ನಟಿಯ ಅಪಹರಣ ಪ್ರಕರಣ: ಮಲಯಾಳಂ ಇಂಡಸ್ಟ್ರಿ ಮತ್ತೆ ಅಲ್ಲೋಲ-ಕಲ್ಲೋಲ
2017, ಫೆಬ್ರವರಿಯಲ್ಲಿ ಬಹುಭಾಷಾ ನಟಿಯ ಅಪಹರಣ ಮತ್ತು ದೌರ್ಜನ್ಯ ಪ್ರಕರಣ ಸಿನಿ ಜಗತ್ತಿನಲ್ಲಿ ಬಹುದೊಡ್ಡ ವಿವಾದ ಹುಟ್ಟುಹಾಕಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಲಯಾಳಂನ ಖ್ಯಾತ ನಟ ದಿಲೀಪ್ ಅವರನ್ನ ಆರೋಪಿಯನ್ನಾಗಿಸಿ ಬಂಧಿಸಲಾಗಿತ್ತು.
ಹಲವು ತಿಂಗಳು ನಟ ದಿಲೀಪ್ ಸೆರೆಮನೆ ವಾಸ ಕೂಡ ಅನುಭವಿಸಿದ್ದರು. ಒಂದೂವರೆ ವರ್ಷದ ನಂತರ ಈಗ ಮತ್ತೆ ಈ ವಿವಾದ ಸದ್ದು ಮಾಡುತ್ತಿದೆ. ದಿಲೀಪ್ ಅವರ ಪರ ನಿಂತಿರುವ 'ಅಮ್ಮ' (AMMA - Association of Malayalam Movie Artists) ವಿರುದ್ಧ ಖ್ಯಾತ ನಟಿಯರು ಸಿಡಿದೆದಿದ್ದಾರೆ.
ಅಷ್ಟೇ ಅಲ್ಲದೇ ನಾಲ್ಕು ಜನ ನಟಿಯರು ಈ ಸಂಘದಿಂದ ಹೊರಹೋಗಿದ್ದಾರೆ. ಅಷ್ಟಕ್ಕೂ, ನಟಿಯ ಅಪಹರಣ ಪ್ರಕರಣ ಈಗ್ಯಾಕೇ ಮತ್ತೆ ಸುದ್ದಿಯಾಯಿತು.? ದಿಲೀಪ್ ಈಗ ಎಲ್ಲಿದ್ದಾರೆ.? ಎಂಬ ಸಂಗತಿಗಳನ್ನ ತಿಳಿಯಲು ಮುಂದೆ ಓದಿ...

'ಅಮ್ಮ'ಗೆ ಸೇರ್ಪಡೆಯಾದ ದಿಲೀಪ್
ನಟಿಯನ್ನ ಅಪಹರಣ ಮಾಡಿ, ದೌರ್ಜನ್ಯವೆಸೆಗಿರುವ ಆರೋಪದಲ್ಲಿ ಜೈಲು ಸೇರಿದ್ದ ನಟ ದಿಲೀಪ್ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಇದೀಗ, 'ಮಲಯಾಳಂ ಕಲಾವಿದರ ಸಂಘ'ಕ್ಕೆ ದಿಲೀಪ್ ಅವರನ್ನ ಮತ್ತೆ ಸೇರಿಸಿಕೊಳ್ಳಲಾಗಿದೆ. ಈ ಬಗ್ಗೆ ಅಸಮಾಧಾನಗೊಂಡಿರುವ ನಟಿಯರು ಸಂಘದಿಂದ ಹೊರ ನಡೆದಿದ್ದಾರೆ.

ನ್ಯಾಯ ಎಲ್ಲಿದೆ.?
ನಟಿಯ ಮೇಲೆ ಹಲ್ಲೆ ಮಾಡಿ, ಅಪಹರಣ ಮಾಡಿರುವ ಆರೋಪ ಹೊತ್ತಿರುವ ನಟನನ್ನ ಮತ್ತೆ ಕಲಾವಿದರ ಸಂಘಕ್ಕೆ ಕರೆದುಕೊಂಡು ಬಂದಿರುವುದು ದುರಂತ. ಈ ಪ್ರಕರಣದಲ್ಲಿ ಸಂಘಟನೆ ನಟಿಯ ಪರವಾಗಿ ನ್ಯಾಯ ಕೊಡಿಸಬೇಕಾಗಿತ್ತು. ಆದ್ರೆ, ಆರೋಪ ಹೊಂದಿರುವವರನ್ನೇ ರಕ್ಷಿಸುತ್ತಿದೆ. ಇದನ್ನ ಖಂಡಿಸುತ್ತೇವೆ ಎಂದು ಖ್ಯಾತ ನಟಿಯರು ಆಕ್ರೋಶ ಹೊರಹಾಕಿದ್ದಾರೆ.

'ಅಮ್ಮ'ದಿಂದ ಹೊರಬಂದ ನಾಲ್ಕು ನಟಿಯರು
ದಿಲೀಪ್ ಅವರನ್ನ 'ಅಮ್ಮ' ಸಂಘಕ್ಕೆ ಸೇರಿಸಿಕೊಂಡಿರುವ ಹಿನ್ನಲೆ, ನಟಿಯರಾದ ರಿಮಾ ಕಾಳಿಂಗಲ್, ರೆಮ್ಯಾ ನಂಬೀಸನ್, ಗೀತು ಮೋಹನ್ ದಾಸ್ ಹಾಗೂ ದೌರ್ಜನ್ಯಕ್ಕೆ ಒಳಗಾಗಿದ್ದ ನಟಿಯೂ ಸಂಘದ ತಮ್ಮ ಸ್ಥಾನ ತೊರೆದಿದ್ದಾರೆ. ಆದರೆ ಪ್ರಕರಣದಲ್ಲಿ ನಟಿಗೆ ನ್ಯಾಯ ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಿಲೀಪ್ ಮಾಜಿ ಪತ್ನಿ ಮಂಜು ವಾರಿಯರ್ ಇನ್ನೂ ಕೂಡ ತಮ್ಮ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಮೋಹನ್ ಲಾಲ್ ಹೊಸ ಅಧ್ಯಕ್ಷ
ಇತ್ತೀಚಿಗಷ್ಟೆ ನಟ ಮೋಹನ್ ಲಾಲ್ ಮಲಯಾಳಂ ಕಲಾವಿದರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೆ ದಿಲೀಪ್ ಅವರ ಸಂಘಕ್ಕೆ ಸೇರಿಸಿಕೊಂಡಿರುವುದು ಸಾಮಾನ್ಯವಾಗಿ ನಟಿಯರ ಆಕ್ರೋಶಕ್ಕೆ ಕಾರಣವಾಗಿದೆ.


Click it and Unblock the Notifications











