ಅಕಾಲಿಕ ಮೃತ್ಯು ತಡೆ ಕೇಂದ್ರಕ್ಕೆ ಪುನೀತ್ ರಾಜ್ಕುಮಾರ್ ಹೆಸರು
ಅಕಾಲಿಕ ಮೃತ್ಯು ತಡೆಯುವ ಸಲುವಾಗಿ ಹಾಗೂ ಸಾಂಕ್ರಾಮಿಕ ರೋಗಗಳಿಗೆ ಔಷಧಿ ಕಂಡು ಹಿಡಿಯುವ ಸಮುವಾಗಿ 'ಧೀರ್ಘಾಯುಷ್ಯ' ಕೇಂದ್ರವನ್ನು ಎಲೆಕ್ರಾನಿಕ್ ಸಿಟಿಯಲ್ಲಿ ಸ್ಥಾಪಿಸಲಾಗುತ್ತಿದ್ದು ಅದಕ್ಕೆ ಪುನೀತ್ ರಾಜ್ಕುಮಾರ್ ಎಂದು ಹೆಸರಿಡಲಾಗುವುದು ಎಂದು ಸಚಿವ ಅಶ್ವತ್ಥನಾರಾಯಣ್ ಹೇಳಿದ್ದಾರೆ.
ಐಟಿ-ಬಿಟಿ ಇಲಾಖೆಯ ಪ್ರತಿಷ್ಠಿತ ಕಾರ್ಯಕ್ರಮವಾದ 'ಬೆಂಗಳೂರು ಬಯೋ-ಇನ್ನೋವೇಶನ್ ಸೆಂಟರ್' (ಬಿಬಿಸಿ)ಯ ಬೆಂಬಲದ ಮೂಲಕ ವಿವಿಧ ನವೋದ್ಯಮಗಳು ಅಭಿವೃದ್ಧಿಪಡಿಸಿರುವ 6 ಜೀವವಿಜ್ಞಾನ ಸಾಧನಗಳನ್ನು ಅವರು ಎಲೆಕ್ಟ್ರಾನಿಕ್ ಸಿಟಿಯ ಹೆಲಿಕ್ಸ್ ಬಿಟಿ ಪಾರ್ಕ್ನಲ್ಲಿ ಉದ್ಘಾಟಿಸಿದ ಬಳಿಕ ಡಾ. ಅಶ್ವಥ್ ನಾರಾಯಣ ಮೇಲಿನಂತೆ ಮಾತನಾಡಿದ್ದಾರೆ.
'ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಲು ರಕ್ತ, ಎಂಜಲು, ಮಲ, ಮೂತ್ರ, ಕಫ ಇತ್ಯಾದಿಗಳನ್ನು ಸಂಗ್ರಹಿಸಲು ಸೂಕ್ತ ವ್ಯವಸ್ಥೆ ಬೇಕಾಗಿದೆ. ಇದಕ್ಕಾಗಿ, ಬಿಬಿಸಿ ಪ್ರಯತ್ನದಡಿಯಲ್ಲಿ ದೇಶದ ಮೊಟ್ಟಮೊದಲ ಬಯೋ-ಬ್ಯಾಂಕಿಂಗ್ ಮತ್ತು ಸಂಗ್ರಹ ಮಾದರಿಗಳ ಕೋಶವನ್ನು ಕೂಡ ಸ್ಥಾಪಿಸಲಾಗುವುದು. ಇದರಿಂದ ಇಡೀ ರಾಜ್ಯದಲ್ಲಿ ರೋಗನಿಧಾನ ಶಾಸ್ತ್ರವು ಮತ್ತಷ್ಟು ವೈಜ್ಞಾನಿಕವಾಗಿ ನಡೆಯಲಿದೆ. ಈ ಮೂರು ಕೇಂದ್ರಗಳನ್ನು ಎಲೆಕ್ಟ್ರಾನಿಕ್ ಸಿಟಿಯ ಬಿಬಿಸಿಯಲ್ಲಿಯೇ ಸ್ಥಾಪಿಸಲಾಗುವುದು' ಎಂದು ಡಾ. ಅಶ್ವಥ್ ನಾರಾಯಣ ವಿವರಿಸಿದರು.

ಬಿಬಿಸಿ ಮೂಲಕ ಇದುವರೆಗೂ 150ಕ್ಕೂ ಹೆಚ್ಚು ನವೋದ್ಯಮಗಳು ಮತ್ತು ವೈಯಕ್ತಿಕ ಉದ್ಯಮಿಗಳಿಗೆ ಸರಕಾರದ ನಾನಾ ಯೋಜನೆಗಳ ಮೂಲಕ ಕ್ರಿಯಾತ್ಮಕ ರಚನಾತ್ಮಕ ಬೆಂಬಲ ನೀಡಲಾಗುತ್ತಿದೆ. ಸದ್ಯಕ್ಕೆ 50 ನವೋದ್ಯಮಗಳಿಗೆ ಇದರ ಮುಖಾಂತರ ನೆರವನ್ನು ಒದಗಿಸಲಾಗುತ್ತಿದೆ. ಅಲ್ಲದೆ, ಕೋವಿಡ್ ಸಾಂಕ್ರಾಮಿಕದ ಪರಿಣಾಮಕಾರಿ ನಿರ್ವಹಣೆಗೆ ನೆರವು ನೀಡುವಂತಹ 22 ಉತ್ಪನ್ನಗಳನ್ನು ಕೇವಲ ಎರಡು ವರ್ಷಗಳಲ್ಲಿ ಸಾರ್ವಜನಿಕ ಉಪಯೋಗಕ್ಕೆ ಬಿಡುಗಡೆ ಮಾಡಲಾಗಿದೆ. ಬಿಬಿಸಿ ಸಹಾಯ ಪಡೆದಿರುವ ಕಂಪನಿಗಳ ಮೌಲ್ಯವು 800 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ. ಇದರ ಜೊತೆಗೆ, 1,000ಕ್ಕೂ ಹೆಚ್ಚು ಉದ್ಯೋಗಗಳು ಕೂಡ ಇಲ್ಲಿ ಸೃಷ್ಟಿಯಾಗಿವೆ. ಜೀವವಿಜ್ಞಾನಗಳ ಅಡಿ ಬರುವ ಆರೋಗ್ಯ ರಕ್ಷಣೆ, ಬಯೋಫಾರ್ಮಾ, ಕೃಷಿ, ಆಹಾರ ಮತ್ತು ಪೌಷ್ಟಿಕತೆ, ಔದ್ಯಮಿಕ ಮತ್ತು ಪರಿಸರ ಜೈವಿಕ ತಂತ್ರಜ್ಞಾನ ಮತ್ತು ಮೆಡ್-ಟೆಕ್ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಉದ್ಯಮಿಗಳ ಅಗತ್ಯಗಳನ್ನು ಗಮನಿಸಿ, ಅವುಗಳನ್ನು ಸುಗಮವಾಗಿ ಪೂರೈಸಲು ಈ ಕೇಂದ್ರದ ಮೂಲಕ ಮಹತ್ತ್ವದ ನೆರವು ನೀಡಲಾಗುತ್ತಿದೆ ಎಂದರು.
ಪುನೀತ್ ರಾಜ್ಕುಮಾರ್ ಅಕಾಲಿಕ ಮರಣ ಹೊಂದಿದ ಕಾರಣ, ಧೀರ್ಘಾಯುಷ್ಯ ಸಂಶೋಧನಾ ಕೇಂದ್ರಕ್ಕೆ ಅವರದ್ದೇ ಹೆಸರನ್ನು ಇಡಲು ಸಚಿವರು ಮುಂದಾಗಿದ್ದಾರೆ. ಈಗಾಗಲೇ ಬೆಂಗಳೂರಿನ ಉದ್ದನೆಯ ರಸ್ತೆಗೆ ಬಿಬಿಎಂಪಿಯು ಅಧಿಕೃತವಾಗಿ ಪುನೀತ್ ರಾಜ್ಕುಮಾರ್ ಹೆಸರು ಇಟ್ಟು ಗೌರವ ಸೂಚಿಸಿದೆ.


Click it and Unblock the Notifications











