ನಂಬಿದ್ರೆ ನಂಬಿ.! 'ಮುಂಗಾರು ಮಳೆ'ಯ ಮೊಲ 'ದೇವದಾಸ್' ದೆವ್ವ ಆಗಿದೆ.!
2006 ರಲ್ಲಿ ಬಿಡುಗಡೆ ಆಗಿ ಸ್ಯಾಂಡಲ್ ವುಡ್ ಅಂಗಳದಲ್ಲಿ ಹೊಸ ಸಂಚಲನ ಹುಟ್ಟುಹಾಕಿದ 'ಮುಂಗಾರು ಮಳೆ' ಚಿತ್ರವನ್ನ ನೀವೆಲ್ಲಾ ನೋಡೇ ಇರ್ತೀರಾ. ಚಿತ್ರದಲ್ಲಿ ಗಣೇಶ್ ಹಾಗೂ ಪೂಜಾ ಗಾಂಧಿ ಯಂತೆ ಮೊಲ 'ದೇವದಾಸ್' ಕೂಡ ಪ್ರಮುಖ ಪಾತ್ರಧಾರಿ.
'ಮುಂಗಾರು ಮಳೆ' ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಪ್ರೀತಂ (ಗಣೇಶ್) ಲವ್ ಫೇಲ್ಯೂರ್ ಆಗ್ತಿದ್ದಂತೆ ಮೊಲ ದೇವದಾಸ್ ಕೂಡ ಪ್ರಾಣ ಬಿಡುತ್ತೆ. ಅಂದು ಕೊನೆಯುಸಿರೆಳೆದಿದ್ದ ದೇವದಾಸ್ ಇಂದು ದೆವ್ವ ಆಗಿದೆ.!!

ಹಾಗಂತ ಗಾಬರಿ ಆಗುವ ಮೊದಲು ಇದು ರೀಲ್ ಸುದ್ದಿ ಅನ್ನೋದನ್ನ ಮೊದಲು ನೆನಪಿಟ್ಟುಕೊಳ್ಳಿ. 'ಮುಂಗಾರು ಮಳೆ' ಚಿತ್ರದ ದೇವದಾಸ್ ದೆವ್ವ ಆಗಿರುವುದು ದಿಟ. ಆದರೆ ಅದು 'ರಿಕ್ತ' ಎಂಬ ಸಿನಿಮಾ ಒಂದರಲ್ಲಿ ಮಾತ್ರ. ['ರಿಕ್ತ' ಇದು ಸಂಚಾರಿ ವಿಜಯ್ ಬತ್ತಳಿಕೆಯಿಂದ ಹೊರಟ ಹೊಸ ಬಾಣ]
ಇತ್ತೀಚೆಗಷ್ಟೇ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅಭಿನಯದ 'ರಿಕ್ತ' ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ನ ಸೂಕ್ಷ್ಮವಾಗಿ ಗಮನಿಸಿದರೆ, 'ಮುಂಗಾರು ಮಳೆ' ಚಿತ್ರದಲ್ಲಿ ಗಣೇಶ್ ಹೇಗೆ ಮೊಲವನ್ನ ಬ್ಯಾಗ್ ನಲ್ಲಿ ನೇತು ಹಾಕಿಕೊಂಡು ಓಡಾಡುತ್ತಿದ್ದರೋ, ಥೇಟ್ ಅದೇ ರೀತಿಯಲ್ಲಿ ಸಂಚಾರಿ ವಿಜಯ್ ಕೂಡ ಒಂದು ಗೊಂಬೆ ಇರುವ ಬ್ಯಾಗ್ ಹಾಕೊಂಡು ಹೀರೋಯಿನ್ ಹಿಂದೆ ಅಲೆಯುತ್ತಾರೆ.

ಹಾಗೇ, 'ಹಲವು ದಿನಗಳ ಗೆಳೆಯ' ಅಂತ ಮೊಲವನ್ನು ಮಣ್ಣು ಮಾಡುವ ದೃಶ್ಯವೂ 'ರಿಕ್ತ' ಚಿತ್ರದಲ್ಲಿ ಇದೆ.

ಇದನ್ನೆಲ್ಲಾ ನೋಡಿದ್ಮೇಲೆ, 'ರಿಕ್ತ' ಚಿತ್ರಕ್ಕೂ 'ಮುಂಗಾರು ಮಳೆ' ಚಿತ್ರಕ್ಕೂ ಸಂಬಂಧ ಇದ್ಯಾ ಎಂಬ ಪ್ರಶ್ನೆ ಉದ್ಭವ ಆದಾಗ, ಸಿಕ್ಕ ಉತ್ತರ - 'ರಿಕ್ತ' ಚಿತ್ರದ ತಿರುಳು ಅಡಗಿರುವುದು ಮೊಲ 'ದೇವದಾಸ್' ಆತ್ಮದಲ್ಲಿ ಅಂತ.!
ಅಷ್ಟಕ್ಕೂ, 'ಮುಂಗಾರು ಮಳೆ' ಚಿತ್ರದ ಮೊಲ 'ದೇವದಾಸ್' ಆತ್ಮವನ್ನು 'ರಿಕ್ತ' ಚಿತ್ರದಲ್ಲಿ ತಂದವರು ನಿರ್ದೇಶಕ ಅಮೃತ್ ಕುಮಾರ್. ಒಂದು ಗೊಂಬೆಯೊಳಗೆ ಸೇರಿಕೊಳ್ಳುವ ಮೊಲ 'ದೇವದಾಸ್' ಆತ್ಮ, ಸಂಚಾರಿ ವಿಜಯ್ ಕೈಯಿಂದ ಏನೆಲ್ಲಾ ಮಾಡಿಸುತ್ತದೆ ಎಂಬುದೇ 'ರಿಕ್ತ' ಚಿತ್ರದ ಕಥಾಹಂದರ.
'ರಿಕ್ತ' ಚಿತ್ರದ ಟ್ರೈಲರ್ ನೀವಿನ್ನೂ ನೋಡಿಲ್ಲ ಅಂದ್ರೆ, ಈಗಲೇ ನೋಡಿ....


Click it and Unblock the Notifications











