ಈ ರಾಜಕೀಯ ಸಹವಾಸ ಸಾಕಾಗಿ ಹೋಗಿದೆ: ಶಿವಣ್ಣ
ರಾಜಕೀಯ ನಮಗೆಲ್ಲಾ ಆಗಿಬರಲ್ಲ, ನಾನು ಕಲಾವಿದ, ಕಲಾವಿದನಾಗಿಯೇ ಇರುತ್ತೇನೆಂದು ಎಷ್ಟೇ ಒತ್ತಡ, ಜನಪ್ರಿಯತೆ ಇದ್ದರೂ ಡಾ.ರಾಜ್ ಕುಮಾರ್ ರಾಜಕೀಯಕ್ಕೆ ಧುಮುಕುವ ಮನಸ್ಸು ಮಾಡಿರಲಿಲ್ಲ.
ರಾಜ್ ಕುಟುಂಬದಲ್ಲಿ ಇದೇ ಮೊದಲು ಬಾರಿಗೆ ಎನ್ನುವಂತೆ ಕುಟುಂಬದ ಸೊಸೆ ಗೀತಾ ಶಿವರಾಜ್ ಕುಮಾರ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ ಪರಾಭವಗೊಂಡಿದ್ದಲ್ಲದೇ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿ ಬಂದಿದ್ದು ಈಗ ಇತಿಹಾಸ.

ಅದ್ಯಾಕೋ ಏನೋ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೋಮವಾರ (ಡಿ 1) ಚನ್ನಪಟ್ಟಣದಲ್ಲಿ ರಾಜಕೀಯದ ಬಗ್ಗೆ ಬೇಸರದ ಮಾತನ್ನಾಡಿದ್ದಾರೆ. ಬಹುಷ: ಕಳೆದ ಲೋಕಸಭಾ ಚುನಾವಣೆ ಅವರಿಗೆ ಈ ರೀತಿಯ ಅನುಭವ ಮತ್ತು ಪಾಠ ಕಲಿಸಿರಬಹುದು.
ನಮ್ಮ ಕುಟುಂಬ ಆಕಸ್ಮಿಕವಾಗಿ ರಾಜಕೀಯಕ್ಕೆ ಪ್ರವೇಶಿಸಿತು. ಈ ರಾಜಕೀಯದ ಸಹವಾಸ ಸಾಕಾಗಿ ಹೋಗಿದೆ, ಇನ್ನೆಂದೂ ನಮ್ಮ ಕುಟುಂಬದವರು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ಶಿವರಾಜ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ನಗರದ ಪುಟ್ಟೇಗೌಡನ ದೊಡ್ಡಿಯಲ್ಲಿ ರೇಣುಕಾ ಎಲ್ಲಮ್ಮ ದೇವಸ್ಥಾನ ಉದ್ಘಾಟಿಸಿ ಮಾತನಾಡುತ್ತಿದ್ದ ಶಿವಣ್ಣ, ಗೀತಾ ರಾಜಕೀಯ ಕುಟುಂಬದಿಂದ ಬಂದವಳು. ಹಾಗಾಗಿ ಅವಳ ಹಕ್ಕನ್ನು ನಾನು ತಿರಸ್ಕರಿಸಬಾರದೆಂದು ಚುನಾವಣೆಗೆ ನಿಲ್ಲಲು ಅನುಮತಿ ನೀಡಿದ್ದೆ ಎಂದು ಹೇಳಿದ್ದಾರೆ.

ರಾಜಕೀಯ ನಮಗೆ ಆಗಿಬರಲ್ಲಾ ಎಂದು ಅಪ್ಪಾಜಿ ಹೇಳುತ್ತಿದ್ದ ಮಾತಿನ ಅರ್ಥದ ಅನುಭವ ನಮಗೆ ಮೊದಲ ಚುನಾವಣೆಯಲ್ಲೇ ಆಗಿದೆ ಎಂದು ಶಿವರಾಜ್ ಕುಮಾರ್, ರಾಜಕೀಯದ ಬಗ್ಗೆ ವೈರಾಗ್ಯದ ಮಾತನ್ನಾಡಿದ್ದಾರೆ.
ಕಳೆದ ಲೋಕಸಭಾ (2014) ಚುನಾವಣೆಯಲ್ಲಿ ಶಿವರಾಜ್ ಕುಮಾರ್ ಪತ್ನಿ ಗೀತಾ, ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸಿದ್ದರು. ಈ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ದಾಖಲೆಯ 363,305 ಮತಗಳ ಅಂತರದಿಂದ ವಿಜೇತರಾಗಿದ್ದರು.
ಕಾಂಗ್ರೆಸ್ಸಿನ ಮಂಜುನಾಥ ಬಂಡಾರಿ ಎರಡನೇ ಸ್ಥಾನದಲ್ಲಿ ಮತ್ತು ಗೀತಾ ಶಿವರಾಜ್ ಕುಮಾರ್ 240,636 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು.


Click it and Unblock the Notifications











