ಚಿಕ್ಕಮಗಳೂರಿನಲ್ಲಿ ಜನರನ್ನು ಸೆಳೆದ 'ಮುಖ್ಯಮಂತ್ರಿ' ನಾಟಕ
ಇದುವರೆಗೂ 780ಕ್ಕೂ ಹೆಚ್ಚು ಪ್ರದರ್ಶನ ಕಂಡಿರುವ ಮುಖ್ಯಮಂತ್ರಿ ನಾಟಕ ಮತ್ತೊಮ್ಮೆ ವೇದಿಕೆ ಮೇಲೆ ಮನೋಜ್ಞವಾಗಿ ಮೂಡಿಬಂದು ಮೂರು ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಟಿ.ಎಸ್.ಲೋಹಿತಾಶ್ವ ನೆನಪಿನಲ್ಲಿ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ನಾಟಕ ಪ್ರದರ್ಶನ ರಾಜಕೀಯ ವಿದ್ಯಮಾನಗಳನ್ನು ಕತೆಯ ರೂಪದಲ್ಲಿ ತೆರೆದಿಟ್ಟು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು.
ರಾಜಕೀಯ ಚದುರಂಗದಾಟದಲ್ಲಿ ಮುಖ್ಯಮಂತ್ರಿ ಹುದ್ದೆಗಿಟ್ಟಿಸಿಕೊಳ್ಳಲು ಏನೆಲ್ಲಾ ಕಸರತ್ತು ಮಾಡಬೇಕು ಎಂಬುದನ್ನು ತೆರೆದಿಟ್ಟ ಇಡೀ ನಾಟಕದಲ್ಲಿ ಮುಖ್ಯ ಭೂಮಿಕೆಯಲ್ಲಿ ಮುಖ್ಯಮಂತ್ರಿ ಪಾತ್ರಧಾರಿಯಾಗಿ ಸಿನಿಮಾ ನಟ ಮುಖ್ಯಮಂತ್ರಿ ಚಂದ್ರು ನಟಿಸಿದರು. ಅವರ ನಿರರ್ಗಳ ಸಂಭಾಷಣೆ, ಚುಟುಕು ಹಾಸ್ಯ, ಗಂಭೀರ್ಯ, ವಾಕ್ಚಾತುರ್ಯ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.

'ಇದೊಂದು ವಿಶೇಷವಾದ ನಾಟಕ'
ನಾಟಕದ ನಿರ್ದೇಶಕ ರಾಜಾರಾಂ ನಾಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಇದೊಂದು ವಿಶೇಷವಾದ ನಾಟಕ. ದೇಶ ವಿದೇಶದಲ್ಲೂ ಪ್ರದರ್ಶನ ಕಂಡಿದೆ. ಎಲ್ಲಿ ಹೋದರೂ ಕನ್ನಡಿಗರ ಪ್ರೀತಿಯ ಬಾಂಧ್ಯವ್ಯ ನಮಗೆ ದೊರೆತಿದೆ. ಜಿಲ್ಲೆಯಲ್ಲಿ ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜನೆ ಮಾಡುವ ಉತ್ಸುಕತೆ ಕಸಾಪ ಅಧ್ಯಕ್ಷರಿಗಿದ್ದಂತಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತನಾಡಿ, ನಾಟಕಕಾರ ಷೇಕ್ಸ್ಪಿಯರ್ ಹೇಳಿರುವಂತೆ ಈ ಪ್ರಪಂಚವೇ ಒಂದು ನಾಟಕ ರಂಗ. ನಾವೆಲ್ಲಾ ಪಾತ್ರಧಾರಿಗಳು ಎಂದರು. ಸಾಹಿತ್ಯ ಪ್ರಕಾರಗಳಲ್ಲಿ ನಾಟಕವೂ ಒಂದು. ಮುಖ್ಯಮಂತ್ರಿ ನಾಟಕ 700ಕ್ಕೂ ಹೆಚ್ಚು ಪ್ರದರ್ಶನ ಕಂಡಿರುವುದು ಅದರ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ ಎಂದರು.

780 ಪ್ರದರ್ಶನಗಳನ್ನು ಕಂಡಿರುವ ನಾಟಕ
780 ಪ್ರದರ್ಶನಗಳನ್ನು 'ಮುಖ್ಯಮಂತ್ರಿ' ನಾಟಕ ಕಂಡಿದ್ದು ಎಲ್ಲ ಪ್ರದರ್ಶನಗಳೂ ಹೌಸ್ಫುಲ್ ಆಗಿರುವುದು ಈ ನಾಟಕದ ಜನಪ್ರಿಯತೆ ಹಾಗೂ ಗುಣಮಟ್ಟಕ್ಕೆ ಉದಾಹರಣೆ. ಈ ನಾಟಕದಲ್ಲಿ ಮುಖ್ಯಮಂತ್ರಿ ಪಾತ್ರವಹಿಸುವ ಚಂದ್ರು ಅವರಿಗೆ ಇದೇ ನಾಟಕದಿಂದಾಗಿ ಮುಖ್ಯಮಂತ್ರಿ ಚಂದ್ರು ಹೆಸರು ಅಂಟಿಕೊಂಡಿದೆ. ದಶಕಗಳಿಂದಲೂ ಈ ನಾಟಕ ಪ್ರದರ್ಶನ ಆಗುತ್ತಿತ್ತು. ಆಯಾ ಕಾಲಘಟ್ಟದ ರಾಜಕೀಯವನ್ನು ವಿಡಂಬನೆ ಮಾಡುತ್ತಾ ಬಂದಿದೆ ಈ ನಾಟಕ.

ಚಿಕ್ಕಮಗಳೂರಿನಲ್ಲೂ ಯಶಸ್ವಿಯಾದ ನಾಟಕ
'ಮುಖ್ಯಮಂತ್ರಿ' ನಾಟಕವನ್ನು ಹಲವು ಮುಖ್ಯಮಂತ್ರಿಗಳು ಸಹ ವೀಕ್ಷಿಸಿರುವುದು ವಿಶೇಷ. ಆಯಾ ಕಾಲಕ್ಕೆ ರಾಜಕೀಯ ವಿಡಂಬನೆಯನ್ನು ಮಾಡುತ್ತಾ, ರಾಜಕೀಯದ ಒಳಸುಳಿಗಳನ್ನು ಪ್ರೇಕ್ಷಕರ ಮುಂದೆ ಇಡುತ್ತಾ ಬಂದಿದೆ ಈ ನಾಟಕ. ರಂಗ ಪ್ರಯೋಗಗಳು ಹೆಚ್ಚಾಗಿ ನಡೆವ ಬೆಂಗಳೂರು, ಮೈಸೂರು ಇನ್ನಿತರೆ ಕೆಲವು ನಗರಗಳಲ್ಲಿ ಈ ನಾಟಕ ಸಾಕಷ್ಟು ಪ್ರದರ್ಶನ ಕಂಡಿದೆ. ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲಿಯೂ ಭಾರಿ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯುವಲ್ಲಿ ನಾಟಕ ಯಶಸ್ವಿಯಾಗಿರುವುದು ಈ ನಾಟಕದ ಗುಣಮಟ್ಟಕ್ಕೆ ಸಾಕ್ಷಿ.


Click it and Unblock the Notifications











