ಅಜೇಯ್ ರಾವ್ ಜೀವನದಲ್ಲಿ ಮರೆಯಲಾಗದ ದಿನ
ಮಾರ್ಚ್ 17....ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ದಿನ. ಹಾಗೇ, ನವರಸ ನಾಯಕ ಜಗ್ಗೇಶ್ ಜನ್ಮದಿನ ಕೂಡ ಇಂದೇ. ಇಬ್ಬರು ಸ್ಟಾರ್ ಗಳಿಗೆ ಈ ದಿನ ಎಷ್ಟು ಸಂಭ್ರಮವೋ, ಅಷ್ಟೇ ಸಂಭ್ರಮ ಸಡಗರದ ದಿನ ನಮ್ಮ ಸ್ಯಾಂಡಲ್ ವುಡ್ ಸ್ಮೈಲಿಂಗ್ 'ಕೃಷ್ಣ' ಅಜೇಯ್ ರಾವ್ ಅವರಿಗೂ ಕೂಡ.
ಹಾಗಂತ, ಇವತ್ತು ಅಜೇಯ್ ರಾವ್ ಹುಟ್ಟಿದ ದಿನ ಅಲ್ಲ. ಆದ್ರೆ, ಗಾಂಧಿನಗರದಲ್ಲಿ ಅಜೇಯ್ ರಾವ್ 'ಸ್ಟಾರ್' ಆಗಿ ಮರುಹುಟ್ಟು ಪಡೆದದ್ದು ಇದೇ ದಿನ. ಹೌದು, ಇಂದಿಗೆ ಸರಿಯಾಗಿ 13 ವರ್ಷಗಳ ಹಿಂದೆ, ಅಂದ್ರೆ 2002 ರಲ್ಲಿ ಅಜೇಯ್ ರಾವ್ ನಾಯಕನಾಗಿ ಅಭಿನಯದ 'ಎಕ್ಸ್ ಕ್ಯೂಸ್ ಮೀ' ಸಿನಿಮಾ ಮುಹೂರ್ತ ಕಂಡಿತ್ತು.

ದೊಡ್ಡ ಸ್ಟಾರ್ ಆಗ್ಬೇಕು ಅಂತ ಬೆಟ್ಟದಷ್ಟು ಕನಸುಹೊತ್ತು ಗಾಂಧಿನಗರಕ್ಕೆ ಕಾಲಿಟ್ಟ ಅಜೇಯ್ ರಾವ್, 'ಹೀರೋ' ಸ್ಥಾನ ಗಿಟ್ಟಿಸಿಕೊಳ್ಳುವುದಕ್ಕೆ ಎರಡು ವರ್ಷಗಳು ಬೇಕಾಯ್ತು. ಅವಕಾಶಕ್ಕಾಗಿ ಎದುರು ನೋಡುತ್ತಿದ್ದ ಅಜೇಯ್, ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಜ್ಯೂನಿಯರ್ ಆರ್ಟಿಸ್ಟ್ ಆಗಿ ಅನ್ನೋದು ಅನೇಕರಿಗೆ ಗೊತ್ತಿಲ್ಲ. [ಸೆನ್ಸಾರ್ ನಲ್ಲಿ 'ಕೃಷ್ಣ' ಪಾಸ್! ಯುಗಾದಿಯಲ್ಲಿ ಅಜೇಯ್ 'ಲೀಲೆ']
ಹೌದು, 'ಶ್ರೀ ಮಂಜುನಾಥ' ಸೇರಿದಂತೆ ಅನೇಕ ಚಿತ್ರಗಳಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ಹೀರೋಗಳ ಹಿಂದೆ ನಿಲ್ಲುತ್ತಿದ್ದ ಅಜೇಯ್ ಗೆ 'ನಾಯಕ'ನಾಗುವ ಗೋಲ್ಡನ್ ಚಾನ್ಸ್ ಸಿಕ್ಕಿದ್ದು 'ಜೋಗಿ' ಪ್ರೇಮ್ ಕೃಪೆಯಿಂದ.

'ಎಕ್ಸ್ ಕ್ಯೂಸ್ ಮೀ' ಚಿತ್ರದಲ್ಲಿ ಲವ್ವರ್ ಬಾಯ್ ಪಾತ್ರ ಗಿಟ್ಟಿಸಿಕೊಂಡ ಅಜೇಯ್, ಹೀರೋ ಆಗಿ ಮೊಟ್ಟ ಮೊದಲ ಬಾರಿಗೆ ಕ್ಯಾಮರಾ ಮುಂದೆ ಬಂದಿದ್ದು ಇದೇ ಮಾರ್ಚ್ 17 ರಂದು. ಅಂದಿನಿಂದ ಇಂದಿನವರೆಗೂ 'ಅಜೇಯ'ನಾಗಿರುವ ಇವರು ಈಗ ನಿರ್ಮಾಪಕ..! ['ಕೃಷ್ಣಲೀಲಾ' ಚಿತ್ರಕ್ಕೆ ಸ್ಪೂರ್ತಿ ನೀಡಿರುವ ನೈಜ ಕಥೆ ಯಾವುದು?]
'ಕೃಷ್ಣಲೀಲಾ' ಚಿತ್ರಕ್ಕೆ ಬಂಡವಾಳ ಹಾಕಿರುವ ಅಜೇಯ್, ಇದೇ ಸೆಂಟಿಮೆಂಟ್ ನಲ್ಲಿ ಈ ವಾರ ತಮ್ಮ ಕನಸಿನ ಚಿತ್ರವನ್ನ ಬೆಳ್ಳಿಪರದೆ ಮೇಲೆ ತರುತ್ತಿದ್ದಾರೆ. 'ಎಕ್ಸ್ ಕ್ಯೂಸ್ ಮೀ' ಸಿನಿಮಾ ಮುಹೂರ್ತ ಕಂಡ ದಿನದಿಂದ ಪ್ರತಿ ಯುಗಾದಿಯಲ್ಲೂ ಅಜೇಯ್ ಬೆಲ್ಲ ಸವಿದಿದ್ದಾರೆ. 'ಕೃಷ್ಣಲೀಲಾ' ಚಿತ್ರವನ್ನ ನೋಡಿ, ನೀವೆಲ್ಲಾ ಮೆಚ್ಚಿದರೆ ಅಜೇಯ್ ಬಾಯಿಗೆ ಈ ಬಾರಿಯೂ ಬೆಲ್ಲ ಬಿದ್ದ ಹಾಗೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











