ದರ್ಶನ್ ಅಭಿಮಾನಿಗಳಿಗೆ ರಾಜ್ಯೋತ್ಸವ ಕೊಡುಗೆ
ಕನ್ನಡ ಚಿತ್ರರಂಗದ ಅದ್ದೂರಿ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಬಿಡುಗಡೆ ದಿನಾಂಕ ಗ್ಯಾರಂಟಿ ಆಗಿದೆ. ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಚಿತ್ರ ಬಿಡುಗಡೆಯಾಗುತ್ತಿದೆ. ಈ ಮೂಲಕ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಧಮಾಕಾ.
ರಾಜ್ಯದಾದ್ಯಂತ ಸರಿಸುಮಾರು 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 'ರಾಯಣ್ಣ' ಅಬ್ಬರಿಸಲಿದ್ದಾನೆ. ಈ ಚಿತ್ರದ ವಿತರಣೆ ಹಕ್ಕುಗಳನ್ನು ಎಚ್ ಡಿ ಗಂಗರಾಜು ಪಡೆದಿದ್ದಾರೆ. ಮೊದಲ ವಾರದಲ್ಲಿ ಟಿಕೆಟ್ ಬೆಲೆ ಏರಿಸಲಾಗುತ್ತಿದೆ.
ಈ ಚಿತ್ರವನ್ನು ತೆರೆಗೆ ತರಲು ಸತತ ಎರಡು ವರ್ಷಗಳ ಕಾಲ ಶ್ರಮಿಸಲಾಗಿದೆ. ಅದ್ದೂರಿ ಸೆಟ್ ಗಳು, ಮೇಕಿಂಗ್ ಅದ್ಭುತವಾಗಿದ್ದು ಚಿತ್ರ ಅದ್ದೂರಿಯಾಗಿ ಮೂಡಿಬಂದಿದ್ದು ಪ್ರೇಕ್ಷಕರನ್ನು ಸ್ವಾತಂತ್ರ್ಯ ಪೂರ್ವಕ್ಕೆ ಕರೆದೊಯ್ಯುತ್ತದೆ ಎನ್ನುತ್ತದೆ ಚಿತ್ರತಂಡ. ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ.
ಕಿತ್ತೂರು ಚೆನ್ನಮ್ಮನಾಗಿ ಡಾ. ಜಯಪ್ರದಾ, ಮಲ್ಲಮ್ಮನಾಗಿ ತಾರೆ ನಿಖಿತಾ ತುಕ್ರಲ್ ಸೇರಿದಂತೆ ಶ್ರೀನಿವಾಸಮೂರ್ತಿ, ಉಮಾಶ್ರೀ, ಬ್ಯಾಂಕ್ ಜನಾರ್ದನ್, ಶಶಿಕುಮಾರ್ ಒಳಗೊಂಡಂತೆ 25ಕ್ಕೂ ಹೆಚ್ಚು ಕಲಾವಿದರ ಬಳಗವೇ ಚಿತ್ರದಲ್ಲಿದೆ.
ರಾಯಣ್ಣನ ತ್ಯಾಗ, ಬಲಿದಾನ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯಾಗಿತ್ತು. ಈಗಾಗಲೆ ರಾಯಣ್ಣನ ಬಗ್ಗೆ ಅನೇಕ ಚಿತ್ರಗಳು ಬಂದಿದ್ದರೂ ಇಷ್ಟೊಂದು ಬಜೆಟ್ ನಲ್ಲಿ ಯಾರೂ ನಿರ್ಮಿಸಿರಲಿಲ್ಲ. ಸಾಲು ಸಾಲು ರಜೆಗಳು, ರಾಜ್ಯೋತ್ಸವ ಸಂಭ್ರಮ ಸಡಗರದ ನಡುವೆ 'ರಾಯಣ್ಣ' ಚಿತ್ರ ಬಿಡುಗಡೆಯಾಗುತ್ತಿದೆ. ನಾಗಣ್ಣ ನಿರ್ದೇಶನದ ಚಿತ್ರಕ್ಕೆ ಯಶೋವರ್ಧನ್ ಅವರ ಸಂಗೀತ ಹಾಗೂ ಕೇಶವಾದಿತ್ಯ ಅವರ ಸಾಹಿತ್ಯ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











