'ಹುಟ್ಟಿದರೆ ಕನ್ನಡ ನಾಡಿನಲ್ಲಿಹುಟ್ಟಬೇಕು' ಹಾಡು ಹುಟ್ಟಿದ ರೋಚಕ ಕಥೆ
'ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು' ಈ ಹಾಡು ಕನ್ನಡಿಗರ ಉಸಿರಿನಲ್ಲಿ ಬೆರೆತು ಹೋಗಿದೆ. ಕನ್ನಡ.. ಕರ್ನಾಟಕ.. ಇರುವ ತನಕ ಈ ಹಾಡು ಅಜರಾಮರ.
'ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು' ಹಾಡನ್ನು ಕೇಳಿರದ ಕನ್ನಡಿಗರೇ ಇಲ್ಲವೆನೋ.....ಹಾಗಿದ್ದರೂ, ಅದೇಷ್ಟೋ ಜನರಿಗೆ ಈ ಹಾಡಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಈ ಶ್ರೇಷ್ಠ ಹಾಡು ಹುಟ್ಟಿದ ಹಿಂದೆ ಒಂದು ಕುತೂಹಲಕಾರಿ ಕಥೆ ಇದೆ.
ಡಾ.ರಾಜ್ ಕುಮಾರ್ ಅವರ 'ಆಕಸ್ಮಿಕ' ಚಿತ್ರದ 'ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು' ಹಾಡಿನ ಹಿಂದಿನ ಕಥೆ ಮುಂದಿದೆ ಓದಿ....

'ಆಕಸ್ಮಿಕ' ಚಿತ್ರದಲ್ಲಿ ಇರಲಿಲ್ಲ ಈ ಹಾಡು
'ಆಕಸ್ಮಿಕ' ಚಿತ್ರ ಶುರು ಮಾಡುವಾಗ ಈ ಹಾಡು ಇರಲಿಲ್ಲವಂತೆ. ನಂತರ ರಾಜ್ ಕುಮಾರ್ ಅವರಿಗೆ ನಾದ ಬ್ರಹ್ಮ ಹಂಸಲೇಖ ಅವರು ಕನ್ನಡದ ಬಗ್ಗೆ ಹಾಡೊಂದನ್ನ ಮಾಡಿದರೆ ಚೆನ್ನಾಗಿತ್ತೆ ಎಂಬ ಸಲಹೆ ನೀಡಿದರಂತೆ.

ಡಾ.ರಾಜ್ ಮನೆಯಲ್ಲಿ ಹುಟ್ಟಿದ ಹಾಡು
ಹಂಸಲೇಖ ಹಾಡಿನ ಬಗ್ಗೆ ಮಾತುಕತೆಗೆ ಅಂತ ರಾಜ್ ಕುಮಾರ್ ಅವರ ಮನೆಗೆ ಹೋಗಿದ್ದರು. ಬೆಳ್ಳಗೆ 7 ಗಂಟೆಗೆ ರಾಜ್ ಕುಮಾರ್ ಯೋಗ, ಸ್ನಾನ, ಪೂಜೆ ಮುಗಿಸಿ ಮೆಟ್ಟಲು ಇಳಿದು ಬಂದರಂತೆ. ಬಿಳಿ ಪಂಚೆ ಮತ್ತು ಬಿಳಿ ಶಾರ್ಟ್ ಹಾಕಿ ಮಹಾರಾಜನಂತೆ ಬಂದ ಅವರನ್ನು ಕಂಡು ಹಂಸಲೇಖ 'ಹುಟ್ಟಿದರೆ ಹೀಗೆ ಹುಟ್ಟಬೇಕು' ಅಂತ ಮನಸಿನಲ್ಲಿ ಅಂದುಕೊಂಡರಂತೆ.

ರಾಜ್ ಅವರನ್ನ ನೋಡಿದ ಮೇಲೆ ಬಂದ ಸಾಲು
ರಾಜ್ ಅವರನ್ನು ನೋಡಿ 'ಹುಟ್ಟಿದರೆ ಹೀಗೆ ಹುಟ್ಟಬೇಕು' ಅಂತ ಹಂಸಲೇಖ ಮನಸಿನಲ್ಲಿ ಅಂದುಕೊಂಡಿದ್ದರು. ನಂತರದ ಕ್ಷಣದಲ್ಲಿ ಹಾಡು ಬರೆಯುವಾಗ ಅದೇ ಸಾಲನ್ನು 'ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು' ಅಂತ ಬದಲಿಸಿದರಂತೆ. ಅದು ಎಲ್ಲರಿಗೂ ತುಂಬ ಇಷ್ಟ ಆಯ್ತಂತೆ.

ಪಾರ್ವತಮ್ಮ ಒತ್ತಾಯದಿಂದ ಹುಬ್ಬಳ್ಳಿಯಲ್ಲಿ ಶೂಟಿಂಗ್
ನಂತರ ಪಾರ್ವತಮ್ಮ ಅವರು ಈ ಹಾಡಿನ ಚಿತ್ರೀಕರಣವನ್ನು ಹುಬ್ಬಳ್ಳಿ ಸರ್ಕಲ್ ನಲ್ಲಿಯೇ ಮಾಡಬೇಕು ಎಂದು ಒತ್ತಾಯ ಮಾಡಿ ಮಾಡಿಸಿದರಂತೆ. ಆದರೆ ಅದೇ ಸಮಯದಲ್ಲಿ ಅಲ್ಲಿ ಈದ್ಗಾ ಮೈದಾನ ಗಲಾಟೆ ಜೋರಾಗಿತ್ತು.

ಒಂದು ವರ್ಷ ಕಾದು ಚಿತ್ರೀಕರಣ
ಈದ್ಗಾ ಮೈದಾನ ಗಲಾಟೆ ಮುಗಿಯುವ ಹೊತ್ತಿಗೆ ಒಂದು ವರ್ಷ ಆಯ್ತು. ಈ ಒಂದು ಹಾಡಿನ ಚಿತ್ರೀಕರಣಕ್ಕಾಗಿ ರಾಜ್ ಕುಮಾರ್ ಒಂದು ವರ್ಷ ಕಾದಿದ್ದಾರಂತೆ. ಆ ಬಳಿಕ ಈ ಹಾಡು ಹೀಗೆ ಚಿತ್ರೀಕರಣ ಆಗಬೇಕು ಎಂದು ರಾಜ್ ಕುಮಾರ್ ಅವರೇ ಪ್ಲಾನ್ ಮಾಡಿ ಶೂಟಿಂಗ್ ಮಾಡಿಸಿದರಂತೆ.

ಹಾಡಿನ ಬಗ್ಗೆ
'ಆಕಸ್ಮಿಕ' ಚಿತ್ರದ ಈ ಹಾಡು ಜೂನ್ 10, 1993ರಲ್ಲಿ ಬಿಡುಗಡೆಯಾಗಿತ್ತು. ರಾಜ್ ಕುಮಾರ್ ತಾವೇ ಈ ಹಾಡನ್ನು ಹಾಡಿದ್ದರು. ಚಿತ್ರದ ಎಲ್ಲ ಹಾಡುಗಳಿಗೂ ಹಂಸಲೇಖ ಸಾಹಿತ್ಯ ಬರೆದು ಸಂಗೀತ ನೀಡಿದ್ದಾರೆ.


Click it and Unblock the Notifications











