Exclusive: ಯಶ್, ರಾಮ್ಚರಣ್, ವಿಜಯ್ ಮೂವರಲ್ಲಿ ಯಾರ ಜೊತೆ ನರ್ತನ್ 2ನೇ ಚಿತ್ರ?
ಸೂಪರ್ ಹಿಟ್ 'ಮಫ್ತಿ' ನಂತರ ನಿರ್ದೇಶಕ ನರ್ತನ್ ಸೈಲೆಂಟ್ ಆಗಿಬಿಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವ ಮಾತಗಳು ಕೇಳಿಬಂದಿತ್ತು. ಆದರೆ ಆ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ. ಇದೆಲ್ಲದರ ಮಧ್ಯೆ ನರ್ತನ್ ಟಾಲಿವುಡ್ಗೆ ಎಂಟ್ರಿ ಕೊಡ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
ಟಾಲಿವುಡ್ ನಟ ರಾಮ್ಚರಣ್ ಮುಂದಿನ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಸುದ್ದಿ ಭಾರೀ ಸದ್ದು ಮಾಡ್ತಿದೆ. ಯಶ್ಗಾಗಿ ಮಾಡಿದ್ದ ಕಥೆಯನ್ನು ಚರಣ್ಗೆ ಹೇಳಿದ್ದಾರೆ. ಚಿತ್ರದಲ್ಲಿ ಮೆಗಾ ಪವರ್ ಸ್ಟಾರ್ ನೇವಿ ಆಫೀಸರ್ ರೋಲ್ ಮಾಡ್ತಾರೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ನಿರ್ಮಾಣ ಆಗುತ್ತೆ. ಚರಣ್ ಕೂಡ ಈ ಚಿತ್ರದಲ್ಲಿ ನಟಿಸಲು ಉತ್ಸುಕರಾಗಿದ್ದಾರೆ ಎನ್ನುವ ಬಗ್ಗೆ ತೆಲುಗು ಮಾಧ್ಯಮಗಳಲ್ಲಿ ವರದಿ ಆಗುತ್ತಲೇ ಇದೆ. ಆದರೆ ಈವರೆಗೆ ಈ ಬಗ್ಗೆ ಖಚಿತ ಮಾಹಿತಿ ಮಾತ್ರ ಸಿಗಲೇಯಿಲ್ಲ.
ಕಳೆದೊಂದು ವಾರದಿಂದ ರಾಮ್ಚರಣ್ ಬದಲು ವಿಜಯ್ ದೇವರಕೊಂಡ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಚರ್ಚೆ ಆಗ್ತಿದೆ. ಈ ಎಲ್ಲಾ ಅಂತೆಕಂತೆ ಸುದ್ದಿಗಳ ಬಗ್ಗೆ ಇದೀಗ ಸ್ವತಃ ನರ್ತನ್ ಫಿಲ್ಮಿಬೀಟ್ಗೆ ಮಾಹಿತಿ ನೀಡಿದ್ದಾರೆ.

ಯಾವುದು ಫೈನಲ್ ಆಗಿಲ್ಲ
ತಮ್ಮ ಮುಂದಿನ ಸಿನಿಮಾ ಬಗೆಗಿನ ಎಲ್ಲಾ ಗೊಂದಲಗಳಿಗೂ ನಿರ್ದೇಶಕ ನರ್ತನ್ ತೆರೆ ಎಳೆದಿದ್ದಾರೆ. "ಒಂದು ಕಥೆ ಮಾಡಿಕೊಂಡು ನಿರ್ಮಾಪಕರಿಗೆ ಹೇಳಿದಾಗ ಮೂರ್ನಾಲ್ಕು ಜನ ಹೀರೊಗಳಿಗೆ ಅದು ಸೂಟ್ ಆಗುತ್ತೆ ಎಂದು ಚರ್ಚೆ ಆಗುತ್ತದೆ. ಆದರೆ ಯಾರು ನಟಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ನಾನು ಒಂದಷ್ಟು ಕಥೆಗಳನ್ನು ಮಾಡುತ್ತಿದ್ದೇನೆ. ಆದರೆ ಯಾವುದು ಯಾರಿಗೆ? ಎನ್ನುವುದು ಇನ್ನು ಫೈನಲ್ ಆಗಿಲ್ಲ. ಎಲ್ಲಾ ಕನ್ಫರ್ಮ್ ಆಗ್ತಿದ್ದಂತೆ ಹೇಳುತ್ತೇನೆ" ಎಂದು ನರ್ತನ್ ಹೇಳಿದ್ದಾರೆ.

ಪ್ಯಾನ್ ಇಂಡಿಯಾ ಜಮಾನ ಇದು
"ಈಗ ಕನ್ನಡದಲ್ಲೇ ಸಿನಿಮಾ ಮಾಡಬೇಕು ಅಂತೇನು ಇಲ್ಲ. ಪ್ಯಾನ್ ಇಂಡಿಯಾ ಟ್ರೆಂಡ್ ಇರುವುದರಿಂದ ಎಲ್ಲಿ ಬೇಕಾದರೂ ಸಿನಿಮಾ ಮಾಡಬಹುದು. ಎಲ್ಲಿಗೆ ಬಾಣ ಬಿಟ್ರು ಎಲ್ಲಾ ಕಡೆಗೂ ಹೋಗುತ್ತೆ. ಶಂಕರ್ ನಿರ್ದೇಶನದ ಸಿನಿಮಾ ನಂತರ ರಾಮ್ಚರಣ್ ಮುಂದಿನ ಚಿತ್ರಕ್ಕೆ ಬುಚ್ಚಿಬಾಬು ಆಕ್ಷನ್ ಕಟ್ ಹೇಳ್ತಾರೆ. ಅದು ಕನ್ಫರ್ಮ್ ಆಗಿದೆ. ಆದರೆ ನಾನು ನಿರ್ದೇಶನ ಮಾಡುವುದರ ಬಗ್ಗೆ ಚರ್ಚೆ ಆಗಿಲ್ಲ. ಸದ್ಯ ನಾನು ನನ್ನ ವೈಯಕ್ತಿಕ ಕೆಲಸಗಳಲ್ಲಿ ಬ್ಯುಸಿ ಆಗಿದ್ದೀನಿ. ಇನ್ನು 15ರಿಂದ ತಿಂಗಳ ಮಟ್ಟಿಗೆ ಸಿನಿಮಾ ಕೆಲಸಗಳನ್ನು ಪಕ್ಕಕ್ಕೆ ಇಟ್ಟಿದ್ದೀನಿ. ಆಮೇಲೆ ಮತ್ತೆ ಸಿನಿಮಾಗಳ ಬಗ್ಗೆ ಯೋಚನೆ ಮಾಡುತ್ತೇನೆ"

ಎಲ್ಲದಕ್ಕೂ ಕಾಲ ಕೂಡಿ ಬರಬೇಕು
'ಮಫ್ತಿ' ಸಿನಿಮಾ ಬಂದು 5 ವರ್ಷ ಆಯಿತು. ಆ ನಂತರ ಯಾವುದೇ ಸಿನಿಮಾ ಮಾಡಿಲ್ಲ ಎನ್ನುವ ಪ್ರಶ್ನೆಗೆ "ಒಂದು ಸಿನಿಮಾ ಮಾಡಲು ಎಲ್ಲವೂ ಕೂಡಿ ಬರಬೇಕು. ನಾನು ಒಂದು ಕಥೆ ಮಾಡಿದರೆ ಅದಕ್ಕೆ ನಿರ್ಮಾಪಕರು ಸಿಗಬೇಕು. ಆ ಕಥೆಯನ್ನು ಹೀರೊ ಓಕೆ ಮಾಡಬೇಕು. ಅಥವಾ ನಿರ್ಮಾಪಕರು ಕಥೆ ಹಿಡಿದು ಬಂದರೆ ಅದನ್ನು ಹೀರೊ, ನಿರ್ದೇಶಕರು ಒಪ್ಪಬೇಕು. ಮೂವರು ಒಟ್ಟಾಗಿ ಒಂದು ಕಥೆಯನ್ನು ಒಪ್ಪಿ ಸಿನಿಮಾ ಮಾಡೋಣ ಎಂದಾಗ ಮಾತ್ರ ಅದು ಶುರುವಾಗುತ್ತದೆ. ಅಲ್ಲಿವರೆಗೂ ಯಾವುದು ಗ್ಯಾರೆಂಟಿ ಇಲ್ಲ. ಕೊರೊನಾ ಕಾರಣದಿಂದ ಮಧ್ಯದಲ್ಲಿ ಕೊಂಚ ತಡವಾಯಿತು"

ಯಶ್19 ಚಿತ್ರಕ್ಕೂ ನರ್ತನ್ ಕಥೆ
"ರಾಮ್ಚರಣ್ ಮಾತ್ರವಲ್ಲ ಈಗ ಒಂದು ವಾರದಿಂದ ವಿಜಯ್ ದೇವರಕೊಂಡ ಜೊತೆಗೂ ಸಿನಿಮಾ ಮಾಡ್ತೀನಿ ಎಂದು ಸುದ್ದಿ ಆಗುತ್ತಿದೆ. ಆದರೆ ಯಾವುದು ನಿಜ ಅಲ್ಲ. ಮುಂದೆ ಏನು ಆಗುತ್ತದೆ ಎಂದು ನೋಡೋಣ" ಎಂದು ಬರ್ತನ್ ಮಾಹಿತಿ ನೀಡಿದ್ದಾರೆ. 'ಉಗ್ರಂ' ಹಾಗೂ 'ರಥಾವರ' ಸಿನಿಮಾಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದ ನರ್ತನ್ 'ಮಫ್ತಿ' ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದರು. ಮೊದಲ ಪ್ರಯತ್ನದಲ್ಲೇ ಸೂಪರ್ ಹಿಟ್ ಕೊಟ್ಟಿದ್ದರು. ಯಶ್19 ಚಿತ್ರಕ್ಕೂ ಕಥೆ ಸಿದ್ಧಪಡಿಸುತ್ತಿದ್ದಾರೆ. ಆದರೆ ಯಾವುದು ಪಕ್ಕಾ ಆಗಿಲ್ಲ.


Click it and Unblock the Notifications











