ಕಿರಿಕ್ ನಂತ್ರ 'ನೈಸಾಗಿ' ಶೂಟಿಂಗಿಗೆ ಬಂದ ಐರಾವತ
ಅಂತೂ ವಿವಾದಗಳೆಲ್ಲವೂ ಬಗೆಹರಿದ ಹಾಗಿದೆ. ಇಲ್ಲಿಯವರೆಗೂ ಕೇವಲ ಅಂತೆ ಕಂತೆಗಳ ಗೂಡಾಗಿ, ಕಾಂಟ್ರವರ್ಸಿ ಕ್ರಿಯೇಟ್ ಮಾಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಮಿಸ್ಟರ್ ಐರಾವತ' ಚಿತ್ರದ ಚಿತ್ರೀಕರಣ ಸದ್ದಿಲ್ಲದೇ ನಡೆಯುತ್ತಿದೆ.
ನೈಸ್ ರೋಡ್ ಸುತ್ತ ಮುತ್ತ 'ಮಿಸ್ಟರ್ ಐರಾವತ' ಚಿತ್ರದ ಸಾಹಸ ಸನ್ನಿವೇಶದ ಚಿತ್ರೀಕರಣ ಶುರುವಾಗಿದೆ. ಫೈಟ್ ಮಾಸ್ಟರ್ ರಾಮ್ ಲಕ್ಷ್ಮಣ್ ಸಂಯೋಜನೆಯಲ್ಲಿ 'ದಾಸ' ದರ್ಶನ್ ಮೈನವಿರೇಳಿಸುವ ಸಾಹಸ ಮಾಡಿದ್ದಾರೆ. [ದರ್ಶನ್ ಮತ್ತು ಎ.ಪಿ.ಅರ್ಜುನ್ ಮಧ್ಯೆ ತಂದಿಟ್ಟವರಾರು?]

ಕಳೆದ ವರ್ಷದಿಂದ 'ಮಿಸ್ಟರ್ ಐರಾವತ' ಚಿತ್ರದ ಚಿತ್ರೀಕರಣ ನಡೆಯುತ್ತಲೇ ಇದೆ. ಶೂಟಿಂಗ್ ತಡವಾಗುತ್ತಿರುವುದಕ್ಕೆ ನಿರ್ದೇಶಕ ಎ.ಪಿ.ಅರ್ಜುನ್ ದುರಹಂಕಾರ ಕಾರಣ. ಆದ್ದರಿಂದ ದರ್ಶನ್, ನಿರ್ದೇಶಕ ಅರ್ಜುನ್ ಗೆ ಗೂಸಾ ನೀಡಿದ್ದಾರೆ. ಗಲಾಟೆಗಳೇ ಆದರೂ, ಅರ್ಜುನ್ ಎಚ್ಚೆತ್ತುಕೊಂಡಿಲ್ಲ ಎಂಬೆಲ್ಲಾ ಮಾತುಗಳು ಗಾಂಧಿನಗರದ ಮೂಲೆ ಮೂಲೆಗಳಲ್ಲಿ ಕೇಳಿ ಬಂದಿತ್ತು. [ಎ.ಪಿ.ಅರ್ಜುನ್ ವಿರುದ್ಧ ತಿರುಗಿಬಿದ್ದ ದರ್ಶನ್ ಕಂಪನಿ]
ಆದ್ರೆ, ಎಲ್ಲಾ ಕಂತೆ ಪುರಾಣಗಳಿಗೆ ಫುಲ್ ಸ್ಟಾಪ್ ಇಟ್ಟಿರುವ ನಿರ್ದೇಶಕ ಎ.ಪಿ.ಅರ್ಜುನ್, ತಮ್ಮ ಮತ್ತು ದರ್ಶನ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಇದಲ್ಲದೇ, ಬಾಕಿ ಉಳಿದಿರುವ ಸಾಹಸ ಸನ್ನಿವೇಶದ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಕೊಟ್ಟು ಉರಿಯುತ್ತಿರುವ ಬೆಂಕಿಗೆ ನೀರು ಸುರಿದಿದ್ದಾರೆ.

ಅಲ್ಲಿಗೆ, ಮೇಲ್ನೋಟಕ್ಕೆ ಎಲ್ಲವೂ ಆಲ್ ಈಸ್ ವೆಲ್ ಅಂತಿದೆ. ಇದೇ ರೇಂಜಲ್ಲಿ ಬಿರುಸಿನಿಂದ ಚಿತ್ರೀಕರಣ ಸಾಗಿದರೆ, ಆಗಸ್ಟ್ ಹೊತ್ತಿಗೆ 'ಮಿಸ್ಟರ್ ಐರಾವತ' ತೆರೆಗೆ ಬರುವುದು ಖಚಿತ. ದರ್ಶನ್ ಫ್ಯಾನ್ಸ್ ಗೆ ಇದಕ್ಕಿಂತ ಗುಡ್ ನ್ಯೂಸ್ ಬೇಕಾ? (ಫಿಲ್ಮಿಬೀಟ್ ಕನ್ನಡ)


Click it and Unblock the Notifications











