ಮುಳುಗಿದ ವಿತರಕರಿಗೆ ರಜನಿಕಾಂತ್ ಪುನರ್ಜನ್ಮ ಪ್ರಾಪ್ತಿ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಭಯಂಕರ ಬಜೆಟ್ ಚಿತ್ರ 'ಲಿಂಗಾ' ಬಾಕ್ಸ್ ಆಫೀಸಲ್ಲಿ ಇಂಗುತಿಂದ ಮಂಗನಂತಾಗಿದ್ದು ಗೊತ್ತೇ ಇದೆ. ಈ ಚಿತ್ರವನ್ನು ತಮ್ಮ ತನುಮನಧನ ಅರ್ಪಿಸಿ ಕೊಂಡುಕೊಂಡ ವಿತರಕರು ಈಗ ಬೀದಿಗೆ ಬೀಳುವ ಪರಿಸ್ಥಿತಿ ಉದ್ಭವಿಸಿದೆ.
ಈ ಬಗ್ಗೆ ವಿತರಕರು ಕಳೆದ ಕೆಲಸಮಯದಿಂದ ತಮ್ಮ ಗೋಳನ್ನು ತೋಡಿಕೊಳ್ಳುತ್ತಲೇ ಇದ್ದಾರೆ. ಆಮರಣಾಂತ ಉಪವಾಸಕ್ಕೂ ಸಿದ್ಧವಾಗಿದ್ದಾರೆ. ಈ ಬಗ್ಗೆ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ತಮಗೇನೂ ಹೇಳಿಕೊಳ್ಳುವಷ್ಟು ಲಾಭ ಬಂದಿಲ್ಲ, ವಿತರಕರಿಗೆ ನಷ್ಟಪರಿಹಾರ ತುಂಬಿಕೊಡಲು ತಮ್ಮಿಂದಾಗದು ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದಾರೆ. ['ಲಿಂಗಾ' ವಿಮರ್ಶೆ]
ಇದೆಲ್ಲವನ್ನೂ ಮೌನವಾಗಿ ಗಮನಿಸುತ್ತಿದ್ದ ರಜನಿಕಾಂತ್ ಇದೀಗ ತಮ್ಮ ಮೌನ ಮುರಿದಿದ್ದಾರೆ. ವಿತರಕರ ಸಮಸ್ಯೆಗೆ ಇದೀಗ ಅವರು ಸ್ಪಂದಿಸುತ್ತಿದ್ದಾರೆ. ಈ ಹಿಂದೆ ಅವರ ಬಾಬಾ, ಕುಚೇಲನ್ ಚಿತ್ರಗಳು ಇದೇ ರೀತಿ ಟೈಟಾನಿಕ್ ಹಡಗಿನಂತೆ ಮುಳುಗಿ ವಿತರಕರು ಅಂಗೈನಲ್ಲಿ ತಮ್ಮ ಜೀವ ಹಿಡಿದುಕೊಂಡಿದ್ದರು. ಆಗ ರಜನಿ ನಷ್ಟ ಪರಿಹಾರ ತುಂಬಿ ಅವರ ಜೀವ ಉಳಿಸಿದ್ದರು.

ಆಗ ತಿರುಪ್ಪೂರ್ ಸುಬ್ರಮಣಿಯಂ ಎಂಬ ವಿತರಕರೊಬ್ಬರ ಸಹಾಯ ಪಡೆದು ಯಾರ್ಯಾರಿಗೆ ಎಷ್ಟೆಷ್ಟು ಪರಿಹಾರ ಕೊಡಬೇಕು ಎಂಬ ಬಗ್ಗೆ ವರದಿಯನ್ನು ತರಿಸಿಕೊಂಡಿದ್ದರು. ಅದರಂತೆ ನಷ್ಟ ತುಂಬಿಕೊಟ್ಟಿದ್ದರು. ರಜನಿಗೆ ಸುಬ್ರಮಣಿಯಂ ಬಹಳ ಆತ್ಮೀಯ ಹಾಗೂ ನಂಬಿಕೆಯ ವ್ಯಕ್ತಿ.
ಈಗ ಅದೇ ವ್ಯಕ್ತಿಗೆ ರಜನಿ ಕಡೆಯಿಂದ ಫೋನ್ ಹೋಗಿದೆ. ಸುಬ್ರಮಣಿಯಂ ಸದ್ಯಕ್ಕೆ 'ಲಿಂಗಾ' ಚಿತ್ರದ ನಷ್ಟದ ಬಾಬತ್ತನ್ನು ಲೆಕ್ಕ ಹಾಕುವಲ್ಲಿ ಬಿಜಿಯಾಗಿದ್ದಾರಂತೆ. ಸ್ವತಃ ತಮ್ಮ ಕೈಯಾರೆ ರಜನಿ ನಷ್ಟ ತುಂಬಿಕೊಡುತ್ತಾರಾ ಅಥವಾ ನಿರ್ಮಾಪಕರ ಕೈಯಲ್ಲಿ ಕೊಡಿಸುತ್ತಾರಾ ಎಂಬುದು ಸದ್ಯಕ್ಕೆ ಗೊತ್ತಾಗುತ್ತಿಲ್ಲ.
'ಲಿಂಗಾ' ಚಿತ್ರ ಬಾಕ್ಸ್ ಆಫೀಸಲ್ಲಿ ಲಾಗಾ ಹೊಡಿದಿದೆ ಎಂಬ ಸುದ್ದಿ ಬಂದಾಗ, ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸ್ಫೋಟಕ ಸುದ್ದಿಯನ್ನು ಬಹಿರಂಗ ಮಾಡಿದ್ದನ್ನು ಓದಿಯೇ ಇರುತ್ತೀರಾ 2016ರ ಚುನಾವಣೆಯಲ್ಲಿ ರಜನಿಕಾಂತ್ ಸ್ಪರ್ಧಿಸದಂತೆ ಮಾಡಿರುವ ಹುನ್ನಾರ ಇದು. ಇದಕ್ಕಾಗಿ ವಿತರಕರ ಬಾಯಲ್ಲಿ ಸುಳ್ಳು ಹೇಳಿಸುತ್ತಿದ್ದಾರೆ ಎಂದಿದ್ದರು ರಾಕ್ ಲೈನ್.


Click it and Unblock the Notifications











