ರೈತರನ್ನು ಮನಬಂದಂತೆ ನಡೆಸಿಕೊಂಡ ಪೊಲೀಸರ ವರಸೆ ಸರಿ ಇಲ್ಲ: ಶಿವಣ್ಣ
ರೈತರ ವಿಚಾರದಲ್ಲಿ ಯಾವುದೇ ಸರ್ಕಾರ ನಿರ್ಲಕ್ಷ್ಯ ಮಾಡಬಾರದು' ಎಂದು ಕನ್ನಡ ಚಿತ್ರರಂಗದ ಖ್ಯಾತ ನಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರು ಹೇಳಿದರು.
ಮಂಡ್ಯ ನಗರದಲ್ಲಿ ಭಾನುವಾರ (ಮಾರ್ಚ್ 6) ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಶಿವಣ್ಣ ಅವರು, ರೈತರ ವಿಚಾರದಲ್ಲಿ ಸರ್ಕಾರ ಸೂಕ್ತವಾಗಿ ನಡೆದುಕೊಳ್ಳುತ್ತಿಲ್ಲ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.[ಕುಡಿಯುವ ನೀರು ಕೇಳಿದ ರೈತರಿಗೆ ಪೊಲೀಸರ ಲಾಠಿ ಏಟು]

'ಶಾಶ್ವತ ನೀರಾವರಿ ಯೋಜನೆಗಾಗಿ ಹೋರಾಟ ಮಾಡುತ್ತಿದ್ದವರ ಮೇಲೆ ಲಾಠಿಪ್ರಹಾರ ಮಾಡಿದ್ದು ಸರಿಯಲ್ಲ. ಬೇರೆ ವಿಚಾರಗಳ ಬಗ್ಗೆ ಚರ್ಚಿಸುವುದಕ್ಕಿಂತ ರೈತರ ಪ್ರಸ್ತುತ ಸಮಸ್ಯೆಗಳತ್ತ ಗಮನ ಕೊಡಬೇಕು. ಆರೋಪ, ಪ್ರತ್ಯಾರೋಪ ಮಾಡುವುದಕ್ಕಿಂತ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಉತ್ತರ ಕರ್ನಾಟಕದ ಕಳಸಾ-ಬಂಡೂರಿ ಯೋಜನೆ ಜಾರಿ ಹೋರಾಟ ಕೇವಲ ತೋರಿಕೆಗೆ ಸೀಮಿತವಾಗಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಬೃಹತ್ ಹೋರಾಟಕ್ಕೆ ಇಡೀ ಕನ್ನಡ ಚಿತ್ರರಂಗ ಚಿಂತಿಸುತ್ತಿದೆ' ಎಂದು ಈ ಸಂದರ್ಭದಲ್ಲಿ ಹೇಳಿದರು.[ಲಂಡನ್ ಗೆ ಹಾರಲು ಸಜ್ಜಾದ ಶಿವಣ್ಣನ 'ಶಿವಲಿಂಗ']

ಮಂಡ್ಯ ನಗರದ ಸಂಜಯ ಚಿತ್ರಮಂದಿರದಲ್ಲಿ 'ಶಿವಲಿಂಗ' ಸಿನಿಮಾವನ್ನು ವೀಕ್ಷಿಸಿದ ಶಿವಣ್ಣ ಅವರು ಚಿತ್ರದ ಯಶಸ್ಸು ಸಂತಸದ ತಂದಿದೆ. ಇದಕ್ಕೂ ಮೊದಲು 'ಭಜರಂಗಿ' ಹಾಗೂ 'ವಜ್ರಕಾಯ' ಸಿನಿಮಾಗಳು ಹಿಟ್ ಆಗಿದ್ದವು. ಇದರಿಂದ ಸತತ ಮೂರು ಚಿತ್ರಗಳು ಹಿಟ್ ಆಗಿರುವುದರಿಂದ ಮತ್ತೊಮ್ಮೆ 'ಹ್ಯಾಟ್ರಿಕ್ ಹೀರೋ' ಆಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಲಂಡನ್ ನಲ್ಲಿ ಸನ್ಮಾನಿತನಾಗುತ್ತಿರುವುದಕ್ಕೆ ಖುಷಿಯಾಗಿದ್ದೇನೆ: [ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಲಂಡನ್ ನಲ್ಲಿ ಭರ್ಜರಿ ಸನ್ಮಾನ]
ಮಾರ್ಚ್ 19 ರಂದು ಲಂಡನ್ ನಲ್ಲಿ 'ಶಿವಲಿಂಗ' ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ. ಅದೇ ಸಂದರ್ಭದಲ್ಲಿ ಅಲ್ಲಿನ ಕನ್ನಡಿಗರು ಮತ್ತು ಅಭಿಮಾನಿಗಳು ಸನ್ಮಾನ ಮಾಡುತ್ತಿರುವುದು ಬಹಳ ಖುಷಿ ತಂದಿದೆ. ಅಲ್ಲಿನ ಜನರಿಂದ ಸನ್ಮಾನ ಸ್ವೀಕರಿಸುತ್ತಿರುವುದು ನನ್ನ ಸೌಭಾಗ್ಯ ಎಂದು ನಟ ಶಿವರಾಜ್ ಕುಮಾರ್ ಸಂತಸ ವ್ಯಕ್ತಪಡಿಸಿದರು.


Click it and Unblock the Notifications











