ನಿರ್ದೇಶಕನಾಗುತ್ತಿದ್ದಾರೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ: ಸ್ಟಾರ್ ನಟನಿಗೆ ಆಕ್ಷನ್-ಕಟ್
ಸಿನಿಮಾ ಒಂದನ್ನು ನಿರ್ದೇಶನ ಮಾಡ ಬೇಕೆಂಬುದು ಹಲವು ಜನರ ಆಸೆ. 'ಎವ್ರಿ ಒನ್ ವಾಂಟ್ಸ್ ಟು ಮೇಕ್ ಎ ಫಿಲಂ, ಎವ್ರಿ ಓಲ್ಡ್ ಮೆನ್ ವಾಂಟ್ಸ್ ಟು ರೈಟ್ ಎ ಬುಕ್' (ಎಲ್ಲರಿಗೂ ಸಿನಿಮಾ ಮಾಡುವ ಆಸೆ, ಎಲ್ಲ ಹಿರಿಯರಿಗೂ ಪುಸ್ತಕ ಬರೆಯಬೇಕೆಂಬ ಕನಸು) ಎಂಬುದು ಇಂಗ್ಲೀಷ್ ಮಾತು.
ಈಗಾಗಲೇ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವವರಿಗೂ ಸಹ ತಾವೊಂದು ಸಿನಿಮಾ ನಿರ್ದೇಶನ ಮಾಡಬೇಕೆಂಬ ಆಸೆ ಇರುತ್ತದೆ. ಸ್ಟಾರ್ ನಟರನ್ನೂ ಸಹ ಈ ಆಸೆ ಬಿಟ್ಟಿಲ್ಲ. ಆದರೆ ಸಿನಿಮಾ ನಿರ್ದೇಶನದಲ್ಲಿ ಎಲ್ಲರೂ ಯಶಸ್ಸು ಕಂಡಿಲ್ಲ.
ಸಿನಿಮಾ ರಂಗದಲ್ಲಿ ಸಂಗೀತ ನಿರ್ದೇಶಕನಾಗಿ ದೊಡ್ಡ ಯಶಸ್ಸು ಕಂಡಿರುವ ಅರ್ಜುನ್ ಜನ್ಯ ಹೊಸ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ತಯಾರಾಗಿದ್ದಾರೆ. ಸಂಗೀತ ನಿರ್ದೇಶನದಿಂದ ಸಿನಿಮಾ ನಿರ್ದೇಶನದತ್ತ ವಾಲುತ್ತಿದ್ದಾರೆ. ಇದಕ್ಕೆ ವೇದಿಕೆಯನ್ನೂ ಸಜ್ಜು ಮಾಡಿಕೊಂಡಿದ್ದಾರೆ.

ಸಿನಿಮಾ ನಿರ್ದೇಶಿಸಲಿದ್ದಾರೆ ಅರ್ಜುನ್ ಜನ್ಯ
ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಸಿನಿಮಾ ನಿರ್ದೇಶಕನಾಗಿ ಈಗಾಗಲೇ ಯಶಸ್ಸು ಗಳಿಸಿರುವ ಹರಿಕೃಷ್ಣ ಅವರನ್ನು ಫಾಲೋ ಮಾಡುವ ಉಮೇದಿನಲ್ಲಿದ್ದಾರೆ ಅರ್ಜುನ್ ಜನ್ಯ. ಕನ್ನಡದ ದೊಡ್ಡ ಸ್ಟಾರ್ ನಟನಿಗೆ ಆಕ್ಷನ್ ಕಟ್ ಹೇಳಲು ಅರ್ಜುನ್ ತಯಾರಾಗಿದ್ದಾರೆ.

ಶಿವರಾಜ್ ಕುಮಾರ್ ಸಿನಿಮಾ ನಿರ್ದೇಶಿಸಲಿರುವ ಅರ್ಜುನ್
ನಟ ಶಿವರಾಜ್ ಕುಮಾರ್ ಸಿನಿಮಾವನ್ನು ಅರ್ಜುನ್ ಜನ್ಯ ನಿರ್ದೇಶನ ಮಾಡಲಿದ್ದಾರೆ. ಈ ಬಗ್ಗೆ ಈಗಾಗಲೇ ಮಾತುಕತೆಯನ್ನೂ ಮುಗಿಸಿದ್ದಾರೆ. 'ಗಾಳಿಪಟ' ಸಿನಿಮಾಕ್ಕೆ ಸಹ ನಿರ್ಮಾಪಕ ಆಗಿದ್ದ ರಮೇಶ್ ರೆಡ್ಡಿ ಈ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರೆ. ಸಿನಿಮಾದ ಕತೆ ಫೈನಲ್ ಆಗಿದ್ದು, ಕೆಲವು ಪ್ಯಾಚ್ ವರ್ಕ್ಗಳು ನಡೆಯುತ್ತಿವೆ. ಸಿನಿಮಾದ ಪ್ರೀ ಪ್ರೊಡಕ್ಷನ್ ಸಹ ಆರಂಭಗೊಂಡಿದ್ದು, ಈ ವರ್ಷಾಂತ್ಯಕ್ಕೆ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.

ಹಲವು ಸಂಗೀತ ನಿರ್ದೇಶಕರು ಸಿನಿಮಾ ನಿರ್ದೇಶಿಸಿದ್ದಾರೆ
ಈ ಹಿಂದೆ ಹಲವು ಸಂಗೀತ ನಿರ್ದೇಶಕರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ವಿ ಮನೋಹರ್ ಅವರು ರಮೇಶ್ ಅರವಿಂದ್, ಶಿವರಾಜ್ ಕುಮಾರ್ ಅವರಿಗಾಗಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಂಗೀತ ನಿರ್ದೇಶಕ ಸಾಧು ಕೋಕಿಲ ಸಹ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹರಿಕೃಷ್ಣ ಅವರು ದರ್ಶನ್ ಗಾಗಿ 'ಯಜಮಾನ' ಮಾಡಿದ್ದರು, ಈಗ 'ಕ್ರಾಂತಿ' ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಗೀತ ಸಾಹಿತಿ ಕವಿರಾಜ್ ಸಹ ಜಗ್ಗೇಶ್ ಅವರಿಗಾಗಿ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹಂಸಲೇಖ ಸಹ ಸಿನಿಮಾ ನಿರ್ದೇಶನ ಮಾಡಿದ್ದಾರೆ. ರವಿ ಬಸ್ರೂರು ಸಹ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಹಲವು ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿ
ನಟ ಶಿವರಾಜ್ ಕುಮಾರ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶಿವಣ್ಣ ನಟಿಸಿರುವ 'ಭೈರಾಗಿ' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಆ ಬಳಿಕ 'ನೀ ಸಿಗೋವರೆಗೆ' ಬಿಡುಗಡೆ ಆಗಲಿದೆ. ಶಿವರಾಜ್ ಕುಮಾರ್ ಹೋಂ ಬ್ಯಾನರ್ನಲ್ಲಿ 'ವೇದಾ' ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಯೋಗರಾಜ್ ಭಟ್ ನಿರ್ದೇಶನದಲ್ಲಿ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಹೊಸ ಸಿನಿಮಾಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ತೆಲುಗಿನ ನಿರ್ದೇಶಕ ರವಿ ದುಲಿಪುಡಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ನಟ ರಜನೀಕಾಂತ್ ನಟನೆಯ ಹೊಸ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಈವರ್ಷವೆಲ್ಲ ಶಿವಣ್ಣ ಬಹುತೇಕ ಬ್ಯುಸಿಯಾಗಿದ್ದಾರೆ.


Click it and Unblock the Notifications











