ಅಲ್ಲಿ ಮಹೇಶ್ ಬಾಬು, ಇಲ್ಲಿ ದರ್ಶನ್ ಮತ್ತು ಶಿವಣ್ಣ
Recommended Video
ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಮಹರ್ಷಿ ಸಿನಿಮಾ ಕಳೆದ ವಾರ ತೆರೆಕಂಡಿದ್ದು, ಎಲ್ಲೆಡೆ ಭರ್ಜರಿ ಸದ್ದು ಮಾಡ್ತಿದೆ. ಸಿನಿಮಾ ತುಂಬಾ ಚೆನ್ನಾಗಿದೆ, ಇಂದಿನ ಜನಾಂಗಕ್ಕೆ ಈ ಸಿನಿಮಾ ಸ್ಫೂರ್ತಿಯಾಗಿದೆ ಎಂದು ಮಾತುಗಳು ಕೇಳಿಬರುತ್ತಿದೆ.
ವಿಶೇಷ ಅಂದ್ರೆ, ಮಹರ್ಷಿ ಸಿನಿಮಾದಲ್ಲಿ ತೋರಿಸಿರುವ 'ವೀಕೆಂಡ್ ಫಾರ್ಮಿಂಗ್' ಪರಿಕಲ್ಪನೆಗೆ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ವಾರಾಂತ್ಯದಲ್ಲಿ ಪಾರ್ಟಿ, ಪಬ್ ಅಂತೂ ಸುತ್ತಾಡುವ ಬದಲು ವ್ಯವಸಾಯ ಮಾಡಿ, ಶಾಲೆಯಲ್ಲಿ ಕೃಷಿ ಎಂದೇ ಒಂದು ವಿಷಯ ಹೇಳಿಕೊಡಿ ಎಂಬ ಸಂದೇಶ ಸಮಾಜಕ್ಕೆ ಮಾದರಿಯಾಗಿದೆ.
ರೈತರ, ಜನಸಾಮಾನ್ಯರ, ಹಳ್ಳಿಗಳ ಅಭಿವೃದ್ದಿ ಬಗ್ಗೆ ಮಹೇಶ್ ಬಾಬು ಸಿನಿಮಾಗಳಲ್ಲಿ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಶ್ರೀಮಂತಡು, ಭರತ್ ಅನೇ ನೇನು ಈಗ ಮಹರ್ಷಿ. ಈ ರೀತಿ ಚಿತ್ರಗಳು ಕನ್ನಡದಲ್ಲೂ ಇದೆ. ಕನ್ನಡ ನಟರು ಈ ರೀತಿ ಸಿನಿಮಾ ಮಾಡಬಲ್ಲರು, ಮಾಡಿದ್ದಾರೆ ಕೂಡ....ಮುಂದೆ ಓದಿ.....

ಸನ್ ಆಫ್ ಬಂಗಾರದ ಮನುಷ್ಯ
ಇತ್ತೀಚಿನ ದಿನದಲ್ಲಿ ರೈತರ ಬಗ್ಗೆ ಅವರ ಸಮಸ್ಯೆಗಳ ಬಗ್ಗೆ ಮತ್ತು ಅದನ್ನ ಹೇಗೆ ಬಗೆಹರಿಸಬೇಕು ಎಂಬುದರ ಕುರಿತು ಬಹಳ ಅಚ್ಚುಕಟ್ಟಾಗಿ ತೋರಿಸಿದ್ದ ಸಿನಿಮಾ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ. ಶಿವರಾಜ್ ಕುಮಾರ್ ನಟನೆಯ ಈ ಚಿತ್ರವನ್ನ ನೋಡಿದ ಪ್ರತಿಯೊಬ್ಬರು ಇದರಲ್ಲಿದ್ದ ಕಾನ್ಸಪ್ಟ್ ಮೆಚ್ಚಿಕೊಂಡಿದ್ದರು. ಈ ರೀತಿ ಸಿನಿಮಾ ಬೇಕು ಎಂದು ಹೇಳಿದ್ದರು.

ಕೃಷಿ ಭೂಮಿಯ ಮೇಲೆ ಕಾರ್ಪೊರೇಟ್ ಕಣ್ಣು
ಈಗ ಮಹರ್ಷಿ ಸಿನಿಮಾದಲ್ಲಿ ತೋರಿಸಲಾಗಿರುವ ಕಾನ್ಸಪ್ಟ್ ಮತ್ತು ಬಂಗಾರ ಸನ್ ಆಫ್ ಬಂಗಾರ ಚಿತ್ರದ ಕಾನ್ಸಪ್ಟ್ ಕೂಡ ಒಂದೇ. ರೈತರ ಜಮೀನು ವಶಪಡಿಸಿಕೊಂಡು ಕಾರ್ಪೊರೇಟ್ ಕಂಪನಿಗಳು ತಮ್ಮ ಪ್ರಾಜೆಕ್ಟ್ ಮಾಡುವುದರ ವಿರುದ್ಧ ನಾಯಕ ಹೋರಾಡುತ್ತಾನೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪಾತ್ರ ಕೂಡ ಅದೇ. ಈಗ ಮಹರ್ಷಿ ಸಿನಿಮಾದಲ್ಲೂ ಮಹೇಶ್ ಬಾಬು ಪಾತ್ರವೂ ಅದೇ.

ಸ್ಫೂರ್ತಿ, ಕಾಪಿ, ರೀಮೇಕ್ ಅನ್ನೋದು ಮುಖ್ಯವಲ್ಲ
ತೆಲುಗು ಚಿತ್ರಕ್ಕೆ ಕನ್ನಡ ಸಿನಿಮಾ ಸ್ಫೂರ್ತಿ, ಕನ್ನಡ ಚಿತ್ರದ ಕಾಪಿ ಮಾಡಿದ್ದಾರೆ ಅಥವಾ ರೀಮೇಕ್ ಮಾಡಿದ್ದಾರೆ ಅನ್ನೋದು ಮುಖ್ಯವಲ್ಲ. ಒಂದೊಳ್ಳೆ ಕಥೆಯನ್ನ ಜನರಿಗೆ ತಲುಪಿಸುವ ಕೆಲಸವನ್ನ ಈ ಎರಡು ಚಿತ್ರಗಳು ತಮ್ಮದೇ ಚಿತ್ರಕಥೆಯ ಮೂಲಕ ಹೇಳಿದೆ. ಅದು ಜನರಿಗೂ ತಲುಪಿದೆ. ಅದರ ಪರಿಣಾಮವೇ ಈಗ ಮಹರ್ಷಿ ಸಿನಿಮಾದ 'ವೀಕೆಂಡ್ ಫಾರ್ಮಿಂಗ್'ಗೆ ಸ್ಫೂರ್ತಿಗೊಂಡ ಯುವಪಡೆ ಈಗ ಹಳ್ಳಿಗಳ ಕಡೆ ಮುಖ ಮಾಡಿದ್ದಾರೆ.

ಯಜಮಾನ ಚಿತ್ರವೂ ಅದೇ ಸಾಲಿಗೆ ಸಲ್ಲುತ್ತೆ
ದರ್ಶನ್ ತಮ್ಮ ಸಿನಿಮಾಗಳಲ್ಲಿ ರೈತರ ಏನಾದರೂ ಹೇಳುತ್ತಲೇ ಇರ್ತಾರೆ. ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ ದರ್ಶನ್ ಅಭಿನಯದ ಯಜಮಾನ ಸಿನಿಮಾವೂ ಅದೇ ವಿಭಾಗಕ್ಕೆ ಸೇರುತ್ತೆ. ರೈತರು ಯಾರ ಕೈ ಕೆಳಗೆಯೂ ಕೆಲಸ ಮಾಡಬಾರದು, ಅವರೇ ಯಜಮಾನ ಎಂದು ಸಿನಿಮಾ ತೋರಿಸಿದೆ. ಕಾರ್ಪೋರೇಟ್ ಉದ್ಯಮದ ವಿರುದ್ಧ ಡಿ ಬಾಸ್ ಅಬ್ಬರಿಸಿದ್ದರು. ದರ್ಶನ್ ವೃತ್ತಿ ಜೀವನದಲ್ಲಿ ಇದೊಂದು ಹೊಸ ರೀತಿ ಸಿನಿಮಾ ಆಗಿತ್ತು.

ಈ ರೀತಿ ಸಿನಿಮಾಗಳು ಹೆಚ್ಚು ಬರಬೇಕು
ಮಹರ್ಷಿ, ಬಂಗಾರ ಸನ್ ಆಫ್ ಬಂಗಾರದ ಮನುಷ್ಯ, ಯಜಮಾನ ಇದೆಲ್ಲ ಒಂದು ಉದಾಹರಣೆ ಅಷ್ಟೆ. ಈ ರೀತಿ ಸಿನಿಮಾಗಳು ಇನ್ನು ಹೆಚ್ಚು ಬರಬೇಕು. ಬರಿ ಹೊಡೆದಾಟ, ಪ್ರೀತಿ, ಹೀರೋ ಹೀರೋಯಿನ್ ಅಂತ ಕಮರ್ಷಿಯಲ್ ಸಿನಿಮಾ ಮಾಡೋದರ ಜೊತೆಗೆ ರೈತ, ಜನಸಾಮಾನ್ಯರ ಸಮಸ್ಯೆಯ ಕುರಿತು, ಅದನ್ನ ಬಗೆಹರಿಸುವ ನಿಟ್ಟಿನಲ್ಲಿ ಸಮಾಜಕ್ಕೆ ಸಂದೇಶ ನೀಡುವಂತಹ ಸಿನಿಮಾಗಳು ಬರಬೇಕಿದೆ. ಈ ರೀತಿಯ ಚಿತ್ರಗಳು ಕನ್ನಡದಲ್ಲಿ ಕಮ್ಮಿ ಇದೆ ಎಂಬುದು ಬೇಸರ.


Click it and Unblock the Notifications











