ಕುರುಕ್ಷೇತ್ರ ಹೊಸ ಟ್ರೈಲರ್ ನೋಡಿದ್ಮೇಲೂ ಫ್ಯಾನ್ಸ್ ನಿರಾಸೆ.!
ಭೀಷ್ಮ: ಕುರು ಮಹಾ ಸಾಮ್ರಾಜ್ಯಕ್ಕೆ ಧರ್ಮಜನನ್ನು ಯುವರಾಜನನ್ನಾಗಿ ಮಾಡಬೇಕೆಂದು ಪ್ರತಿಪಾದಿಸುತ್ತೇನೆ...
ದುರ್ಯೋಧನ: ನಿಮ್ಮ ಪ್ರತಿಪಾದನೆಯನ್ನ ತಿರಸ್ಕರಿಸುತ್ತಿದ್ದೇನೆ...
ಕರ್ಣ: ಮಾರಣಹೋಮಕ್ಕೆ ಆದೇಶಿಸಿ...ವಿಜಯತಾಂಡವ ಮಾಡಿ ಆ ಪಾಂಡವರ ರುಂಡಗಳನ್ನ ಚೆಂಡಾಡಿ..ನಿನ್ನ ಪಾದಕ್ಕೆ ತೊತ್ತಾಗಿಸುತ್ತೇನೆ...
ದುರ್ಯೋಧನ: ತಲೆ ಎತ್ತಿ ಮೆರೆದವರು ತಲೆ ತಗ್ಗಿಸಿಕೊಂಡಿದ್ದಾರೆ....
ಇಂತಹ ಪವರ್ ಫುಲ್ ಡೈಲಾಗ್ ಗಳು, ಕಣ್ಣಿಗೆ ಹಬ್ಬ ನೀಡುವಂತಹ ದೃಶ್ಯವೈಭವ. ಅದ್ಭುತವೆನ್ನಿಸುವಂತಹ ಯುದ್ಧದ ಸನ್ನಿವೇಶಗಳು. ಅದಕ್ಕೆ ತಕ್ಕಂತೆ ಕಲಾವಿದರನ್ನ ಆಯ್ಕೆ ಮಾಡಿ, ಕುರುಕ್ಷೇತ್ರವನ್ನ ಕಣ್ಣ ಮುಂದೆ ತಂದಿದ್ದಾರೆ ನಿರ್ದೇಶಕ ನಾಗಣ್ಣ ಮತ್ತು ನಿರ್ಮಾಪಕ ಮುನಿರತ್ನ.
ಈ ಹಿಂದಿನ ಟ್ರೈಲರ್ ಗೆ ಹೋಲಿಸಿಕೊಂಡರೇ ಇದು ಸೂಪರ್ ಎನ್ನುವಂತೆ ಇದೆ. ಆದರೆ, ಕೆಲವು ವಿಷ್ಯವನ್ನ ನಿರ್ಮಾಪಕರು ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ಯಾಕಂದ್ರೆ, ಇಂತಹ ದೊಡ್ಡ ಪ್ರಾಜೆಕ್ಟ್ ಮಾಡಿ, ಯಾವುದೋ ಸಣ್ಣ ಪುಟ್ಟ ತಪ್ಪುಗಳಿಂದ ಇಡೀ ಚಿತ್ರಕ್ಕೆ ಹಿನ್ನಡೆಯಾಗಬಾರದು. ಬಟ್, ಕುರುಕ್ಷೇತ್ರದ ಹೊಸ ಟ್ರೈಲರ್ ನಲ್ಲೂ ಅಂತಹ ನಿರಾಸೆ ಕಾಡುತ್ತಿದೆ. ಏನದು? ಮುಂದೆ ಓದಿ...

ರವಿಚಂದ್ರನ್ ಡಬ್ಬಿಂಗ್ ಮಾಡಿಲ್ಲ.!
ದರ್ಶನ್, ಅಂಬರೀಶ್, ರವಿಶಂಕರ್, ಅರ್ಜುನ್ ಸರ್ಜಾ ಅವರೇ ತಮ್ಮ ಪಾತ್ರಗಳಿಗೆ ಡಬ್ಬಿಂಗ್ ಮಾಡಿದ್ದಾರೆ. ಆದರೆ, ಕೃಷ್ಣನ ಪಾತ್ರಧಾರಿ ರವಿಚಂದ್ರನ್ ಡಬ್ಬಿಂಗ್ ಮಾಡಿಲ್ಲ ಎನ್ನುವುದು ಟ್ರೈಲರ್ ಹೇಳುತ್ತಿದೆ. ಇದು ಸಹಜವಾಗಿ ಬೇಸರ ಮೂಡಿಸುತ್ತಿದೆ. ರವಿಚಂದ್ರನ್ ಅವರ ಧ್ವನಿ ಎಲ್ಲರಿಗೂ ಗೊತ್ತಿದೆ. ಅವರ ಅಭಿನಯಕ್ಕೆ ಯಾವುದೋ ಬೇರೆ ವಾಯ್ಸ್ ಬಂದಾಗ ಅದು ನೋಡುವುದಕ್ಕೂ ಚೆನ್ನಾಗಿ ಕಾಣಿಸುವುದಿಲ್ಲ. ಇದು ಟ್ರೈಲರ್ ನಲ್ಲೇ ಸಾಬೀತಾಗಿದೆ. ಕೃಷ್ಣನ ಪಾತ್ರಕ್ಕೆ ರವಿಚಂದ್ರನ್ ಅವರೇ ಡಬ್ ಮಾಡಿದ್ದಾರೆ ಈ ಹಿಂದೆ ಮುನಿರತ್ನ ಹೇಳಿದ್ದರು. ಬಟ್, ಇದು ರವಿಚಂದ್ರನ್ ವಾಯ್ಸ್ ಅಲ್ಲ ಎಂಬ ಅನುಮಾನ ಬಂದಿದೆ. ಕ್ರೇಜಿಸ್ಟಾರ್ ಡಬ್ ಮಾಡಿದ್ರೆ ಅದರ ಮಹತ್ವ ಮತ್ತಷ್ಟು ಹೆಚ್ಚಾಗುತ್ತಿತ್ತು.

ನಿಖಿಲ್ ಅವರದ್ದು ಅದೇ ಕಥೆ
ಕೃಷ್ಣನ ಪಾತ್ರಧಾರಿ ರವಿಚಂದ್ರನ್ ಮಾತ್ರವಲ್ಲ, ಅಭಿಮನ್ಯು ಪಾತ್ರಧಾರಿ ನಿಖಿಲ್ ಕುಮಾರ್ ಅವರು ಕೂಡ ಡಬ್ಬಿಂಗ್ ಮಾಡಿಲ್ಲ. ಅಭಿಮನ್ಯು ಪಾತ್ರದಲ್ಲಿ ಮಿಂಚಿರುವ ನಿಖಿಲ್ ಅವರ ಅಭಿನಯಕ್ಕೆ ಬೇರೆ ಯಾರದ್ದೂ ವಾಯ್ಸ್ ಬಂದಿರುವುದರಿಂದ ಆ ಪಾತ್ರದಲ್ಲಿ ಇರೋದು ನಿಖಿಲ್ ಅವರೇನಾ ಎಂಬ ಅನುಮಾನ ಬರುತ್ತೆ. ಇದು ಕೂಡ ಕುರುಕ್ಷೇತ್ರಕ್ಕೆ ಒಂದು ಮೈನಸ್ ಆಗಿ ಪರಿಣಾಮ ಬೀರಬಹುದು.

ಅರ್ಜುನ ಮತ್ತು ಭೀಮ
ಕುರುಕ್ಷೇತ್ರದಲ್ಲಿ ಬಹುತೇಕರು ಕನ್ನಡ ಕಲಾವಿದರೇ ಇದ್ದಾರೆ. ಆದರೆ, ಪ್ರಮುಖ ಪಾತ್ರಗಳಾದ ಅರ್ಜುನ ಮತ್ತು ಭೀಮನಾಗಿ ಬಾಲಿವುಡ್ ನಟರು ಕಾಣಿಸಿಕೊಂಡಿದ್ದಾರೆ. ಸೋನು ಸೋದ್ ಅರ್ಜುನ, ಡ್ಯಾನಿಶ್ ಅಖ್ತರ್ ಭೀಮ. ಬಟ್, ಇವರಿಬ್ಬರನ್ನು ನೋಡುವುದಕ್ಕೆ ಸಖತ್ ಆಗಿ ಕಾಣ್ತಾರೆ. ಆದರೆ, ಕ್ಲೋಸ್ ದೃಶ್ಯಗಳಲ್ಲಿ ನೋಡಿದಾಗ ಇವರಿಬ್ಬರ ಡಬ್ಬಿಂಗ್ ನಲ್ಲಿ ಲಿಪ್ ಸಿಂಕ್ ಆಗಿಲ್ಲ. ಇದು ನೋಡಿದಾಗ ಯಾವುದೋ ಹಿಂದಿ ಚಿತ್ರಕ್ಕೆ ಕನ್ನಡದಲ್ಲಿ ಡಬ್ ಮಾಡಿದಂತಿದೆ ಎಂಬ ಭಾವನೆ ಬರುತ್ತೆ.

ಬಾಕಿ ಎಲ್ಲವೂ ಬೆರಗುಗೊಳಿಸಿದೆ
ಈ ಅಂಶಗಳನ್ನ ಬಿಟ್ಟರೇ ಬಾಕಿ ಎಲ್ಲವೂ ಆಕರ್ಷಣೆ ಮಾಡ್ತಿದೆ. ದುರ್ಯೋಧನನಾಗಿ ದರ್ಶನ್ ಅಬ್ಬರಿಸಿದ್ದಾರೆ. ಕರ್ಣನ ಪಾತ್ರದಲ್ಲಿ ಸರ್ಜಾ ಜೀವಿಸಿದ್ದಾರೆ. ಶಕುನಿಯಾಗಿ ರವಿಶಂಕರ್ ಒಂದು ಕೈ ಮೇಲಿದ್ದಾರೆ. ಭೀಷ್ಮನಾಗಿ ಅಂಬಿ ಸೂಪರ್. ತಾಂತ್ರಿಕವಾಗಿ ಸಿನಿಮಾ ಕೂಡ ಮೆಚ್ಚುವಂತಿದೆ. ಅದ್ಧೂರಿ ಗ್ರಾಫಿಕ್ಸ್ ಕೆಲಸ ಕಂಡು ಬಂದಿದೆ. ಸಿನಿಮಾಟೋಗ್ರಫಿ, ಮ್ಯೂಸಿಕ್ ಎಲ್ಲವೂ ಇಷ್ಟ ಆಗ್ತಿದೆ. ಬಹುಶಃ ಈ ಮೇಲೆ ಹೇಳಲಾದ ಅಂಶಗಳ ಬಗ್ಗೆ ಸ್ವಲ್ಪ ಗಂಭೀರವಾಗಿ ಚಿಂತಿಸಿದ್ದರೆ, ಕುರುಕ್ಷೇತ್ರಕ್ಕೆ ಕುರುಕ್ಷೇತ್ರವೇ ಸಾಟಿಯಾಗುತ್ತಿತ್ತೇನೋ?


Click it and Unblock the Notifications











