ಬೆಳ್ಳಿಪರದೆಗೆ ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್
ರಾಜಕಾರಣಿಗಳು ಆಗಾಗ ಬಣ್ಣಬದಲಾಯಿಸುವುದು ಗೊತ್ತೇ ಇದೆ. ಈಗಾಗಲೆ ಮಾಜಿ ಸಿಎಂ ಸದಾನಂದಗೌಡ, ಮಾಜಿ ಸಚಿವ ರೇಣುಕಾಚಾರ್ಯ ಸೇರಿದಂತೆ ಹಲವಾರು ರಾಜಕಾರಣಿಗಳು ಬಣ್ಣ ಹಚ್ಚಿದ್ದಾರೆ. ಸಿನಿಮಾದವರು ರಾಜಕೀಯಕ್ಕೂ, ರಾಜಕೀಯದವರು ಬಣ್ಣದ ಜಗತ್ತಿಗೆ ಅಡಿಯಿಡುವುದು ಸರ್ವೇಸಾಮಾನ್ಯವಾಗಿದೆ.
ಈಗ ರಾಜ್ಯ ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಬೆಳ್ಳಿತೆರೆಗೆ ಅಡಿಯಿಡುತ್ತಿದ್ದಾರೆ. ಅವರು ನಟಿಸುತ್ತಿರುವುದು ಕನ್ನಡ ಚಿತ್ರದಲ್ಲಿ ಅಲ್ಲವೇ ಅಲ್ಲ. ತುಳು ಭಾಷೆಯ 'ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ' ಎಂಬ ಭಕ್ತಿಪ್ರಧಾನ ಚಿತ್ರದಲ್ಲಿ.

ಏಪ್ರಿಲ್, 2014ರಲ್ಲಿ ತೆರೆಕಾಣಲಿರುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ನಾಯಕನಟ ರಾಜೇಶ್ ಕೋಟ್ಯಾನ್. ಜೊತೆಗೆ ಚಿತ್ರದ ನಿರ್ಮಾಣ, ಸಾಹಸ ನಿರ್ದೇಶನದ ಜವಾಬ್ದಾರಿಯನ್ನೂ ರಾಜೇಶ್ ಹೊತ್ತಿದ್ದಾರೆ. ಈ ಚಿತ್ರವನ್ನು ಏಪ್ರಿಲ್ ನಲ್ಲಿ ತೆರೆಗೆ ತರುವ ಸಿದ್ಧತೆಗಳು ನಡೆಯುತ್ತಿವೆ.
ಕಿರುತೆರೆ ನಟ ವೆಂಕಟಾದ್ರಿ ಅಚರು ಬ್ರಹ್ಮಶ್ರೀ ನಾರಾಯಣ ಗುರುಗಳಾಗಿ ಅಭಿನಯಿಸಲಿದ್ದಾರೆ. ಉಳಿದ ಪಾತ್ರವರ್ಗದಲ್ಲಿ ಚಿನ್ನಾಮುತ್ತ ವಿಜಯ್, ಭೂಮಿಕಾ, ಸಂಗೀತಾ ಶೆಟ್ಟಿ, ಭೂಜರಾಜ್ ವಾಮಂಜೂರು, ಅರವಿಂದ ಬೋಳಾರ್ ಸೇರಿದಂತೆ ಮುಂತಾದವರಿದ್ದಾರೆ. (ಏಜೆನ್ಸೀಸ್)


Click it and Unblock the Notifications











