ಯಾರಿಗೆ ಬೇಕು 'ಮಿರ್ಚಿ ಮಂಡಕ್ಕಿ ಕಡಕ್ ಚಾಯ್'?
ಚುಮುಚುಮು ಚಳಿಗೆ ಮಿರ್ಚಿ ಮಂಡಕ್ಕಿ ಕಡಕ್ ಚಾಯ್ ಕೊಟ್ಟರೆ ಯಾರು ಬೇಡ ಅಂತಾರೆ ಹೇಳಿ? ಈಗ ಭಿನ್ನ ರುಚಿಯನ್ನು ಬಯಸುತ್ತಿರುವ ಪ್ರೇಕ್ಷಕ ವರ್ಗಕ್ಕೆ ಹೊಸ ಸೊಗಡಿನ ಚಿತ್ರ ಕೊಡಲು ಬರುತ್ತಿದೆ ಹೊಸಬರ ತಂಡ. ಚಿತ್ರದ ಹೆಸರು 'ಮಿರ್ಚಿ ಮಂಡಕ್ಕಿ ಕಡಕ್ ಚಾಯ್'.
ಕನ್ನಡ ಚಿತ್ರರಸಿಕರು ಉದ್ದುದ್ದ ಶೀರ್ಷಿಕೆಗಳನ್ನು ನೋಡಿ ಬಹಳ ದಿನಗಳೇ ಆಗಿದ್ದವು. ಈಗ 'ಮಿರ್ಚಿ ಮಂಡಕ್ಕಿ ಕಡಕ್ ಚಾಯ್' ಹೆಸರಿನ ಚಿತ್ರ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ತನು ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವಿದು. [ಚಹಾ ಅಂಗಡಿ ಮಾಲಿಕರ ಮೇಲೆ ಕೇಂದ್ರ ಬ್ರಹ್ಮಾಸ್ತ್ರ]

ಚಿತ್ರದ ನಿರ್ದೇಶಕಿ ಸಂಜೋತಾ ಅವರು ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಬಾಂಗೆಯ ಡಿಜಿಟಲ್ ಅಕಾಡೆಮಿಯಲ್ಲಿ ಫಿಲಂ ಮೇಕಿಂಗ್ ಕೋರ್ಸ್ ಮಾಡಿದ ಬಳಿಕ ಚಿತ್ರರಂಗಕ್ಕೆ ಅಡಿಯಿಟ್ಟರು.
ಈಗಾಗಲೆ ಕಾರ್ಪೊರೇಟ್ ಚಿತ್ರಗಳು, ಆಡ್ ಫಿಲಂಸ್, ಸಾಕ್ಷ್ಯಚಿತ್ರಗಳನ್ನು ಮಾಡಿದ ಅನುಭವವೂ ಜೊತೆಗಿದೆ. ಮುರಳಿ ಮೀಟ್ಸ್ ಮೀರಾ, ಭದ್ರ, ಜರಾಸಂಧ ಹಾಗೂ ಆಕ್ರಮಣ ಚಿತ್ರಗಳಿಗೆ ಸಹಾಯಕಿಯಾಗಿ ಕೆಲಸ ಮಾಡಿದ್ದಾರೆ.
ಈಗ ತಮ್ಮದೇ ಆದಂತಹ ನಿರ್ಮಾಣ ಸಂಸ್ಥೆ ತನು ಟಾಕೀಸ್ ಮೂಲಕ ಮಿರ್ಚಿ ಮಂಡಕ್ಕಿ ಕಡಕ್ ಚಾಯ್ ಕೈಗೆತ್ತಿಕೊಂಡಿದ್ದಾರೆ. "ಬಂಗಾರದ ಬಿಂದಿಗೇಲಿ ಕೊಳೆನೀರು ತುಂಬ್ಸೋದಕ್ಕಿಂತ ಮಣ್ಣಿನ ಗಡಿಗೇಲಿ ಎಳನೀರು ತುಂಬ್ಸೋದು ಲೇಸು ಅನ್ನೋದು ಮನವರಿಕೆಯಾದಾಗಲೇ ಹುಟ್ಟಿಕೊಂಡಿದ್ದು ಈ ತನು ಟಾಕೀಸ್" ಎನ್ನುತ್ತಾರೆ ಸಂತೋಜಾ.
ಮೂವರು ಸ್ನೇಹಿತರು ಹಾಗೂ ಕಾಲೇಜು ದಿನಗಳ ಬಳಿಕದ ಕಥಾಹಂದರವನ್ನು 'ಮಿರ್ಚಿ ಮಂಡಕ್ಕಿ ಕಡಕ್ ಚಾಯ್' ಚಿತ್ರ ಒಳಗೊಂಡಿದೆ. ಜೀವನ ಹಾಗೂ ಸಂಬಂಧಗಳಿಗೆ ಹೊಸ ಅರ್ಥ ಹುಡುಕುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ.
ರತೀಶ್ ಛಾಯಾಗ್ರಹಣರುವ ಈ ಚಿತ್ರಕ್ಕೆ ಎಂ.ಎಸ್.ಬಾಲ ಅವರ ಸಂಕಲನವಿದೆ. ಹರಿಕಾವ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಕೆ.ಕಲ್ಯಾಣ್ ಹಾಗೂ ಸಂಜೋತಾ ಬರೆದಿದ್ದಾರೆ. ಪ್ರದೀಪ್, ನಮ್ರತಾ, ಸಚಿನ್, ನಿಮಿಷ, ಬಸವಲಿಂಗಯ್ಯ ಹೀರೆಮಠ್, ವಿಶ್ವೇಶ್ವರಿ ಹಿರೇಮಠ್, ವಿಶಾಲ್, ಅಪೂರ್ವ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











