ಮತ್ತೆ ಅಖಾಡಕ್ಕಿಳಿದ ಮದಗಜ: ಕೊನೆಯ ಹಂತದ ಶೂಟಿಂಗ್ ಶುರು
ಕೊರೊನಾ ವೈರಸ್ ಎರಡನೇ ಅಲೆ ಭೀತಿಯಿಂದ ಬ್ರೇಕ್ನಲ್ಲಿದ್ದ 'ಮದಗಜ' ಚಿತ್ರತಂಡ ಈಗ ಅಖಾಡಕ್ಕೆ ಧುಮುಕುತ್ತಿದೆ. ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ್ದ ಚಿತ್ರತಂಡ ಕೊನೆಯ ಹಂತದ ಕೆಲವು ದೃಶ್ಯಗಳು ಮಾತ್ರ ಬಾಕಿ ಉಳಿಸಿಕೊಂಡಿದ್ದರು.
ಇದೀಗ, ಲಾಕ್ಡೌನ್ ತೆರವುಗೊಳಿಸಿದ ಬಳಿಕ ಅಂತಿಮ ಶೆಡ್ಯೂಲ್ಗೆ ಚಾಲನೆ ಕೊಟ್ಟಿದ್ದಾರೆ. ಜುಲೈ 22ರಿಂದ 'ಮದಗಜ' ಚಿತ್ರೀಕರಣ ಆರಂಭವಾಗಿದೆ. ಈ ಬಗ್ಗೆ ನಿರ್ದೇಶಕ ಮಹೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
''ಮದಗಜ ನ ಕೊನೆ ಹಂತದ ಚಿತ್ರೀಕರಣ ಇಂದಿನಿಂದ ಪ್ರಾರಂಭ. ಪ್ರಯತ್ನ ನಂದು ಫಲ ನಿಂದು ದೇವರೇ'' ಎಂದು ಫೋಟೋ ಹಂಚಿಕೊಂಡಿದ್ದಾರೆ. ಅಂದ್ಹಾಗೆ, ಈ ಸಿನಿಮಾಗೆ ಬಂಡವಾಳ ಹಾಕಿರುವುದು 'ರಾಬರ್ಟ್' ನಿರ್ಮಾಪಕ ಉಮಾಪತಿ ಶ್ರೀನಿವಾಸ್.

ಕಳೆದ ಹತ್ತು ದಿನಗಳ ಹಿಂದೆಯಿಂದ 25 ಕೋಟಿ ಲೋನ್ ವಿಚಾರದಲ್ಲಿ ಉಮಾಪತಿ ಹೆಸರು ತಳುಕುಹಾಕಿಕೊಂಡಿತ್ತು. ಈ ವಿವಾದ ತಣ್ಣಗಾಗುತ್ತಿದ್ದಂತೆ ಮದಗಜ ಕೆಲಸ ಆರಂಭಿಸಿದ್ದಾರೆ.
'ಮದಗಜ' ಸಿನಿಮಾ ಪಕ್ಕಾ ಫ್ಯಾಮಿಲಿ ಆಕ್ಷನ್ ಡ್ರಾಮಾ ಆಗಿದ್ದು, ಶ್ರೀಮುರಳಿಗೆ ಆಶಿಕಾ ರಂಗನಾಥ್ ಜೋಡಿಯಾಗಿದ್ದಾರೆ. ತೆಲುಗು ನಟ ಜಗಪತಿ ಬಾಬು ಪ್ರಮುಖ ಖಳನಾಯಕನ ಪಾತ್ರ ನಿರ್ವಹಿಸುತ್ತಿದ್ದಾರೆ. ಸುಮಾರು 20 ವರ್ಷದ ನಂತರ ದಕ್ಷಿಣ ಭಾರತದ ಖ್ಯಾತ ನಟಿ ದೇವಯಾನಿ ಕನ್ನಡ ಚಿತ್ರರಂಗಕ್ಕೆ ಮದಗಜ ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ್ದಾರೆ.
ರವಿ ಬಸ್ರೂರು ಸಂಗೀತ ನಿರ್ದೇಶನವಿದ್ದು, ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಮದಗಜ ಸಿನಿಮಾ ರಿಲೀಸ್ ಆಗುತ್ತಿದೆ. ಅದಾಗಲೇ ಮೂರು ಭಾಷೆಯಲ್ಲಿ ಟೀಸರ್ ರಿಲೀಸ್ ಆಗಿದ್ದು, ಸೌತ್ ಇಂಡಿಯಾದಲ್ಲಿ ಸದ್ದು ಮಾಡ್ತಿದೆ.


Click it and Unblock the Notifications











