ಸೆನ್ಸಾರ್ ಬಾಗಿಲು ಬಂದ್ : ಅತಂತ್ರದತ್ತ ಕನ್ನಡ ಚಿತ್ರಗಳು
ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳು ಶಾಕ್ ಆಗುವ ಸುದ್ದಿಯೊಂದು ಹೊರಬಿದ್ದಿದೆ. ಬಿಡುಗಡೆಗೆ ಸಿದ್ದವಾಗಿರುವ ಕನ್ನಡ ಚಿತ್ರಗಳಿಗೆ ಸದ್ಯಕ್ಕೆ ಸೆನ್ಸಾರ್ ಭಾಗ್ಯವಿಲ್ಲ ಎನ್ನುವ ಸುದ್ದಿ ಮುಂಬೈನಿಂದ ಕೇಳಿಬರುತ್ತಿದೆ.
ಬೆಂಗಳೂರಿನ ಸೆನ್ಸಾರ್ ಬೋರ್ಡಿನ ಅಧಿಕಾರಿಗಳು ಸಾಮೂಹಿಕವಾಗಿ ವರ್ಗಾವಣೆಯಾದ ನಂತರ, ಕನ್ನಡ ಚಿತ್ರಗಳನ್ನು ಮುಂಬೈ ಸೆನ್ಸಾರ್ ಬೋರ್ಡಿನಿಂದ ಕ್ಲಿಯರ್ ಮಾಡಲಾಗುತ್ತಿತ್ತು.
ಬಹುಪರಾಕ್, ಮಿಸ್ ಮಲ್ಲಿಗೆ, ಶರಣ್ ಅಧ್ಯಕ್ಷ ಮುಂತಾದ ಚಿತ್ರಗಳಿಗೆ ಮುಂಬೈ ಸೆನ್ಸಾರ್ ಬೋರ್ಡ್ ಸರ್ಟಿಫಿಕೇಟ್ ನೀಡಿತ್ತು. ಮುಂಬೈನಿಂದ ಚಿತ್ರಕ್ಕೆ ಸೆನ್ಸಾರ್ ಆಗಲು ಬೆಂಗಳೂರು ಮಂಡಳಿಯ ಸೆನ್ಸಾರ್ ಅಧಿಕಾರಿ ನಾಗೇಂದ್ರ ಸ್ವಾಮಿ ಬಹುಮಟ್ಟಿನ ಸಹಾಯ ಮಾಡಿದ್ದರು.
ಆದರೆ, ಈಗ ಸೆನ್ಸಾರ್ ಬೋರ್ಡಿನ ಮುಖ್ಯ ನಿರ್ವಹಣಾ ಅಧಿಕಾರಿಯಾಗಿರುವ ರಾಕೇಶ್ ಕುಮಾರ್ ಅವರನ್ನು ಮುಂಬೈನಲ್ಲಿ ಸಿಬಿಐ ತನ್ನ ಖೆಡ್ಡಾಕ್ಕೆ ಕೆಡವಿರುವುದರಿಂದ ಕನ್ನಡ ಚಿತ್ರಗಳ ಭವಿಷ್ಯ ತೂಗೊಯ್ಯಾಲೆಯಲ್ಲಿದೆ. ಛತ್ತೀಸಗಢದ ಚಿತ್ರ ನಿರ್ಮಾಪಕರಿಂದ ಎಪ್ಪತ್ತು ಸಾವಿರ ಲಂಚ ಪಡೆಯುತ್ತಿದ್ದಾಗ ಸಿಬಿಐ, ರಾಕೇಶ್ ಕುಮಾರ್ ಅವರನ್ನು ಸೋಮವಾರ (ಆ 18) ಬಂಧಿಸಿದೆ.
ಚಿತ್ರಕ್ಕೆ ಸರ್ಟಿಫಿಕೇಟ್ ನೀಡುವ ಮುನ್ನ ಚಿತ್ರ ವೀಕ್ಷಿಸುವ ಸೆನ್ಸಾರ್ ಬೋರ್ಡಿನಲ್ಲಿ ಮಹಿಳೆಯೊಬ್ಬರು ಇರುವುದು ಕಡ್ದಾಯ. ಪಕ್ಕದ ಆಂಧ್ರ ಅಥವಾ ತಮಿಳುನಾಡಿನಿಂದ ಚಿತ್ರವನ್ನು ಸೆನ್ಸಾರ್ ಮಾಡಿಸುವುದಕ್ಕೆ ಮುಂಬೈ ಸೆನ್ಸಾರ್ ಮಂಡಳಿಯ ಅನುಮತಿ ಬೇಕಿರುವುದರಿಂದ, ಕನ್ನಡ ಚಿತ್ರಗಳನ್ನು ಅಲ್ಲಿಂದ ಕ್ಲಿಯರ್ ಮಾಡಿಸುವ ಸಾಧ್ಯತೆಗೆ ಕೂಡಾ ಹಿನ್ನಡೆಯಾಗಿದೆ. ಮುಂದೆ ಓದಿ..

ನಾಗೇಂದ್ರ ಸ್ವಾಮಿ
ಬೆಂಗಳೂರು ಸೆನ್ಸಾರ್ ಮಂಡಳಿಯಲ್ಲಿ ಅಧಿಕಾರಿಗಳ ಕೊರತೆಯ ನಂತರ, ಮುಂಬೈ ಸೆನ್ಸಾರ್ ಮಂಡಳಿಯಿಂದ ಚಿತ್ರ ಬಿಡುಗಡೆ ಮಾಡಿಸಲು ಸೆನ್ಸಾರ್ ಅಧಿಕಾರಿಯಾಗಿರುವ ನಾಗೇಂದ್ರ ಸ್ವಾಮಿ ಕೊಡುಗೆ ಅಪಾರ. ಇವರಿಂದಾಗಿಯೇ ಹೋದ ವಾರದ ವರೆಗೆ ಕೂಡಾ ಕನ್ನಡ ಚಿತ್ರಗಳು ಕ್ಲಿಯರ್ ಆಗಿದ್ದವು.

ಸಿಬಿಐ ಬಂಧನದಲ್ಲಿ ಸೆನ್ಸಾರ್ ಸಿಇಓ
ಸೆನ್ಸಾರ್ ಮಂಡಳಿಯ ಸಿಇಓ ಆಗಿರುವ ರಾಕೇಶ್ ಕುಮಾರ್ ಅವರನ್ನು ಸೋಮವಾರ ಲಂಚದ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ಬಂಧಿಸಿರುವುದು ಸಮಸ್ಯೆ ಇನ್ನಷ್ಟು ಗೋಜಲವಾಗಲು ಕಾರಣವಾಗಿದೆ.

ಮುಂಬೈ ಸೆನ್ಸಾರ್ ಮಂಡಳಿ
ಸಿಇಓ ಬಂಧನದ ನಂತರ ಮುಂಬೈ ಸೆನ್ಸಾರ್ ಮಂಡಳಿಯಲ್ಲಿ ಅಧಿಕಾರಿಗಳ ಕೊರತೆ ಎದುರಾಗಿದೆ. ಹಾಗಾಗಿ, ಮುಂದಿನ ನೇಮಕದ ವರೆಗೆ ಮುಂಬೈ ಸೆನ್ಸಾರ್ ಮಂಡಳಿಯಿಂದ ಕನ್ನಡ ಚಿತ್ರಗಳು ಸೆನ್ಸಾರ್ ಆಗುವ ಸಾಧ್ಯತೆ ಬಹಳ ಕಮ್ಮಿ ಎನ್ನುವುದೇ ಗಾಂಧಿನಗರದ ತಲೆನೋವಿಗೆ ಕಾರಣವಾಗಿರುವುದು.

ಕನ್ನಡ ನಿರ್ಮಾಪಕರಿಗೆ ದೊಡ್ಡ ಹೊಡೆತ
ಬೆಂಗಳೂರಿನಲ್ಲಿ ಇಲ್ಲದಿದ್ದರೇ ಮುಂಬೈನಲ್ಲಿ ಚಿತ್ರಗಳಿಗೆ ಸೆನ್ಸಾರ್ ಮಾಡಿಸುತ್ತಿದ್ದ ಕನ್ನಡ ಚಿತ್ರ ನಿರ್ಮಾಪಕರಿಗೆ ಇದರಿಂದಾಗಿ ಬಹುದೊಡ್ಡ ಹೊಡೆತ ಬಿದ್ದಿದೆ. ಸದ್ಯದ ಪರಿಸ್ಥಿತಿಯಲ್ಲಂತೂ ಚಿತ್ರಗಳನ್ನು ಸೆನ್ಸಾರ್ ಮಾಡಿಸುವುದು ದೂರದ ಮಾತಾಗಿದೆ.

ಪವರ್ *** ಅಬ್ಬರ ಸದ್ಯಕ್ಕಿಲ್ಲ?
ಸೆನ್ಸಾರ್ ಮಂಡಳಿಯ ತೊಂದರೆಯಿಂದಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಪವರ್*** ಚಿತ್ರ ಬಿಡುಗಡೆ ಮುಂದೆ ಹೋಗುವ ಸಾಧ್ಯತೆ ಇಲ್ಲದಿಲ್ಲ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಈ ವಾರ ಅಥವಾ ಗಣೇಶ ಹಬ್ಬದ ಸುದೀರ್ಥ ವಾರಾಂತ್ಯದಲ್ಲಿ ಚಿತ್ರ ಬಿಡುಗಡೆಗೆ ಸಿದ್ದವಾಗಿತ್ತು. ಆದರೂ ಚಿತ್ರದ ನಿರ್ದೇಶಕ ಮಾದೇಶ, ಪವರ್ ಚಿತ್ರ ಇಂದು ಸೆನ್ಸಾರಿಗೆ ಹೋಗಲಿದೆ ಎನ್ನುವ ವಿಶ್ವಾಸದ ಮಾತನ್ನಾಡಿದ್ದಾರೆ. ಜೈ ಗಣೇಶ..


Click it and Unblock the Notifications











