ಉಬರ್ ಕ್ಯಾಬ್ ಚಾಲಕನಾದ ಕನ್ನಡದ ಖ್ಯಾತ ನಟನ ಮಗ
Recommended Video

ಕನ್ನಡ ಚಿತ್ರರಂಗದ 'ಚಾಮಯ್ಯ ಮೇಷ್ಟ್ರು' ಕೆ.ಎಸ್ ಅಶ್ವಥ್. ಸ್ಟಾರ್ ನಟರ ಚಿತ್ರಗಳಲ್ಲಿ ಖಾಯಂ ಕಲಾವಿದನಾಗಿದ್ದ ಅದ್ಭುತ ಕಲಾವಿದ. ಬಹುಶಃ ಕೆಲವು ಪಾತ್ರಗಳಿಗೆ ಇವರನ್ನ ಬಿಟ್ಟರೇ ಬೇರೆ ಯಾರಿಂದಲೂ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎನ್ನುವಂತಹ ಅಭಿನಯ. ಇಂತಹ ಮೇರುನಟನ ಮಗ ಈಗ ಉಬರ್ ಕಾರಿನ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.
ಇನ್ನೊಂದು ವಿಷ್ಯ ಏನಪ್ಪಾ ಅಂದ್ರೆ, ಕೆ.ಎಸ್ ಅಶ್ವಥ್ ಅವರ ಮಗ ಶಂಕರ್ ಅಶ್ವಥ್ ಕೂಡ ಕನ್ನಡ ಚಿತ್ರರಂಗದಲ್ಲಿ ಸುಮಾರು 30 ವರ್ಷಗಳಿಂದ ನಟನೆ ಮಾಡುತ್ತಾ ಬಂದಿದ್ದಾರೆ. ಹೀಗಿದ್ದರೂ, ಉಬರ್ ಕಾರು ಚಾಲನೆ ಮಾಡುವಂತಹ ಪರಿಸ್ಥಿತಿ ಯಾಕೆ ಬಂತು ಎಂದು ಅವರನ್ನ ಕೇಳಿದ್ರೆ, ''ಜೀವನಕ್ಕಾಗಿ ಕೆಲಸ ಮಾಡಲೇಬೇಕು, ಅದು ನಟನೆ ಆಗಿರಬಹುದು, ಚಾಲನೆ ಆಗಿರಬಹುದು'' ಎಂದು ಸ್ವಾಭಿಮಾನದಿಂದ ಎದೆ ತಟ್ಟಿ ಹೇಳುತ್ತಾರೆ.
ಶಂಕರ್ ಅಶ್ವಥ್ ಅವರ ಈ ನಡೆಗೆ ಕಾರಣ ಯಾರು? ಎಂಬ ಪ್ರಶ್ನೆ ಕಾಡುವುದು ಸಹಜ. ಆದ್ರೆ, ''ಸಿನಿಮಾದಲ್ಲಿ ನಟಿಸಲು ಅವಕಾಶ ಬರುತ್ತಿಲ್ಲ'' ಎಂದು ಹೇಳುವುದು ಬಿಟ್ಟರೇ, ಚಿತ್ರರಂಗವನ್ನ ಎಲ್ಲಿಯೂ ದೂಷಿಸುತ್ತಿಲ್ಲ. ಮುಂದೆ ಓದಿ.....

ಸಿನಿಮಾದಲ್ಲಿ ಅವಕಾಶಗಳ ಕೊರತೆ
30 ವರ್ಷದಿಂದ ಸಿನಿಮಾರಂಗದಲ್ಲಿರುವ ನಟನಿಗೆ ಈಗ ಅವಕಾಶಗಳು ಸಿಗುತ್ತಿಲ್ಲ. ಸಿಗುವ ಅವಕಾಶಗಳಿಂದ ಬದುಕು ಸಾಗಿಸುವುದು ಕಷ್ಟ. ಚಿತ್ರೀಕರಣದಲ್ಲಿರುವ ದಿನಗಳಿಗಿಂತ ಕೆಲಸವಿಲ್ಲದೆ ಇರುವ ದಿನಗಳೇ ಹೆಚ್ಚು. ಜೀವನ ನಡೆಸಲು ಕೆಲಸ ಬೇಕಾಗಿದೆ. ಅದಕ್ಕಾಗಿ ಪರ್ಯಾಯ ಮಾರ್ಗವನ್ನ ಕಂಡುಕೊಂಡಿದ್ದೇನೆ ಅಷ್ಟೇ.

ಸಿನಿಮಾರಂಗವನ್ನ ದೂಷಿಸುತ್ತಿಲ್ಲ
ಹಾಗೆಂದು ಸಿನಿಮಾ ರಂಗವನ್ನು ದೂಷಿಸಲು ನಾನು ಸಿದ್ಧವಿಲ್ಲ. ಯಾವತ್ತೂ ಯಾರ ಮುಂದೆಯೂ ಅವಕಾಶಕ್ಕಾಗಿಯಾಗಲೀ ಹಣಕ್ಕಾಗಲೀ ಕೈಚಾಚಿ ನಿಲ್ಲುವ ಸ್ವಭಾವ ನಮ್ಮ ಕುಟುಂಬದ್ದಲ್ಲ. ಕಾಲಾವಕಾಶವಿದ್ದಾಗ ದುಡಿಯಬೇಕು. ಅದಕ್ಕೆ ಈ ವೃತ್ತಿ ಆರಂಭಿಸಿದೆ.

ಅಪ್ಪನ ಶ್ರಾದ್ಧ ಮಾಡಲು ತಯಾರಿ
ಜ.19ಕ್ಕೆ ನನ್ನ ತಂದೆ ಕೆ.ಎಸ್.ಅಶ್ವಥ್ ಅವರ 8ನೇ ವರ್ಷದ ಶ್ರಾದ್ಧವಿದೆ. ನಮ್ಮ ಪದ್ಧತಿ ಪ್ರಕಾರ ಈ ಕಾರ್ಯ ಮಾಡುವಾಗ ಯಾವುದೇ ಸಾಲ ಮಾಡಬಾರದು. ಯಾವುದನ್ನೂ ಮಾರಿ ಕಾರ್ಯ ಮಾಡುವಂತಿಲ್ಲ. ಕಷ್ಟಪಟ್ಟು ದುಡಿದು, ಅದನ್ನು ಶೇಖರಿಸಿ ಆ ಕಾರ್ಯ ಮಾಡಬೇಕು. ಒಂದೂವರೆ ತಿಂಗಳಿನಿಂದ ಯಾವುದೇ ಸಂಪಾದನೆ ಇಲ್ಲದೆ ಮನೆಯಲ್ಲೇ ಕುಳಿತಿದ್ದೆ. ಈ ವೇಳೆ ಉಬರ್ ಕ್ಯಾಬ್ ಓಡಿಸಲು ನಿರ್ಧರಿಸಿದೆ ಎಂದು ತಿಳಿಸಿದರು.

ಚಿತ್ರರಂಗದ ಮೆಚ್ಚುಗೆ
ಕಲಾವಿದರು ನಟನೆಯಿಂದ ಹಿಂದೆ ಸರಿದಾಗ ಏನು ಮಾಡಬೇಕು ಎಂದು ದಿಕ್ಕು ತೋಚದೆ ಕಂಗಲಾಗಿರುವ ಹಲವು ಉದಾಹರಣೆಗಳಿವೆ. ಆದ್ರೆ, ಶಂಕರ್ ಅವರ ಸ್ವಾಭಿಮಾನದ ಬಗ್ಗೆ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು, ಹಿರಿಯ ನಟ ಡಿಂಗ್ರಿ ನಾಗರಾಜ್, ಸತ್ಯಜಿತ್ ಸೇರಿದಂತೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











