ಕುವೆಂಪು - ಪುನೀತ್ ರಾಜ್ಕುಮಾರ್: 'ಕರ್ನಾಟಕ ರತ್ನ' ಪ್ರಶಸ್ತಿ ಪಡೆದ ಹತ್ತು ಸಾಧಕರ ಪಟ್ಟಿ
ಕರ್ನಾಟಕ ರತ್ನ ಪ್ರಶಸ್ತಿ ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಕರ್ನಾಟಕದ ಸಾಧಕರಿಗೆ ನೀಡುವ ಪ್ರಶಸ್ತಿ. 1992ರಲ್ಲಿ ಈ ಕರ್ನಾಟಕ ರತ್ನ ಪ್ರಶಸ್ತಿಯನ್ನು ಆರಂಭಿಸಲಾಯಿತು. ಮೊದಲಿಗೆ 1992ರ ಕನ್ನಡ ರಾಜ್ಯೋತ್ಸವದಂದು ರಾಷ್ಟ್ರಕವಿ ಕುವೆಂಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಹೀಗೆ 1992ರಲ್ಲಿ ಶುರುವಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು 2009ರವರೆಗೆ ಒಟ್ಟು ಒಂಬತ್ತು ಸಾಧಕರಿಗೆ ನೀಡಲಾಗಿತ್ತು.
ಕರ್ನಾಟಕ ರತ್ನ ಪ್ರಶಸ್ತಿಯು ಕರ್ನಾಟಕ ರಾಜ್ಯ ಸರ್ಕಾರ ನೀಡುವ ಅತ್ಯುನ್ನತ ನಾಗರೀಕ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯು ಸಂಪೂರ್ಣವಾಗಿ ಬೆಳ್ಳಿಯಿಂದ ಕೂಡಿರಲಿದ್ದು, ಇದರ ಜತೆಗೆ ಐವತ್ತು ಗ್ರಾಂ ಚಿನ್ನದ ಪದಕ ಹಾಗೂ ನೆನಪಿನ ಕಾಣಿಕೆಯನ್ನು ನೀಡಲಾಗುತ್ತದೆ. ಪ್ರಶಸ್ತಿ ಪಡೆಯುವ ಗಣ್ಯರಿಗೆ ರಾಜ್ಯದ ಮುಖ್ಯಮಂತ್ರಿಗಳು ಶಾಲನ್ನು ಹೊದಿಸಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸುತ್ತಾರೆ.
ಇನ್ನು ಇಲ್ಲಿಯವರೆಗೂ ಈ ಅತ್ಯುನ್ನತ ಕರ್ನಾಟಕ ರತ್ನ ಪ್ರಶಸ್ತಿ ಗೌರವಕ್ಕೆ ಭಾಜನರಾಗಿರುವವರು ಯಾರು, ಯಾವ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

ಪ್ರಶಸ್ತಿ ಗೆದ್ದ ಸಾಧಕರ ಪಟ್ಟಿ
1. ಕುವೆಂಪು - 1992 - ಸಾಹಿತ್ಯ
2. ರಾಜ್ಕುಮಾರ್ - 1992 - ಚಲನಚಿತ್ರ
3. ಎಸ್. ನಿಜಲಿಂಗಪ್ಪ - 1999 - ರಾಜಕೀಯ
4. ಸಿ.ಎನ್. ಆರ್. ರಾವ್ - 2000 - ವಿಜ್ಞಾನ
5. ದೇವಿ ಪ್ರಸಾದ್ ಶೆಟ್ಟಿ - 2001 - ವೈದ್ಯಕೀಯ
6. ಭೀಮಸೇನ ಜೋಷಿ - 2005 - ಸಂಗೀತ
7. ಶ್ರೀ ಶಿವಕುಮಾರ ಸ್ವಾಮಿಗಳು - 2007 - ಸಾಮಾಜಿಕ ಸೇವೆ
8. ದೇ ಜವರೇ ಗೌಡ - 2008 - ಸಾಹಿತ್ಯ
9. ಡಿ. ವಿರೇಂದ್ರ ಹೆಗ್ಗಡೆ - 2009 - ಸಾಮಾಜಿಕ ಸೇವೆ
10. ಪುನೀತ್ ರಾಜ್ಕುಮಾರ್ - 2022 - ಸಾಮಾಜಿಕ ಸೇವೆ ಹಾಗೂ ಚಲನಚಿತ್ರ

ಚಲನಚಿತ್ರ ಕ್ಷೇತ್ರದಲ್ಲಿ ಪ್ರಶಸ್ತಿ ಗೆದ್ದದ್ದು ರಾಜ್ ಹಾಗೂ ಅಪ್ಪು ಮಾತ್ರ
ಸ್ಯಾಂಡಲ್ವುಡ್ನ ಸಾರ್ವಕಾಲಿಕ ಬಾಸ್ ಡಾ.ರಾಜ್ಕುಮಾರ್ ಚಲನಚಿತ್ರ ಕ್ಷೇತ್ರದಲ್ಲಿ ಸಾಧನೆ ಮಾಡಿ ಕರ್ನಾಟಕ ಪ್ರಶಸ್ತಿ ಗೆದ್ದ ಏಕೈಕ ನಟ ಎನಿಸಿಕೊಂಡಿದ್ದರು. ಈ ಸಾಲಿಗೆ ಇದೀಗ ಅವರ ಕಿರಿಯ ಪುತ್ರ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಹ ಸೇರಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ಚಲನಚಿತ್ರ ಹಾಗೂ ಸಾಮಾಜಿಕ ಸೇವೆ ಕ್ಷೇತ್ರಗಳಲ್ಲಿ ಒದಗಿಸಿದ ಸೇವೆಗಾಗಿ ರಾಜ್ಯ ಸರ್ಕಾರ ಈ ಬಾರಿ ಕನ್ನಡ ರಾಜ್ಯೋತ್ಸವದಂದು ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.

ಅಪ್ಪುಗೆ ಪ್ರಶಸ್ತಿ ಸಿಗ್ತಿರೋದ್ರಲ್ಲಿವೆ ಹಲವಾರು ವಿಶೇಷತೆ
ಕರ್ನಾಟಕ ರತ್ನ ಪ್ರಶಸ್ತಿಯನ್ನು ಇಲ್ಲಿಯವರೆಗೂ ಮರಣೋತ್ತರವಾಗಿ ಯಾರಿಗೂ ಸಹ ನೀಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಅಪ್ಪು ಮಾಡಿದ ಹಲವಾರು ಸಮಾಜಮುಖಿ ಕೆಲಸವನ್ನು ಪರಿಗಣಿಸಿ ಮರಣೋತ್ತರ ಕರ್ನಾಟಕ ಪ್ರಶಸ್ತಿಯನ್ನು ನೀಡ್ತಿದೆ ರಾಜ್ಯ ಸರ್ಕಾರ. ಇನ್ನು ಒಂದೇ ಕುಟುಂಬದ ಇಬ್ಬರು ಸಾಧಕರು ಕರ್ನಾಟಕ ರತ್ನ ಪ್ರಶಸ್ತಿ ಪಡೆಯಲಿರುವುದು ಮತ್ತೊಂದು ವಿಶೇಷತೆ. ಇನ್ನು ಇಲ್ಲಿಯವರೆಗೂ ಪ್ರಶಸ್ತಿ ಪಡೆದವರೆಲ್ಲ ಒಂದು ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿ ಪಡೆದಿದ್ದರೆ ಅಪ್ಪು ಮಾತ್ರ ಎರಡು ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ಪ್ರಶಸ್ತಿ ಪಡೆಯುತ್ತಿರುವುದು ಕೂಡ ವಿಶೇಷ ಹಾಗೂ ಐವತ್ತು ವರ್ಷದೊಳಗೆ ಕರ್ನಾಟಕ ಪಡೆಯುತ್ತಿರುವುದೂ ಸಹ ವಿಶೇಷವೇ.


Click it and Unblock the Notifications











