ಮಂಡ್ಯದ ಕರ್ಣನ ಕಥೆಗೆ ಅರ್ಧ ಶತಕ ಸಂಭ್ರಮ
ಬೊಗಸೆ ಕಂಗಳ ಆಕರ್ಷಕ ನಟ ಸತೀಶ್ ನೀನಾಸಂ. ತನ್ನದೇ ಆದಂತಹ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಂಡ ಪ್ರತಿಭಾನ್ವಿತ ನಟರಲ್ಲಿ ಒಬ್ಬರು. ಇದೀಗ ಅವರ 'ಲವ್ ಇನ್ ಮಂಡ್ಯ' ಚಿತ್ರ ಅರ್ಧ ಶತಕ ಪೂರೈಸಿದೆ. ಕ್ವಾಟ್ಲೆ ಸತೀಶ ಚಿತ್ರದ ಬಳಿಕ ಅವರು ಪ್ರೇಕ್ಷಕರ ಮುಂದೆ ಬಂದ ಚಿತ್ರವಿದು.
ಸತೀಶ ಹಾಗೂ ಸಿಂಧು ಲೋಕನಾಥ್ ಜನಪ್ರಿಯ ಜೋಡಿಯ ಈ ಚಿತ್ರ ಭರ್ತಿ ಅರ್ಧ ಸೆಂಚುರಿ ಪೂರ್ಣಗೊಳಿಸಿದೆ. ಈ ಮೂಲಕ ನೀನಾಸಂ ಸತೀಶ್ ಅವರಿಗೆ ಮತ್ತೊಂದು ಗೆಲುವು ದಾಖಲಿಸಿದ ಸಂಭ್ರಮ. ಜೊತೆಗೆ ಚಿತ್ರದ ನಿರ್ದೇಶಕ ಅರಸು ಅಂತಾರೆ ಅವರಿಗೆ ಚೊಚ್ಚಲ ಚಿತ್ರದ ಮೊದಲ ಗೆಲುವಿನ ಖುಷಿ. [ಲವ್ ಇನ್ ಮಂಡ್ಯ ಚಿತ್ರ ವಿಮರ್ಶೆ]

ಇತ್ತೀಚೆಗೆ ಈ ಚಿತ್ರದ ಗೆಲುವಿನ ಸಂಭ್ರಮವನ್ನು ಮಲ್ಲೇಶ್ವರಂನ ರೇಣುಕಾಂಬ ಚಿತ್ರಮಂದಿರದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಚಿತ್ರತಂಡಕ್ಕೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.
ಗೀತ ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಅರಸು ಅಂತಾರೆ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ಇದು. ಚಿತ್ರದಲ್ಲಿ ತಕ್ಕಮಟ್ಟಿಗೆ ಮಂಡ್ಯ ಭಾಷೆಯ ಸೊಗಡಿದೆ, ಪಡ್ಡೆಗಳ ಮೈಯಲ್ಲಿ ಕರೆಂಟ್ ಹರಿಸುವ ಹಾಡಿದೆ, ಕಚಗುಳಿ ಇಡುವ ಸನ್ನಿವೇಶಗಳಿವೆ, ತಂಪೆರೆವ ಛಾಯಾಗ್ರಹಣವೂ ಇದೆ.
ಇದೊಂದು ಹದಿಹರೆಯದ ಮನಸುಗಳ ಪ್ರೇಮಕಥೆ. ಕೇಬಲ್ ಆಪರೇಟರ್ ಕರ್ಣನೇ (ನೀನಾಸಂ ಸತೀಶ್) ಚಿತ್ರದ ಹೀರೋ. ಮನೆಮನೆಗೆ ಕೇಬಲ್ ಕನೆಕ್ಷನ್ ಕೊಡುತ್ತಾ ಸುಸು ಯಾನೆ ಸುಷ್ಮಾ (ಸಿಂಧು ಲೋಕನಾಥ್) ಜೊತೆಗೆ ಲವ್ ಕನೆಕ್ಷನ್ ಆಗುತ್ತದೆ. ಕಡೆಗೆ ಇಬ್ಬರೂ ಗುಟ್ಟಾಗಿ ಮದುವೆಯಾಗಿ ಹೊಸೂರಿನಲ್ಲಿ ತಲೆಮರೆಸಿಕೊಳ್ಳುವ ಕಥೆಯನ್ನು ಒಳಗೊಂಡಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











