ಹೇಮಂತ್ ಹೆಗಡೆ ಆಕ್ಷನ್ ಕಟ್ ನಲ್ಲಿ 'ಮತ್ತೊಮ್ಮೆ ಶ್'
ಕನ್ನಡ ಚಿತ್ರರಂಗದಲ್ಲಿ ಸಂಚನಲ ಸೃಷ್ಟಿಸಿದ ಚಿತ್ರ ಉಪೇಂದ್ರ ಆಕ್ಷನ್ ಕಟ್ ಹೇಳಿದ್ದ 'ಶ್' (1993). ಈ ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಉಪೇಂದ್ರ ಅವರಿಗೆ ಬಹಳ ಜನಪ್ರಿಯತೆ ತಂದುಕೊಟ್ಟಿದ್ದಷ್ಟೇ ಅಲ್ಲದೆ ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರಿಗೂ ತಿರುವು ನೀಡಿದ ಚಿತ್ರ.
ಕುಮಾರ್ ಗೋವಿಂದು, ಕಾಶಿನಾಥ್, ಸುರೇಶ್ ಹೆಬ್ಳೀಕರ್, ಬ್ಯಾಂಕ್ ಜನಾರ್ಧನ್, ಉಪೇಂದ್ರ, ಸಾಧು ಕೋಕಿಲ, ಥ್ರಿಲ್ಲರ್ ಮಂಜು ಹಾಗೂ ಮಿಮಿಕ್ರಿ ದಯಾನಂದ್ ಅವರು ಚಿತ್ರದ ಪಾತ್ರವರ್ಗದಲ್ಲಿದ್ದರು. ಕಮರ್ಷಿಯಲಿ ಸಕ್ಸಸ್ ಆದ ಚಿತ್ರ. ಇದೀಗ ಮತ್ತೊಮ್ಮೆ 'ಶ್' ನಿರ್ದೇಶಿಸಲು ಹೊರಟಿದ್ದಾರೆ 'ನಿಂಬೆಹುಳಿ' ಹೇಮಂತ್ ಹೆಗಡೆ.

ಹೇಮಂತ್ ನಿರ್ದೇಶನ ಎಂದರೆ ಸದಾ ಒಂದಿಲ್ಲೊಂದು ವಿವಾದ ತಪ್ಪಿದ್ದಲ್ಲ. ವಿವಾದಗಳಿಗೂ ಹೇಮಂತ್ ಅವರಿಗೂ ಬಿಡಿಸಲಾರದ ನಂಟು. ಅವರ ಚಾರ್ಲಿ ಚಾಪ್ಲಿನ್ ಚಿತ್ರ ಹಾಗೂ ನಿಂಬೆಹುಳಿ ಚಿತ್ರಗಳು ವಿವಾದಕ್ಕೆ ಒಳಗಾಗಿದ್ದವು. ಈಗ ಕೈಗೆತ್ತಿಕೊಂಡಿರುವ 'ಮತ್ತೊಮ್ಮೆ ಶ್' ಚಿತ್ರವೂ ವಿವಾದಕ್ಕೆ ಒಳಗಾಗುತ್ತಿದೆ.
ತಮ್ಮ ಚಿತ್ರಕ್ಕೆ ಮತ್ತೊಮ್ಮೆ ಶ್ ಎಂದು ಹೆಸರಿಟ್ಟಿದ್ದರೂ ಈಗಾಗಲೆ ಕುಮಾರ್ ಗೋವಿಂದ್ ಅವರು 'ಶ್ 2' ಎಂಬ ಶೀರ್ಷಿಕೆಯನ್ನು ನೋಂದಾಯಿಸಿಕೊಂಡಿದ್ದಾರೆ. ಆ ಶೀರ್ಷಿಕೆ ತಮಗೆ ಕೊಡುವಂತೆ ಹೇಮಂತ್ ಕೇಳಿದ್ದರಂತೆ. ಆದರೆ ಶ್ 2 ಟೈಟಲ್ ಕೊಡದ ಕುಮಾರ್ ತಾವೇ ಆ ಚಿತ್ರ ಮಾಡುತ್ತಿರುವುದಾಗಿ ಹೇಳಿದ್ದಾರೆ.
ವಿಧಿ ಇಲ್ಲದೆ ಹೇಮಂತ್ ಅವರು ತಮ್ಮ ಚಿತ್ರಕ್ಕೆ ಮತ್ತೊಮ್ಮೆ ಶ್ ಎಂದು ಹೆಸರಿಟ್ಟಿದ್ದು ಡಿಸೆಂಬರ್ ನಲ್ಲಿ ಶೂಟಿಂಗ್ ಆರಂಭಿಸುತ್ತಿದ್ದಾರೆ. ಹಾರರ್ ಥ್ರಿಲ್ಲರ್ ಚಿತ್ರವಾಗಿರುವ ಇದು ಪ್ರೇಕ್ಷಕರನ್ನು ಕುತೂಹಲದ ಕಡಲಲ್ಲಿ ಮೀಯುಸುತ್ತದೆ ಎನ್ನುತ್ತಾರೆ ಹೇಮಂತ್. (ಏಜೆನ್ಸೀಸ್)


Click it and Unblock the Notifications











