ದರ್ಶನ್ ತಂದೆಗೆ 'ತೂಗುದೀಪ' ಹೆಸರು ಕೊಟ್ಟವ್ರು ಇದೇ ರಾಧಾರವಿ.!
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ಇನ್ನಿಲ್ಲ. ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಬೆಂಗಳೂರಿನ ಹೊರಮಾವುವಿನಲ್ಲಿರುವ ಅವರ ನಿವಾಸದಲ್ಲಿ ಕಿಕ್ಕೇರಿ ಶಾಮಣ್ಣ ಲಕ್ಷ್ಮೀನರಸಿಂಹಸ್ವಾಮಿ (77) ಕೊನೆಯುಸಿರೆಳೆದಿದ್ದಾರೆ.
'ತೂಗುದೀಪ', 'ಜಿಮ್ಮಿಗಲ್ಲು', 'ಗಾಂಧಿನಗರ', 'ಭಾಗ್ಯದ ಬಾಗಿಲು' ಸೇರಿದಂತೆ ಹಲವಾರು ಚಿತ್ರಗಳಿಗೆ ನಿರ್ದೇಶಕರಾಗಿದ್ದ ಕೆ.ಎಸ್.ಎಲ್.ಸ್ವಾಮಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ರವರಿಗೆ ಅತ್ಯಾಪ್ತರು. [ಹಿರಿಯ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ವಿಧಿವಶ]

ಹಾಗ್ನೋಡಿದ್ರೆ, ದರ್ಶನ್ ತಂದೆ ಶ್ರೀನಿವಾಸ್ ರವರಿಗೆ 'ತೂಗುದೀಪ' ಅಂತ ಹೆಸರು ಕೊಟ್ಟಿದ್ದು ಇದೇ ಕೆ.ಎಸ್.ಎಲ್.ಸ್ವಾಮಿ. ಹೌದು, ಕೆ.ಎಸ್.ಎಲ್.ಸ್ವಾಮಿ ಮತ್ತು ಶ್ರೀನಿವಾಸ್ ಇಬ್ಬರೂ ಮೈಸೂರಿನವರು. ಆದರೂ, ಶ್ರೀನಿವಾಸ್ ಪರಿಚಯ ಕೆ.ಎಸ್.ಎಲ್.ಸ್ವಾಮಿ (ರಾಧಾರವಿ)ಗೆ ಆಗಿದ್ದು ಒಂದು ನಾಟಕದಲ್ಲಿ.
ಅದಾಗ್ಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಕೆ.ಎಸ್.ಎಲ್.ಸ್ವಾಮಿ ಮೈಸೂರಿನಲ್ಲಿ ನಾಟಕವೊಂದನ್ನ ನೋಡೋಕೆ ಹೋಗಿದ್ದರು. ಆ ನಾಟಕದಲ್ಲಿ ಶ್ರೀನಿವಾಸ್ ಅಭಿನಯಿಸಿದ್ದರು. ಆಗಲೇ ಇಬ್ಬರಿಗೂ ಪರಿಚಯವಾಗಿದ್ದು. ಪರಿಚಯ ಸ್ನೇಹವಾಯ್ತು.
ಇಬ್ಬರ ಸ್ನೇಹ ಎಷ್ಟು ಗಟ್ಟಿಯಾಗಿತ್ತು ಅಂದ್ರೆ, ಮುಂದೆ ಕೆ.ಎಸ್.ಎಲ್.ಸ್ವಾಮಿ 'ತೂಗುದೀಪ' ಅಂತ ಚಿತ್ರ ನಿರ್ದೇಶನ ಮಾಡಿದಾಗ, ಅದರಲ್ಲಿ ಶ್ರೀನಿವಾಸ್ ರವರಿಗೆ ಒಂದು ಪಾತ್ರ ನೀಡಿದರು. [ಸಾವಿನಲ್ಲೂ ಸಾರ್ಥಕತೆ ಮೆರೆದ ಕೆ.ಎಸ್ ಎಲ್ ಸ್ವಾಮಿ]

'ತೂಗುದೀಪ' ಚಿತ್ರದಲ್ಲಿ ಪಿ.ಬಿ.ಶ್ರೀನಿವಾಸ್ ಮತ್ತು ಶ್ರೀನಿವಾಸ್ ಇದ್ದರು. ಇಬ್ಬರದ್ದು ಒಂದೇ ಹೆಸರಾದ್ದರಿಂದ ಟೈಟಲ್ ಕಾರ್ಡ್ ನಲ್ಲಿ ಗೊಂದಲ ಸೃಷ್ಟಿಯಾಗಬಾರದು ಅನ್ನುವ ಕಾರಣಕ್ಕೆ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ, ಶ್ರೀನಿವಾಸ್ ರಿಗೆ 'ತೂಗುದೀಪ ಶ್ರೀನಿವಾಸ್' ಅಂತ ನಾಮಕರಣ ಮಾಡಿದರು.
ಅಂದಿನಿಂದ ಬೆಳ್ಳಿತೆರೆಯಲ್ಲಿ ಪಯಣ ಆರಂಭಿಸಿದ ತೂಗುದೀಪ ಶ್ರೀನಿವಾಸ್ ಜನಪ್ರಿಯ ಖಳನಟನಾದರು. ಅವರ ಮಗ ದರ್ಶನ್ 'ತೂಗುದೀಪ' ಅಂತಲೇ ಇಂದು ಹೆಸರುವಾಸಿ.!
ಹೀಗೆ ಅನೇಕರ ಸಾಧನೆಗೆ ತೋಳುಬಲ ನೀಡಿದ್ದ ಕೆ.ಎಸ್.ಎಲ್.ಸ್ವಾಮಿ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪ್ರಾರ್ಥಿಸೋಣ.


Click it and Unblock the Notifications











