'ಕುರುಕ್ಷೇತ್ರ'ಕ್ಕೆ ಅದ್ಧೂರಿ ಚಾಲನೆ: ಎಲ್ಲ ಊಹಾಪೋಹಗಳಿಗೆ ಸಿಕ್ತು ಉತ್ತರ
ಕನ್ನಡದ ಹೆಮ್ಮೆಯ ಚಿತ್ರ 'ಕುರುಕ್ಷೇತ್ರ' ಸಿನಿಮಾದ ಮುಹೂರ್ತ ನಿನ್ನೆ (06 ಆಗಸ್ಟ್) ಅದ್ಧೂರಿಯಾಗಿ ನೆರವೇರಿದೆ. ಬೆಂಗಳೂರಿನ ತುಮಕೂರು ರಸ್ತೆಯ ಬಳಿಯಿರುವ ಗೊರಗುಂಟೆಪಾಳ್ಯದ ಡಾ.ಪ್ರಭಾಕರ್ ಕೋರೆ ಕನ್ವೆಂಷನ್ ಸೆಂಟರ್ ನಲ್ಲಿ 'ಕುರುಕ್ಷೇತ್ರ' ಚಿತ್ರದ ಮುಹೂರ್ತ ಸಮಾರಂಭ ನಡೆಯಿತು.
ಈ ಅದ್ಧೂರಿ ಮುಹೂರ್ತ ಸಮಾರಂಭದಲ್ಲಿ ರಾಜಕೀಯ ಗಣ್ಯರು, ಸಿನಿಮಾ ದಿಗ್ಗಜರು ಸೇರಿದಂತೆ ನೂರಾರೂ ಅಭಿಮಾನಿಗಳು ಭಾಗಿಯಾಗಿದ್ದರು. ಇವರೆಲ್ಲರ ಸಮ್ಮುಖದಲ್ಲಿ ದರ್ಶನ್ ಅವರ 50ನೇ ಸಿನಿಮಾಗೆ ಚಾಲನೆ ಸಿಕ್ಕಿತು.
ಈ ಮೂಲಕ 'ಕುರುಕ್ಷೇತ್ರ'ದ ಬಗ್ಗೆ ಇದ್ದ ಎಲ್ಲ ಊಹಾಪೋಹಗಳಿಗೆ ಅಧಿಕೃತವಾಗಿ ಉತ್ತರ ಸಿಕ್ಕಿದೆ. ಅವರು ಬರ್ತಾರೆ, ಇವರು ಬರ್ತಾರೆ ಎಂಬ ಅಂತೆ-ಕಂತೆಗಳಿಗೆ ಸ್ಪಷ್ಟ ಉತ್ತರ ಸಿಕ್ಕಿದೆ. ಮುಂದಿದೆ ಓದಿ....

ಸಿದ್ಧರಾಮಯ್ಯ ಚಾಲನೆ
'ಕುರುಕ್ಷೇತ್ರ' ಸಿನಿಮಾದ ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮಿಸಿದ್ದರು. ಸಿಎಂ ಕ್ಲಾಪ್ ಮಾಡುವುದರ ಮೂಲಕ ದರ್ಶನ್ ಅವರ 50ನೇ ಚಿತ್ರಕ್ಕೆ ಅಧಿಕೃತವಾಗಿ ಚಿತ್ರಕ್ಕೆ ಚಾಲನೆ ದೊರೆಯಿತು.

ಅದ್ಧೂರಿ ಕಾರ್ಯಕ್ರಮ
ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ತಾರೆಯರ ದಂಡೆ ಸೇರಿತ್ತು. ನಟ ದರ್ಶನ್, ರವಿಚಂದ್ರನ್, ಅಂಬರೀಶ್, ಅರ್ಜುನ್ ಸರ್ಜಾ, ರವಿಶಂಕರ್, ಶಶಿಕುಮಾರ್, ನಿಖಿಲ್ ಕುಮಾರ್, ಹರಿಪ್ರಿಯಾ, ರಾಕ್ ಲೈನ್ ವೆಂಕಟೇಶ್ ಹಾಗೂ ರಾಜಕೀಯ ರಂಗದಿಂದ ಡಿ.ಕೆ.ಸುರೇಶ್ ಸೇರಿದಂತೆ ಕೆಲವರು ಭಾಗಿಯಾಗಿದ್ದರು.

ಇದು 'ಮುನಿರತ್ನ ಕುರುಕ್ಷೇತ್ರ'
ಕಾರ್ಯಕ್ರಮದಲ್ಲಿ ಚಿತ್ರದ ಟೈಟಲ್ ಬಗ್ಗೆ ಇದ್ದ ಗೊಂದಲವನ್ನು ಮುನಿರತ್ನ ನಿವಾರಿಸಿದರು. ಈ ಚಿತ್ರದ ಟೈಟಲ್ ಬರಿ 'ಕುರುಕ್ಷೇತ್ರ' ಅಲ್ಲ... ಇದು 'ಮುನಿರತ್ನ ಕುರುಕ್ಷೇತ್ರ' ಅಂತ ನಿರ್ಮಾಪಕರು ಸ್ಪಷ್ಟಪಡಿಸಿರು.

ಕಲಾವಿದರ ತಂಡ
'ಕುರುಕ್ಷೇತ್ರ' ಚಿತ್ರಕ್ಕೆ ಸದ್ಯ ಬಹುಪಾಲು ಎಲ್ಲ ಪಾತ್ರಗಳಿಗೆ ಕಲಾವಿದರ ಆಯ್ಕೆ ಆಗಿದೆ. ಚಿತ್ರದಲ್ಲಿ ನಟ ಅಂಬರೀಶ್, ದರ್ಶನ್, ರವಿಚಂದ್ರನ್, ಅರ್ಜುನ್ ಸರ್ಜಾ, ರವಿಶಂಕರ್, ಸಾಯಿ ಕುಮಾರ್, ಶಶಿಕುಮಾರ್, ಶ್ರೀ ನಾಥ್, ನಿಖಿಲ್ ಕುಮಾರ್, ಬಾಲಿವುಡ್ ನಟ 'ಡ್ಯಾನಿಶ್', ಹರಿಪ್ರಿಯಾ, ನಟಿ ಲಕ್ಷ್ಮಿ, ಹಾಗೂ ನಟಿ ಸ್ನೇಹ ನಟಿಸಲಿದ್ದಾರೆ.

ತಾಂತ್ರಿಕ ತಂಡ
'ಕುರುಕ್ಷೇತ್ರ' ಚಿತ್ರದ ಕಥೆಗೆ ಜೆ.ಕೆ.ಭಾರವಿ ಅವರ ರಚನೆ, ಜಯನನ್ ವಿನ್ಸೆಂಟ್ ಛಾಯಾಗ್ರಹಣ, ವಿ.ಹರಿಕೃಷ್ಣ ಸಂಗೀತ, ಜೋನಿ ಹರ್ಷ ಸಂಕಲನ, ಕಿಂಗ್ ಸಾಲೋಮನ್ ಸಾಹಸ ಇರಲಿದೆ. 'ಬಾಹುಬಲಿ' ಚಿತ್ರಕ್ಕೆ ಗ್ರಾಫಿಕ್ಸ್ ಮಾಡಿದ ತಂಡ 'ಕುರುಕ್ಷೇತ್ರ' ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ.

ಶೂಟಿಂಗ್ ಪ್ಲಾನ್
'ಕುರುಕ್ಷೇತ್ರ' ಸಿನಿಮಾದ ಬಹುಪಾಲು ಚಿತ್ರೀಕರಣ ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯಲಿದೆ. ಒಂದೇ ಶೆಡ್ಯೂಲ್ ನಲ್ಲಿ 100 ದಿನಗಳ ಕಾಲ ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಪ್ಲಾನ್ ಮಾಡಿದೆ. ಚಿತ್ರದಲ್ಲಿ ಸುಮಾರು 15ಕ್ಕೂ ಹೆಚ್ಚು ಸೆಟ್ ಗಳನ್ನು ಬಳಸಲಾಗುವುದಂತೆ.

2 ತಿಂಗಳಿಂದ ಭರ್ಜರಿ ತಯಾರಿ
'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣಕ್ಕಾಗಿ ಕಳೆದ ಎರಡು ತಿಂಗಳಿಂದ ತಯಾರಿ ನಡೆಯುತ್ತಿದೆ. ನಿರ್ಮಾಪಕ ಮುನಿರತ್ನ ಅವರ ಕನಸನ್ನು ಸಹಕಾರಗೊಳಿಸುವುದಕ್ಕೆ ನಿರ್ದೇಶಕ ನಾಗಣ್ಣ ಹಗಲು ರಾತ್ರಿ ಶ್ರಮ ವಹಿಸುತ್ತಿದ್ದಾರಂತೆ.

ಸಂಕ್ರಾಂತಿಗೆ ರಿಲೀಸ್
'ಕುರುಕ್ಷೇತ್ರ' ಸಿನಿಮಾ 2D ಮತ್ತು 3D ವರ್ಷನ್ ನಲ್ಲಿ ಬಿಡುಗಡೆ ಆಗಲಿದ್ದು, ಮುಂದಿನ ವರ್ಷ ಸಂಕ್ರಾಂತಿ ವೇಳೆಗೆ ಸಿನಿಮಾವನ್ನು ರಿಲೀಸ್ ಮಾಡುವ ಯೋಚನೆ ಚಿತ್ರತಂಡದ್ದು.


Click it and Unblock the Notifications











