'ರಾಮಾಚಾರಿ' ನಿರ್ದೇಶಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..!
ಕೇವಲ ಕೆಲವೇ ದಿನಗಳ ಹಿಂದೆ ನಿರ್ದೇಶಕ ಸಂತೋಷ್ ಅನಂದರಾಮ್ ಯಾರು ಅನ್ನೋದು ಗಾಂಧಿನಗರದವ್ರಿಗೆ ಗೊತ್ತಿರಲಿಲ್ಲ. ಆದ್ರೀಗ, 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಬಿಡುಗಡೆ ಆದ್ಮೇಲೆ ಸ್ಯಾಂಡಲ್ ವುಡ್ ನ ಎಲ್ಲಾ ನಿರ್ಮಾಪಕರೂ, ಸಂತೋಷ್ ಅನಂದರಾಮ್ ಮನೆ ಮುಂದೆ ಕ್ಯೂ ನಿಂತಿದ್ದಾರೆ.
''ನನಗೊಂದು ಸಿನಿಮಾ ಮಾಡಿಕೊಡಿ...ಲೇಟ್ ಆದರೂ ಪರ್ವಾಗಿಲ್ಲ, ನಮ್ಮ ಬ್ಯಾನರ್ ನಲ್ಲಿ ನೀವೊಂದು ಸಿನಿಮಾ ಮಾಡ್ಲೇಬೇಕು'' ಅಂತ ದೊಡ್ಡ ದೊಡ್ಡ ನಿರ್ಮಾಪಕರು ದುಂಬಾಲು ಬಿದ್ದಿದ್ದಾರಂತೆ. [ಬಾಕ್ಸ್ ಆಫೀಸ್ ನಲ್ಲಿ 'ರಾಮಾಚಾರಿ' ತಕಧಿಮಿತ]

ಅದೃಷ್ಟ ಅಂದ್ರೆ ಇದೇ ಇರಬೇಕು ನೋಡಿ. ಇನ್ಫೋಸಿಸ್ ನಲ್ಲಿ ಉದ್ಯೋಗಿಯಾಗಿದ್ದರೂ, ಸಿನಿಮಾ ಆಸಕ್ತಿಯಿಂದ ಕೈಲಿದ್ದ ಕೆಲಸವನ್ನ ಬಿಟ್ಟು, ಸ್ಯಾಂಡಲ್ ವುಡ್ ಗೆ ಬಂದ ಉಡುಪಿ ಮೂಲದ ಸಂತೋಷ್ ಅನಂದರಾಮ್, ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದಕ್ಕೆ ಆರು ವರ್ಷಗಳು ಬೇಕಾಯ್ತು.
ಯಶ್ ಅಭಿನಯದ 'ರಾಕಿ' ಚಿತ್ರದ ಹಾಡೊಂದಕ್ಕೆ ಮೊದಲು ಸಾಹಿತ್ಯ ಬರೆದ ಸಂತೋಷ್, ನಂತರ 'ಚಿಂಗಾರಿ' ಚಿತ್ರಕ್ಕೆ ಸಹಾಯಕ ನಿರ್ದೇಶಕನಾದರು. ನವರಸ ನಾಯಕ ಜಗ್ಗೇಶ್ ಅಭಿನಯದ 'ಅಗ್ರಜ' ಮತ್ತು ಯಶ್ ಅಭಿನಯದ 'ಗಜಕೇಸರಿ' ಚಿತ್ರಕ್ಕೆ ಸಂಭಾಷಣೆ ಬರೆದಿದ್ದು ಇದೇ ಸಂತೋಷ್ ಅನಂದರಾಮ್ ಅನ್ನುವುದು ಅನೇಕರಿಗೆ ಗೊತ್ತಿಲ್ಲ. [ಸಪ್ತ ಸಾಗರದಾಚೆಗೆ ಹಾರಿದ 'ರಾಮಾಚಾರಿ']

ಮೊದಲ ಚಿತ್ರದಿಂದಲೂ ಯಶ್ ಜೊತೆ ಒಡನಾಟ ಇಟ್ಟುಕೊಂಡಿದ್ದ ಸಂತೋಷ್, ಎರಡು ವರ್ಷಗಳ ಹಿಂದೆಯೇ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರಕಥೆಯನ್ನ ರೆಡಿಮಾಡಿಟ್ಟುಕೊಂಡು, ಅದನ್ನ ಯಶ್ ಮತ್ತು ರಾಧಿಕಾ ಪಂಡಿತ್ ಗೆ ಹೇಳಿದ್ದರಂತೆ. ಆದ್ರೆ, ಇಬ್ಬರೂ ಬಿಜಿಯಿದ್ದ ಕಾರಣ, ಕಳೆದ ವರ್ಷ 'ರಾಮಾಚಾರಿ'ಗೆ ಮುಹೂರ್ತ ಫಿಕ್ಸ್ ಆಯ್ತು.
ಅಂದುಕೊಂಡಿದ್ದನ್ನ ತೆರೆಮೇಲೆ, ಅಚ್ಚುಕಟ್ಟಾಗಿ ನಿರೂಪಿಸಿರುವ ಸಂತೋಷ್ ಗೆ ಸದ್ಯ ಗಾಂಧಿನಗರದಲ್ಲಿ ಬೇಡಿಕೆ ಹೆಚ್ಚಾಗ್ಬಿಟ್ಟಿದೆ. ಮೊದಲ ಚಿತ್ರದಲ್ಲೇ ಇಂತಹ ಮೋಡಿ ಮಾಡಿರುವ ಈ ಪ್ರತಿಭೆಗೆ ಇದೀಗ ನಿರ್ಮಾಪಕರು ಮಣೆ ಹಾಕ್ತಿದ್ದಾರೆ. [ವಿಷ್ಣು ಅಭಿಮಾನಿಗಳೇ, 'ರಾಮಾಚಾರಿ' ನೋಡಲು ಮರೆಯದಿರಿ..]
'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ರಿಲೀಸ್ ಆಗಿ ಇನ್ನೂ ಮೂರು ವಾರಗಳಾಗಿದೆ ಅಷ್ಟೆ. ಅಷ್ಟು ಬೇಗ, ಸಂತೋಷ್ ಮೂರು ಚಿತ್ರಗಳನ್ನ ಒಪ್ಪಿಕೊಂಡಿದ್ದಾರೆ. ಅದು ದೊಡ್ಡ ನಿರ್ಮಾಪಕರ ಚಿತ್ರಗಳಿಗೇ ಅಂತೆ. ಅದಾಗಲೇ ಏಳೆಂಟು ನಿರ್ಮಾಪಕರು ಮಾತುಕತೆ ನಡೆಸಿದ್ದರೂ, ಎಲ್ಲಾ ಆಫರ್ ಗಳನ್ನೂ ಒಪ್ಪಿಕೊಳ್ಳದೇ ಮೂರಕ್ಕೇ ಮಾತ್ರ ಸಹಿ ಹಾಕಿದ್ದಾರಂತೆ.

''ಸ್ಕ್ರಿಪ್ಟ್ ವರ್ಕ್ ನಲ್ಲಿ ಬಿಜಿಯಿದ್ದೀನಿ. ನನ್ನ ಕೆಲಸದ ಮೇಲೆ ನಂಬಿಕೆ ಇಟ್ಟು ಆರೇಳು ಜನ ನಿರ್ಮಾಪಕರು ಮಾತುಕತೆ ನಡೆಸಿದ್ದಾರೆ. ಅವರ ಭರವಸೆಯನ್ನ ನಾನು ಉಳಿಸಿಕೊಳ್ಳಬೇಕು. ನನ್ನ ಮುಂದಿನ ಪ್ರಾಜೆಕ್ಟ್ ಸದ್ಯದಲ್ಲೇ ಅನೌನ್ಸ್ ಮಾಡುತ್ತೇನೆ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ಸಂತೋಷ್ ಅನಂದರಾಮ್ ತಿಳಿಸಿದ್ದಾರೆ.
ಇನ್ನೂ ಇದೇ ಯಶ್ ಜೊತೆ ಸಂತೋಷ್ ಮತ್ತೊಂದು ಸಿನಿಮಾ ಮಾಡ್ತಿದ್ದಾರೆ. ಆದ್ರೆ. ಸದ್ಯಕ್ಕೆ ಸಂತೋಷ್-ಯಶ್, ಇಬ್ಬರೂ ಬೇರೆ ಪ್ರಾಜೆಕ್ಟ್ ಗಳಿಗೆ ಕಮ್ಮಿಟ್ ಆಗಿರುವ ಕಾರಣ, 2016ರ ಕೊನೆಯಲ್ಲಿ ಮತ್ತೊಮ್ಮೆ ಸಂತೋಷ್-ಯಶ್ ಕಾಂಬಿನೇಷನ್ ನ ಎರಡನೇ ಚಿತ್ರಕ್ಕೆ ಚಾಲನೆ ಸಿಗಲಿದೆ. [ಯಶ್ 'ರಾಮಾಚಾರಿ' ಮುಂದೆ ಕೇಕೆ ಹಾಕಲಿಲ್ಲ ಆಮೀರ್ 'ಪಿಕೆ']
ಮೂರ್ಮೂರು ಪ್ರಾಜೆಕ್ಟ್ ಗಳಿಗೆ ಕೆಲಸ ಮಾಡುತ್ತಿರುವ ಸಂತೋಷ್, ನೆಕ್ಸ್ಟ್ ಯಾರಿಗೆ ಆಕ್ಷನ್ ಕಟ್ ಹೇಳ್ತಾರೆ ಅನ್ನುವುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಅಂತೂ ವರ್ಷಗಳ ಪರಿಶ್ರಮಕ್ಕೆ ಕಡೆಗೂ ಫಲ ಗಿಟ್ಟಿಸಿಕೊಂಡಿರುವ ಸಂತೋಷ್, ಸ್ಯಾಂಡಲ್ ವುಡ್ ನ ನೂತನ ಭರವಸೆಯ ನಿರ್ದೇಶಕನಾಗಿರುವುದು ಸತ್ಯ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











