಸಿನಿಮಾ ಮಹೂರ್ತ ನೆರವೇರಿಸಿದ್ದು, ನಾಯಕಿ ಯಾರು ಅನ್ನುವುದು ಗೊತ್ತಾಗಿದೆ. ಇನ್ನು 'ಕ್ರಾಂತಿ' ಚಿತ್ರದ ಹೊಸ ಪೋಸ್ಟರ್ ಕೂಡ ರಿವೀಲ್ ಆಗಿ ಎಲ್ಲರ ಮನಗೆದ್ದಿದೆ.
Recommended Video
ಕಳೆದೊಂದು ವರ್ಷದಿಂದ 'ಕ್ರಾಂತಿ' ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಇದೀಗ ಆ ಸಾಲಿಗೆ ದರ್ಶನ್ ನಟನೆಯ 56ನೇ ಸಿನಿಮಾ ಸಹ ಸೇರಿಕೊಂಡಿದೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ಕೊಟ್ಟಿದೆ ಚಿತ್ರತಂಡ. ಈ ಚಿತ್ರಕ್ಕೆ ನಾಯಕಿಯಾಗಿ ಕನಸಿನ ರಾಣಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಆಯ್ಕೆ ಆಗಿದ್ದಾರೆ. ಪೋಸ್ಟರ್ ಸಮೇತ ಆ ವಿಚಾರವನ್ನು ಚಿತ್ರತಂಡ ಘೋಷಿಸಿದೆ. ರಾಮು ಎಂಟರ್ಪ್ರೈಸಸ್ ಬ್ಯಾನರ್ ಸಿನಿಮಾಗಳಲ್ಲಿ ದರ್ಶನ್ ನಟಿಸಿದ್ದಾರೆ. ಕೋಟಿ ರಾಮು ಹಾಗೂ ಮಾಲಾಶ್ರೀ ದಂಪತಿಯ ಮುದ್ದಿನ ಮಗಳು ಈಗ ದರ್ಶನ್ ಜೋಡಿಯಾಗಿ ನಟಿಸುತ್ತಿರುವುದು ವಿಶೇಷ.
ಅಕ್ಟೋಬರ್ನಲ್ಲಿ 'ಕ್ರಾಂತಿ' ಸಿನಿಮಾ ರಿಲೀಸ್ ಆಗುತ್ತದೆ ಅನ್ನುವ ಗುಸು ಗುಸು ಕೇಳಿ ಬಂದಿತ್ತು. ಆದರೆ ಹೊಸ ಪೋಸ್ಟರ್ನಲ್ಲಿ ರಿಲೀಸ್ ಡೇಟ್ ಘೋಷಿಸಿಲ್ಲ. ಪೋಸ್ಟರ್ನಲ್ಲಿ ಬ್ಯಾಸ್ಕೆಟ್ ಬಾಲ್ ಹಿಡ್ದು ಚಾಲೆಂಜಿಂಗ್ ಸ್ಟಾರ್ ದರ್ಶನ ಕೊಟ್ಟಿದ್ದು, 'ಒಂಟಿಯಾಗಿ ಹೋರಾಡುವುದನ್ನು ಕಲಿ' ಅನ್ನುವ ಟ್ಯಾಗ್ಲೈನ್ ಎಲ್ಲರ ಗಮನ ಸೆಳೆದಿದೆ. ನಟ ದರ್ಶನ್ ಟ್ವಿಟ್ಟರ್ನಲ್ಲಿ ಪೋಸ್ಟರ್ ಹಂಚಿಕೊಂಡಿದ್ದು, ಸಾವಿರಾರು ಲೈಕ್ಸ್, ರೀ-ಟ್ವೀಟ್ ಗಿಟ್ಟಿಸಿಕೊಂಡಿದೆ. ವಿ. ಹರಿಕೃಷ್ಣ ನಿರ್ದೇಶನದ 'ಕ್ರಾಂತಿ' ಚಿತ್ರವನ್ನು ಶೈಲಜಾ ನಾಗ್ ಹಾಗೂ ಬಿ. ಸುರೇಶ ನಿರ್ಮಾಣ ಮಾಡಿದ್ದಾರೆ.

'D56' ಸಿನಿಮಾ ಮುಹೂರ್ತ
ಕನಕಪುರ ರಸ್ತೆಯಲ್ಲಿರುವ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಇಂದು(ಆಗಸ್ಟ್ 05) ಬೆಳಗ್ಗೆ 'D56' ಸಿನಿಮಾ ಮುಹೂರ್ತ ನೆರವೇರಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಟ ಮಾಲಾಶ್ರೀ ಹಾಗೂ ಅವರ ಪುತ್ರಿ ರಾಧನಾ ಪೂಜೆಯಲ್ಲಿ ಭಾಗಿಯಾಗಿದ್ದರು.
ದರ್ಶನ್ಗೆ ನಾಯಕಿಯಾಗಿ ರಾಧನಾ ರಾಮ್
ನಟಿ ಮಾಲಾಶ್ರೀ ಪುತ್ರಿಯ ಹೆಸರು ಅನನ್ಯಾ ರಾಮು. ಆದರೆ ರಾಧನಾ ರಾಮ್ ಎಂದು ಹೆಸರು ಬದಲಿಸಿಕೊಂಡು 'D56' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಾಕಷ್ಟು ದಿನಗಳಿಂದ ರಾಧನಾ ಚಿತ್ರರಂಗಕ್ಕೆ ಬರುವ ಮಾತುಗಳು ಕೇಳಿ ಬರ್ತಿತ್ತು. ಈ ಸಿನಿಮಾದಿಂದ ಅದು ನಿಜವಾಗುತ್ತಿದೆ. ತರುಣ್ ಸುಧೀರ್ ತಮ್ಮ ಸಿನಿಮಾ ಮೂಲಕ ಹೊಸ ನಾಯಕಿಯರನ್ನು ಪರಿಚಯಿಸುತ್ತಿರುತ್ತಾರೆ. 'D56' ಚಿತ್ರದಿಂದಲೂ ಹೊಸ ನಾಯಕಿಯ ಆಗಮನವಾದಂತಾಗಿದೆ.

'D56' ಚಿತ್ರಕ್ಕೆ ಪುಷ್ಪಾಕುಮಾರಿ ಕ್ಲಾಪ್
ಪಂಚಮುಖಿ ಗಣೇಶನಿಗೆ ಪೂಜೆ ಸಲ್ಲಿಸಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಲಾಯಿತು. ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್ ಪತ್ನಿ ಶ್ರೀಮತಿ ಪುಷ್ಪಕುಮಾರಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು 'D56' ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು. ಸುಧಾಕರ್ ರಾಜ್ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ಬಹುತೇಕ 'ರಾಬರ್ಟ್' ಚಿತ್ರಕ್ಕೆ ಕೆಲಸ ಮಾಡಿದ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡುತ್ತಿದೆ.
ಅಭಿಮಾನಿಗಳ ಮನಗೆದ್ದ 'ಕ್ರಾಂತಿ' ಪೋಸ್ಟರ್
ಹಬ್ಬದ ಸಂಭ್ರಮದಲ್ಲೇ ರಿವೀಲ್ ಆಗಿರುವ 'ಕ್ರಾಂತಿ' ಪೋಸ್ಟರ್ ಕೂಡ ಅಭಿಮಾನಿಗಳ ಮನಗೆದ್ದಿದೆ. "ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಕ್ರಾಂತಿ ಚಿತ್ರಕ್ಕೆ ನೀವು ತೋರಿರುವ ಪ್ರೀತಿ-ಅಭಿಮಾನಕ್ಕೆ ನಾವು ಆಭಾರಿಯಾಗಿದ್ದೇವೆ. ನಮ್ಮ ಚಿತ್ರದ ಹೊಸ ಪೋಸ್ಟರ್ ನಿಮಗಾಗಿ" ಎಂದು ದರ್ಶನ್ ಟ್ವೀಟ್ ಮಾಡಿ ಪೋಸ್ಟರ್ ಹಂಚಿಕೊಂಡಿದ್ದಾರೆ.


Click it and Unblock the Notifications











