ಬಿಳಿಗಿರಿ ರಂಗಯ್ಯನ ಬೂಟಾಟಿಕೆ, ಬಲಿತನ ಮನೆಗೆ ದಲಿತ ಹೋಗಲಿ: ಹಂಸಲೇಖ
ಸಂಗೀತ ಮಾಂತ್ರಿಕ ಹಂಸಲೇಖ ಭಗದ್ಗೀತೆ, ಧರ್ಮದ ಹೇರಿಕೆ, ಪೇಜಾವರ ಶ್ರೀ, ದಲಿತ ಮನೆ ವಾಸ ಇನ್ನಿತರೆ ವಿಚಾರಗಳ ಬಗ್ಗೆ ಮಾತನಾಡಿದ್ದು, ಹಂಸಲೇಖರ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿವೆ.
ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಹಂಸಲೇಖ, ಬಲಿತವರು (ಮೇಲ್ಜಾತಿಯವರು) ದಲಿತರ ಮನೆಗೆ ಭೇಟಿ ನೀಡಿ ಊಟ ಮಾಡುವುದರಲ್ಲಿ ಯಾವ ವಿಶೇಷತೆಯೂ ಇಲ್ಲ. ಬಲಿತವರು ದಲಿತರನ್ನು ಅವರ ಮನೆಗಳಿಗೆ ಕರೆದುಕೊಂಡು ಹೋಗಿ ಊಟ ಹಾಕಲಿ, ಲೋಟದಲ್ಲಿ ನೀರು ಕೊಟ್ಟು ಆ ಲೋಟವನ್ನು ತಾವು ತೊಳೆಯಲಿ'' ಎಂದಿದ್ದಾರೆ.
ದಲಿತರ ಮನೆಗೆ ಬಲಿತವರು ಹೋಗುವುದು ಡೋಂಗಿತನ ಎಂದಿರುವ ಹಂಸಲೇಖ. ಬಿಳಿಗಿರಿ ರಂಗನಾಥಸ್ವಾಮಿ ತಾನು ಸೋಲಿಗರ ಮನೆಗೆ ಬಂದು ಆ ಹೆಣ್ಣುಮಗಳೊಂದಿಗೆ ಕಾಲ ಕಳೆಯುವುದು ದೊಡ್ಡದೇ? ಅದೇ ಸೋಲಿಗರ ಹೆಣ್ಣು ಮಗಳನ್ನು ಕರೆದುಕೊಂಡು ಹೋಗಿ ತನ್ನ ದೇವರ ಮನೆಯಲ್ಲಿ ಕೂರಿಸಿದಿದ್ದರೆ ಅದು ಬಿಳಿ ರಂಗಯ್ಯನ ತಾಕತ್ತು. ಬೆಳಗಾಗುವ ಮುಂಚೆ ಬಿಳಿಗಿರಿ ರಂಗಯ್ಯ ಸೋಲಿಗರ ಹೆಣ್ಣು ಮಗಳ ಮನೆಗೆ ಹೋಗಿ ಸಂಸಾರ ಮಾಡಿ ಬೆಳಗಾಗುವ ವೇಳೆಗೆ ಹೋಗಿ ದೇವಸ್ಥಾನದಲ್ಲಿ ಕಲ್ಲಾಗಿಬಿಡುತ್ತಾನಂತೆ. ಅದು ನಾಟಕ, ಅದು ಬೂಟಾಟಿಕೆ'' ಎಂದು ಕಟುವಾಗಿ ಟೀಕಿಸಿದ್ದಾರೆ ಹಂಸಲೇಖ.

''ಭಗವದ್ಗೀತೆ ನಮಗೆ ಎಷ್ಟು ಸಹಾಯ ಮಾಡಿದೆಯೋ ಗೊತ್ತಿಲ್ಲ, ಆದರೆ ಅಂಬೇಡ್ಕರ್ ಕೊಟ್ಟ ಬಡವರ ಗೀತೆ ಸಂವಿಧಾನ ನಮ್ಮನ್ನು ಸಾಂಸ್ಕೃತಿಕ ಗುಲಾಮಗಿರಿಯಿಂದ ಹೊರಗೆ ತಂದಿದೆ ಎಂದಿದ್ದಾರೆ. ನಮ್ಮ ಡೆಮಾಕ್ರಸಿ (ಪ್ರಜಾಪ್ರಭುತ್ವ) ಧರ್ಮಾಕ್ರಸಿ ಆಗುತ್ತದೆಂಬ ಆತಂಕ ಜನಸಾಮಾನ್ಯರಲ್ಲಿ ಇದೆ. ಹಾಗೇನಾದರೂ ಆದರೆ ನಾವು ಮತ್ತೆ ಹಳೆಯ ಕಾಲಕ್ಕೆ ಜಾರುತ್ತೇವೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸಂಪೂರ್ಣ ನಾಶವಾಗುವುದಿಲ್ಲ ಎಂಬ ನಂಬಿಕೆ ಇದೆ. ಪ್ರಜಾಪ್ರಭುತ್ವ ಉಳಿಸಲು ನಾವೆಲ್ಲ ಎಚ್ಚರದಿಂದ ಕೆಲಸ ಮಾಡಬೇಕು'' ಎಂದಿದ್ದಾರೆ ಹಂಸಲೇಖ.
''ಭಾರತದಲ್ಲಿ ಈಗ ಹಲವು ವಿಧದ ಬೂಟಾಟಿಕೆಗಳು ನಡೆಯುತ್ತಿವೆ ಎಂದ ಹಂಸಲೇಖ, ಅಂಬೇಡ್ಕರ್ ಬಗ್ಗೆ ಮಾತನಾಡುತ್ತಾ, 'ಮಹಾನಾಯಕ' ಧಾರಾವಾಹಿ ಹಲವರನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ಸ್ವತಃ ನನ್ನ ಪತ್ನಿ ಸರಿಗಮಪ ಬಿಟ್ಟರೆ 'ಮಹಾನಾಯಕ' ಧಾರಾವಾಹಿಯನ್ನು ಮಾತ್ರವೇ ನೋಡುತ್ತಾರೆ. 'ಅಂಬೇಡ್ಕರ್ ಎಂಬುದು ಒಂದು ಅವತಾರ, ಅವರನ್ನು ನಾವು ನೋಡಲಿಲ್ಲವಲ್ಲಾ, ಅವರನ್ನು ನಾವು ಅರ್ಥ ಮಾಡಿಕೊಳ್ಳಲಿಲ್ಲವಲ್ಲಾ ಎಂದು ಪರಿತಪಿಸುತ್ತಾರೆ. ಅವರ ಮನಸೆಲ್ಲಾ ಅಂಬೇಡ್ಕರ್ ವ್ಯಾಪಿಸಿಕೊಂಡುಬಿಟ್ಟಿದ್ದಾರೆ'' ಎಂದರು ಹಂಸಲೇಖ.


Click it and Unblock the Notifications











