ಸೆನ್ಸಾರ್ ಮಂಡಳಿ ನಾಗರಾಜ್ ವಿರುದ್ಧ ತನಿಖೆಗೆ ಆದೇಶ

ಈ ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕ ಮದನ್ ಪಟೇಲ್, ಈ ಚಿತ್ರ ಯಾರಿಗೂ ಸಂಬಂಧಿಸಿದ್ದಲ್ಲ. ಸಮಾಜಕ್ಕೆ ಕೇಡು ಬಯಸಿದವರ ವಿರುದ್ಧ ಸಂದೇಶ ಸಾರಲಿರುವ ಸಿನಿಮಾ ಎಂದು ಮುಹೂರ್ತ ಸಂದರ್ಭದಲ್ಲಿ ಹೇಳಿಕೊಂಡಿದ್ದರು. ಆದರೆ ನಂತರದ ದಿನಗಳಲ್ಲಿ ಅವರ ಮಾತಿನ ವರಸೆಯೇ ಬದಲಾಯ್ತು.
ಅದು ಸ್ವಾಮಿ ನಿತ್ಯಾನಂದನಿಗೆ ಸಂಬಂಧಿಸಿದ ಸಿನಿಮಾ. ಹೀಗಾಗಿ ಚಿತ್ರೀಕರಣಕ್ಕೆ ಅಡ್ಡಿಯಾಗುತ್ತಿದೆ ಎಂದು ಒಂದಷ್ಟು ದಿನ ಮದನ್ ಪಟೇಲ್ ಪ್ರಚಾರ ಗಿಟ್ಟಿಸಿ ಕೊಂಡಿದ್ದಂತೂ ಹೌದು. ಅದಾದ ನಂತರ ಎಲ್ಲಾ ಅಡೆತಡೆಗಳನ್ನೂ ದಾಟಿ ಶೂಟಿಂಗ್ ಮುಗಿಸಿ ಪ್ರಾದೇಶಿಕ ಸೆನ್ಸಾರ್ ಮಂಡಳಿ ಮುಂದೆ ಚಿತ್ರ ಕೊಂಡೊಯ್ದರು.
ಶುರುವಾಯಿತು ನೋಡಿ ಪ್ರಾಬ್ಲಮ್ ಅಲ್ಲಿಂದ.. ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧ್ಯಕ್ಷ ಕೆ.ನಾಗರಾಜ್ ಚಿತ್ರಕ್ಕೆ ಸರ್ಟಿಫಿಕೇಟ್ ನೀಡಲು ಸುತರಾಂ ನಿರಾಕರಿಸಿದರು. ಇದು ಸಮಾಜದ ವ್ಯಕ್ತಿಯೊಬ್ಬರ ಮೇಲೆ ಚಿತ್ರೀಕರಣವಾಗಿರುವುದರಿಂದ ಸರ್ಟಿಫಿಕೇಟ್ ನೀಡಲು ಆಗುವುದಿಲ್ಲ ಎನ್ನುವುದು ಅವರ ನಿಲುವು.
ನನ್ನ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ನಿತ್ಯಾನಂದ ದಾವೆ ಹೂಡುವಂತೆ ನಾಗರಾಜ್ ನೋಡಿಕೊಂಡರು ಎಂದು ಮದನ್ ಪಟೇಲ್ ಆರೋಪಿಸುತ್ತಿದ್ದಾರೆ. ಈ ವಿಚಾರವಾಗಿ ಮದನ್ 27-09-2012ರಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಮಂತ್ರಿಗಳಿಗೆ ದೂರು ನೀಡಿದ್ದರು.
ಕೆ.ನಾಗರಾಜ್ ಸತ್ಯಾನಂದ ಚಿತ್ರಕ್ಕೆ ಸಂಬಂಧಿಸಿದಂತೆ ತಮ್ಮ ಕಾರ್ಯವ್ಯಾಪ್ತಿ ಮೀರಿ ಅಧಿಕಾರ ಚಲಾಯಿಸಿದ್ದಾರೆ ಎಂದು ಮದನ್ ಆರೋಪಿಸಿದ್ದರು. ಮದನ್ ಪಟೇಲ್ ದೂರನ್ನು ಪರಿಶೀಲಿಸಿದ ಇಲಾಖೆಯ ರಂಜನ್ ಪಿ.ಠಾಕೂರ್ ಕೆ.ನಾಗರಾಜ್ ವಿರುದ್ದ ತನಿಖೆಗೆ ಆದೇಶ ನೀಡಿದ್ದಾರೆ.
ಸತ್ಯಾನಂದ ಚಿತ್ರಕ್ಕೆ ಕೋರ್ಟಿನಿಂದ ಬಿಡುಗಡೆ ಆದೇಶ ಬಂದ ತನಿಖೆ ಶುರು ಮಾಡಲಾಗುವುದು ಎಂದು ಠಾಕೂರ್ ತಿಳಿಸಿದ್ದಾರೆಂದು ಮದನ್ ಪಟೇಲ್ ತಿಳಿಸಿದ್ದಾರೆ.
ತೆಲುಗಿನ ಸ್ವಾಮಿ ಸತ್ಯಾನಂದ' ಚಿತ್ರಕ್ಕೆ ಆಂಧ್ರ ಪ್ರಾದೇಶಿಕ ಸೆನ್ಸಾರ್ ಮಂಡಳಿ ಈಗಾಗಲೇ ಸರ್ಟಿಫಿಕೇಟ್ ನೀಡಿದೆ.
ಸತ್ಯಾನಂದ ಚಿತ್ರದ ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ಕಿಸಿ


Click it and Unblock the Notifications











