ದರ್ಶನ್ ಜೊತೆ ಸಿನಿಮಾ: ಸಚಿವ ಬಿ.ಸಿ.ಪಾಟೀಲ್ ಹೇಳಿದ್ದು ಹೀಗೆ
ನಟ ದರ್ಶನ್ ಸಿನಿಮಾವನ್ನು ನಿರ್ಮಾಣ ಮಾಡಲು ಯಾರಿಗಿಲ್ಲ ಆಸೆ ಹೇಳಿ. ದರ್ಶನ್ ಸಿನಿಮಾ ನಿರ್ಮಾಣ ಮಾಡುವುದೆಂದರೆ ಪಕ್ಕಾ ಪೈಸಾ ವಸೂಲ್ ಎಂದೇ ಅರ್ಥ. ಹಾಗಾಗಿ ನಿರ್ಮಾಪಕರು ಸಾಲುಗಟ್ಟಿದ್ದಾರೆ ದರ್ಶನ್ ಎದುರು.
ಸಿನಿಮಾ ನಿರ್ಮಾಪಕರು ಮಾತ್ರವಲ್ಲ, ರಾಜಕಾರಣಿಗಳಿಗೂ ದರ್ಶನ್ ಮೇಲೆ ಬಂಡವಾಳ ಹೂಡುವ ಬಯಕೆ. ಕೆಲವು ರಾಜಕಾರಣಿಗಳು ದರ್ಶನ್ ಸಿನಿಮಾಕ್ಕೆ ಬಂಡವಾಳ ಹೂಡಲು ತುದಿಗಾಲಮೇಲಿದ್ದಾರೆ. ಅದರಲ್ಲಿ ಒಬ್ಬರು, ಮಾಜಿ ನಟ, ಹಾಲಿ ಕೃಷಿ ಸಚಿವ ಬಿ.ಸಿ.ಪಾಟೀಲ್.
ಇತ್ತೀಚೆಗಷ್ಟೆ ಸಚಿವ ಬಿ.ಸಿ.ಪಾಟೀಲ್ ನಿವಾಸಕ್ಕೆ ಭೇಟಿ ನೀಡಿದ್ದರು ನಟ ದರ್ಶನ್. ಇದ್ದಕ್ಕಿದ್ದಂತೆ ನೀಡಲಾದ ಈ ಭೇಟಿ ಕುತೂಹಲ ಕೆರಳಿಸಿತ್ತು. ಆದರೆ ಈ ಭೇಟಿ ಬಗ್ಗೆ ಸ್ವತಃ ಬಿ.ಸಿ.ಪಾಟೀಲ್ ಅವರು ಸ್ಪಷ್ಟನೆ ನೀಡಿದ್ದಾರೆ.

'ಒಟ್ಟಿಗೆ ಪ್ರಚಾರ ಮಾಡಿದ್ದೆವು, ಹಾಗಾಗಿ ಮನೆಗೆ ಕರೆದಿದ್ದೆ'
'ದರ್ಶನ್, ಮುನಿರತ್ನ ಪರವಾಗಿ ಪ್ರಚಾರ ಮಾಡಿದರು, ಅದೇ ದಿನ ನಾನೂ ಸಹ ಮುನಿರತ್ನ ಪರವಾಗಿ ಪ್ರಚಾರ ಮಾಡಿದೆ. ಹಾಗಾಗಿ ದರ್ಶನ್ ಅವರನ್ನು ಮನೆಗೆ ಆಹ್ವಾನಿಸಿದ್ದೆ. ನನ್ನ ಆಹ್ವಾನ ಮನ್ನಿಸಿ ಮನೆಗೆ ಬಂದರು, ಬೇರೆ ಏನೂ ಇಲ್ಲ' ಎಂದಿದ್ದಾರೆ ಸಚಿವ ಬಿ.ಸಿ.ಪಾಟೀಲ್.

ಕಾಲ್ಶೀಟ್ ಹಾಗೂ ಕತೆ ಸಿಕ್ಕರೆ ಸಿನಿಮಾ ಮಾಡುವೆ: ಪಾಟೀಲ್
ಮುಂದುವರೆದು ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, 'ದರ್ಶನ್ ಅವರ ಕಾಲ್ಶೀಟ್ ಸಿಕ್ಕರು, ಒಂದೊಳ್ಳೆ ಕತೆ ಸಿಕ್ಕರೆ ಖಂಡಿತ ಅವರೊಂದಿಗೆ ಸಿನಿಮಾ ಮಾಡುತ್ತೇನೆ' ಎಂದರು ಬಿ.ಸಿ.ಪಾಟೀಲ್. ದರ್ಶನ್ ಸಿನಿಮಾ ನಿರ್ಮಿಸಲು ಬಿ.ಸಿ.ಪಾಟೀಲ್ ಉತ್ಸುಕರಾಗಿದ್ದಾರೆ.

ಮುನಿರತ್ನ ಪರವಾಗಿ ದರ್ಶನ್ ಪ್ರಚಾರ
ಆರ್ಆರ್ ನಗರ ಉಪಚುನಾವಣೆಯಲ್ಲಿ ನಟ ದರ್ಶನ್, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಪ್ರಚಾರ ಮಾಡಿದ್ದರು. ನಟಿ ಅಮೂಲ್ಯ, ಪತಿ ಜಗದೀಶ್, ಸಚಿವರಾದ ಆರ್.ಅಶೋಕ್, ಸೋಮಶೇಖರ್, ಭೈರತಿ ಬಸವರಾಜು, ಬಿಸಿ ಪಾಟೀಲ್ ಇನ್ನೂ ಹಲವರು ಅಂದು ಪ್ರಚಾರದಲ್ಲಿ ಹಾಜರಿದ್ದರು.
Recommended Video

ಆಗೊಮ್ಮೆ-ಈಗೊಮ್ಮೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ
ಪೊಲೀಸ್ ಅಧಿಕಾರಿಯಾಗದ್ದ ಬಿ.ಸಿ.ಪಾಟೀಲ್, ಕೆಲಸಕ್ಕೆ ರಾಜೀನಾಮೆ ನೀಡಿ ಸಿನಿಮಾ ನಟರಾದರು. ರಾಜಕಾರಣಕ್ಕೆ ಸೇರುವವರೆಗೆ ಸಿನಿಮಾದಲ್ಲಿ ಸಕ್ರಿಯರಾಗಿದ್ದ ಬಿ.ಸಿ.ಪಾಟೀಲ್, ಆ ನಂತರ ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2017 ರಲ್ಲಿ ನಟಿಸಿದ ಕಾಫಿತೋಟ ಸಿನಿಮಾ ಅವರ ನಟನೆಯ ಈವರೆಗಿನ ಕೊನೆಯ ಸಿನಿಮಾ.


Click it and Unblock the Notifications











