ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಅನ್ನಸಂತರ್ಪಣೆ: ಸಿದ್ಧತೆ ಹೇಗಿದೆ?
ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಅಭಿಮಾನಿಗಳಿಗಾಗಿ ಬೃಹತ್ ಆಗಿ ಅನ್ನಸಂತರ್ಪಣೆ ಕಾರ್ಯವನ್ನು ದೊಡ್ಮನೆ ಕುಟುಂಬ ಹಮ್ಮಿಕೊಂಡಿದೆ.
ಅರಮನೆ ಮೈದಾನದಲ್ಲಿ ಬೃಹತ್ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿದ್ದು, ಕರ್ನಾಟಕದ ಅತಿದೊಡ್ಡ ಅನ್ನಸಂತರ್ಪಣಾ ಕಾರ್ಯಕ್ರಮಗಳಲ್ಲಿ ಇದು ಮೊದಲಾಗಲಿದೆ ಅಷ್ಟು ದೊಡ್ಡ ಗಾತ್ರದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸರಿ ಸುಮಾರು 30,000 ಜನಗಳಿಗೆ ಊಟ ಉಣಬಡಿಸಲು ತಯಾರಿ ನಡೆಸಲಾಗಿದ್ದು, ಇದಕ್ಕಾಗಿ ಎರಡು ದಿನದಿಂದಲೂ ಹಲವರು ಶ್ರಮ ಪಡುತ್ತಿದ್ದಾರೆ.
ಈ ಬೃಹತ್ ಕಾರ್ಯಕ್ರಮದ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವವರಲ್ಲಿ ಒಬ್ಬರಾದ ಶಾಸಕ ರಾಜು ಗೌಡ ಮಾತನಾಡಿ, ''ಶಿವಣ್ಣ, ರಾಘಣ್ಣ, ರಾಕ್ಲೈನ್ ವೆಂಕಟೇಶ್ ಹಾಗೂ ಅಶ್ವಿನಿ ಅಕ್ಕನವರುಗಳು ಕೂತು ಮಾತನಾಡಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ನಾನು ಕೇವಲ ಉಸ್ತುವಾರಿ ನೋಡುಕೊಳ್ಳುತ್ತಿದ್ದೇನೆ'' ಎಂದರು.
''ಪುನೀತ್ ಅವರು ಬದುಕಿದ್ದಾಗಲೂ ತಮ್ಮ ಅಭಿಮಾನಿಗಳಿಗೆ ಭರ್ಜರಿಯಾಗಿ ಊಟ ಹಾಕಿಸಬೇಕು ಎಂದು ಹೇಳುತ್ತಿದ್ದರೆಂದು ಮೊನ್ನೆ ಅಶ್ವಿನಿ ಅಕ್ಕನವರು ಹೇಳಿದರು. ಆದರೆ ಇಂಥಹಾ ಸಂದರ್ಭದಲ್ಲಿ ಊಟ ಹಾಕಿಸುತ್ತಿರುವುದು ನಮಗೆಲ್ಲ ಬೇಸರ ತಂದಿದೆ. ಆದರೆ ಅವರ ಆಸೆ ಈಡೇರಲಿ ಎಂದು ನಾಳೆ ಊಟದ ವ್ಯವಸ್ಥೆ ಮಾಡಿಕೊಂಡಿದ್ದೇವೆ'' ಎಂದರು.

ಕುಟುಂಬದವರು ಮಾಡುತ್ತಿರುವ ಕಾರ್ಯಕ್ರಮ
''ಅವರ ಕುಟುಂಬದವರು ಮಾಡುತ್ತಿರುವ ಕಾರ್ಯಕ್ರಮ ಇದು, ನಾನು, ಪರಮೇಶ್ವರ್ ಅವರು ಇನ್ನು ಕೆಲವರು ಮೇಲುಸ್ತುವಾರಿಯಷ್ಟೆ ನೋಡಿಕೊಳ್ಳುತ್ತಿದ್ದೇವೆ. ಸಾವಿರ, ಐದು ಸಾವಿರ ಜನಗಳಿಗಾದರೆ ಮೆನ್ಯು ನಿಗದಿಪಡಿಸಿ ಏನೋ ಮಾಡಬಹುದು ಆದರೆ ಈ ಕಾರ್ಯಕ್ರಮಕ್ಕೆ ಅದೆಷ್ಟು ಸಾವಿರ ಜನ ಬರುತ್ತಾರೆ ಎಂಬುದು ಸಹ ನಮಗೆ ಗೊತ್ತಿಲ್ಲ'' ಎಂದಿದ್ದಾರೆ ರಾಜುಗೌಡ.

1500 ಕ್ಕೂ ಹೆಚ್ಚು ಅಡುಗೆ ಬಟ್ಟರು ಕೆಲಸ ಮಾಡುತ್ತಿದ್ದಾರೆ
''ಸುಮಾರು 25,000 ಜನರು ಬರುವ ನಿರೀಕ್ಷೆ ಇದೆ ಆದರೆ ಇನ್ನೂ ಹೆಚ್ಚಾಗುವ ಸಂಭವವೂ ಇದೆ ನಾವು ಎಲ್ಲದಕ್ಕೂ ತಯಾರಾಗಿದ್ದೇವೆ. ಸುಮಾರು 1500 ಜನ ಅಡುಗೆ ಬಟ್ಟರು ಭಕ್ಷ್ಯ ಭೋಜನಗಳನ್ನು ತಯಾರು ಮಾಡುತ್ತಿದ್ದಾರೆ. ಒಂದೊಮ್ಮೆ ಜನ ಹೆಚ್ಚಾದರೂ ಅವರಿಗೆ ಭೋಜನ ವ್ಯವಸ್ಥೆ ಮಾಡಲು ನಾವು ಸಿದ್ಧರಾಗಿದ್ದೇವೆ'' ಎಂದು ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.

''ಅಪ್ಪು ಅಭಿಮಾನಿಗಳೇ ಮುಂದೆ ನಿಂತು ಶಾಂತಿ ಕಾಪಾಡುತ್ತಾರೆ''
ಭದ್ರತೆ ಬಗ್ಗೆ ಮಾತನಾಡಿದ ರಾಜುಗೌಡ, ''ಸಿಎಂ ಅವರು ಈಗಾಗಲೇ ಸಾಕಷ್ಟು ನೆರವನ್ನು ನೀಡಿದ್ದಾರೆ. ನಾಳಿನ ಕಾರ್ಯಕ್ರಮಕ್ಕೂ ಅಭೂತಪೂರ್ವ ಭದ್ರತೆಯನ್ನು ನೀಡುತ್ತಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಅಪ್ಪು ಅಭಿಮಾನಿಗಳು ಯಾರೂ ಗೊಂದಲ, ಗದ್ದಲ ಮಾಡುವವರಲ್ಲ. ಅವರ ಅಂತಿಮ ದರ್ಶನದಲ್ಲಿ ಲಕ್ಷಾಂತರ ಜನ ಭಾಗವಹಿಸಿದರು ಆದರೆ ಎಲ್ಲಿಯೂ ಒಂದು ಸಣ್ಣ ಗಲಾಟೆ ಆಗದಂತೆ ನಡೆದುಕೊಂಡರು. ಇಂದಿನ ಕಾರ್ಯಕ್ರಮವನ್ನು ಅಭಿಮಾನಿಗಳೇ ಮುಂದೆ ನಿಂತು ಶಾಂತಿಯಿಂದ ನಡೆಸಿಕೊಡುತ್ತಾರೆ ಎಂಬ ವಿಶ್ವಾಸವಿದೆ'' ಎಂದರು ರಾಜುಗೌಡ.

ಗಣ್ಯರು ಬಂದರೂ ನಾವು ತಯಾರಾಗಿದ್ದೇವೆ: ರಾಜುಗೌಡ
ಗಣ್ಯರು ಬರುವ ನಿರೀಕ್ಷೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜುಗೌಡ, ''ಚಿತ್ರರಂಗದ ಗಣ್ಯರು, ರಾಜಕೀಯ ರಂಗದ ಗಣ್ಯರು ನಿನ್ನೆಯೇ ಮನೆಯ ಬಳಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಹಾಗಾಗಿ ಇಂದು ಇಲ್ಲಿಗೆ ಆಗಮಿಸುವ ಸಾಧ್ಯತೆ ಆದರೆ ಹಾಗೊಮ್ಮೆ ಬಂದರೆ ಅವರಿಗೂ ಸೂಕ್ತವಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ'' ಎಂದರು ರಾಜುಗೌಡ.

ಭಾರಿ ಸಂಖ್ಯೆಯಯಲ್ಲಿ ಜನ ಸೇರುವ ನಿರೀಕ್ಷೆ
ಪುನೀತ್ ರಾಜ್ಕುಮಾರ್ ಅಂತಿಮ ದರ್ಶನಕ್ಕೆ 25 ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದರು. ಹಾಗಾಗಿ ಈ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುವ ನಿರೀಕ್ಷೆ ಇದೆ. ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ, ಬಂದವರ್ಯಾರು ನಿರಾಶರಾಗಿ ಹೋಗದಂತೆ ಸಕಲ ಸಿದ್ಧತೆಗಳನ್ನು ದೊಡ್ಮನೆ ಕುಟುಂಬ ಮತ್ತು ಸರ್ಕಾರ ಜಂಟಿಯಾಗಿ ಮಾಡಿಕೊಂಡಿದೆ.


Click it and Unblock the Notifications











