ಪೊಲೀಸರ ವರದಿಗೆ ಶ್ರುತಿ ಆಕ್ಷೇಪಣೆ ಇಲ್ಲ: ಅರ್ಜುನ್ ಸರ್ಜಾ ನಿರಾಳ
ನಟಿ ಶ್ರುತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ಧ ನೀಡಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದು. ಪೊಲೀಸರ ವರದಿಗೆ ಶ್ರುತಿ ಹರಿಹರನ್ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಅವಕಾಶ ನೀಡಿತ್ತು. ಆದರೆ ನಟಿ ಶ್ರುತಿ ಆಕ್ಷೇಪಣೆ ಸಲ್ಲಿಸಲಿಲ್ಲವಾದ್ದರಿಂದ ನ್ಯಾಯಾಲಯವು ಬಿ-ರಿಪೋರ್ಟ್ ಅನ್ನು ನ್ಯಾಯಾಲಯ ಅಂಗೀಕರಿಸಿದೆ. ಈ ಮೂಲಕ ಅರ್ಜುನ್ ಸರ್ಜಾಗೆ ಪ್ರಕರಣದಿಂದ ಮುಕ್ತಿ ದೊರೆತಿದೆ.
2015 ರಲ್ಲಿ ನಟಿ ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ಒಟ್ಟಿಗೆ 'ವಿಸ್ಮಯ' ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಚಿತ್ರರಂಗದಲ್ಲಿ ಮೀ ಟೂ ಅಲೆ ಜೋರಾದಾಗ ಮ್ಯಾಗಜೀನ್ ಒಂದಕ್ಕೆ ಸಂದರ್ಶನ ನೀಡಿದ್ದ ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ತಮ್ಮೊಟ್ಟಿಗೆ ಕೆಟ್ಟದಾಗಿ ನಡೆದುಕೊಂಡರೆಂದು ಆರೋಪ ಮಾಡಿದ್ದರು. ಶ್ರುತಿ ಅವರ ಈ ಹೇಳಿಕೆ ವಿವಾದ ಎಬ್ಬಿಸಿತ್ತು.
ನಟ ಅಂಬರೀಶ್ ನೃತೃತ್ವದಲ್ಲಿ ಪ್ರಕರಣವನ್ನು ಸಂಧಾನ ಮಾಡುವ ಯತ್ನ ನಡೆದಿತ್ತಾದರೂ ಅದು ವಿಫಲವಾದ ಪರಿಣಾಮ ನಟಿ ಶ್ರುತಿ ಹರಿಹರನ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಪೂರಕವಾದ ಯಾವುದೇ ಸಾಕ್ಷ್ಯ ಸಿಗಲಿಲ್ಲ. ಸಾಕ್ಷಿಧಾರರು ಸಹ ಹೇಳಿಕೆ ದಾಖಲಿಸಲಿಲ್ಲ. ಸಿಸಿಟಿವಿ ದೃಶ್ಯಾವಳಿಗಳು ಸಹ ಸಿಗಲಿಲ್ಲ. ಹಾಗಾಗಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ದೊಡ್ಡ ವಿವಾದ ಎಬ್ಬಿಸಿದ್ದ ಈ ಪ್ರಕರಣ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಗೌಣವಾಯಿತು.
ಈ ಪ್ರಕರಣದಲ್ಲಿ ನಟಿ ಶ್ರುತಿ ಹಾಸನ್ಗೆ ನಟ ಚೇತನ್ ಅಹಿಂಸ ಬೆಂಬಲ ನೀಡಿದ್ದರು. ಅರ್ಜುನ್ ಸರ್ಜಾ ಪರ ಧ್ರುವ ಸರ್ಜಾ ಹಾಗೂ ಹಲವರು ನಿಂತರು. ಅರ್ಜುನ್ ಸರ್ಜಾರ ಮಾವ ರಾಜೇಶ್, ಸರ್ಜಾ ಕುಟುಂಬಕ್ಕೆ ಆಪ್ತವಾಗಿದ್ದ ಪ್ರಶಾಂತ್ ಸಂಬರ್ಗಿ ಇನ್ನೂ ಹಲವರು ಮಾಧ್ಯಮಗಳಲ್ಲಿ ಸರ್ಜಾ ಪರ ವಕಾಲತ್ತು ವಹಿಸಿದ್ದರು. ಆಗ ಮಾತನಾಡಿದ್ದ ಅರ್ಜುನ್ ಸರ್ಜಾ, ''ನನ್ನ ಮೇಲಿನ ಆರೋಪಗಳೆಲ್ಲ ನ್ಯಾಯಾಲಯದಲ್ಲಿಯೇ ಇತ್ಯರ್ಥವಾಗಲಿ, ನಾನು ತಪ್ಪು ಮಾಡಿಲ್ಲವೆಂದು ನ್ಯಾಯಾಲಯವೇ ತೀರ್ಮಾನಿಸಲಿ'' ಎಂದಿದ್ದರು. ಶ್ರುತಿ ಹರಿಹರನ್ ಸಹ ತಾವು ನ್ಯಾಯಾಲಯದಲ್ಲಿಯೇ ಹೋರಾಟ ಮಾಡುವುದಾಗಿ ಹೇಳಿದ್ದರು. ಆದರೆ ಈಗ ಪ್ರಕರಣ ಸಾಕ್ಷ್ಯಾಧಾರಗಳ ಕೊರತೆಯಿಂದ ಗೌಣವಾಗಿದೆ.


Click it and Unblock the Notifications











