ಮೈಸೂರು: ಯುವ ದಸರಾ ಸಂಭ್ರಮ ಹೆಚ್ಚಿಸಲಿದ್ದಾರೆ ಕಿಚ್ಚ ಸುದೀಪ್!
ಮೈಸೂರು ದಸರಾ ಪ್ರತಿ ವರ್ಷದಂತೆ ಈ ಬಾರಿ ಕಳೆಕಟ್ಟುತ್ತಿದೆ. ದಸರಾ ಅಂಬಾರಿ, ಅರಮನೆ ದೀಪಾಲಂಕಾರ, ನವರಾತ್ರಿ ಆಚರಣೆಗಳ ಜೊತೆಗೆ ಯುವ ದಸರಾ ಸಹ ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಈ ಬಾರಿಯೂ ಯುವ ದಸರಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಟ ಸುದೀಪ್ ಕಾರ್ಯಕ್ರಮದ ಉದ್ಘಾಟನೆ ಮಾಡಲಿರುವುದು ವಿಶೇಷ.
ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಕಾರ್ಯಕ್ರಮ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 3 ರವರೆಗೆ 7 ದಿನ ಕಾಲ ನಡೆಯಲಿದ್ದು, ಸ್ಥಳೀಯ ಕಲಾವಿದರೊಂದಿಗೆ ಸ್ಯಾಂಡಲ್ವುಡ್, ಬಾಲಿವುಡ್ ಗಾಯಕರೊಂದಿಗೆ ತಾರೆಯರು ನೃತ್ಯ ಮತ್ತು ಗಾಯನದ ಮೂಲಕ ಮೋಡಿ ಮಾಡಲಿದ್ದಾರೆ.
ಈ ಬಾರಿ ಯುವ ದಸರಾದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಂದು ದಿನ ಪೂರ್ತಿಯನ್ನು ಅಪ್ಪು ನಮನ ಕಾರ್ಯಕ್ರಮಕ್ಕೆ ಮೀಸಲಿಡಲಾಗುವುದು. ಮತ್ತೊಂದು ದಿನವನ್ನು ಮಹಿಳಾ ಕಲಾವಿದರ ನಾನಾ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಯುವ ದಸರಾ ಉಪಸಮಿತಿ ವಿಶೇಷಾಧಿಕಾರಿ ಆರ್.ಚೇತನ್ ಮಾಹಿತಿ ನೀಡಿದರು.

ಎರಡು ವರ್ಷಗಳ ಬಳಿಕ ಯುವ ದಸರಾ ನಡೆಯುತ್ತಿದ್ದು, ಸೆ.27ರಂದು ಸಂಜೆ 6ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಲಿದ್ದುಘಿ, ನಟ ಸುದೀಪ್ ಭಾಗವಹಿಸುವ ಮೂಲಕ ತಾರಾ ಮೆರುಗು ನೀಡಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ನಟ ಸುದೀಪ್ ಅವರಿಗೆ ಯಾವುದೇ ಸಂಭಾವನೆ ನೀಡುತ್ತಿಲ್ಲ. ಉಳಿದ ಕಲಾವಿದರಿಗೆ ಸಂಭಾವನೆ ನೀಡಲಾಗುತ್ತಿದ್ದು, ದಸರಾ ಬಳಿಕ ಯಾವ್ಯಾವ ಕಲಾವಿದರಿಗೆ ಎಷ್ಟು ಸಂಭಾವನೆ ನೀಡಲಾಗಿದೆ ಎಂದು ತಿಳಿಸಲಾಗುವುದು ಎಂದರು.
ಯಾವ ದಿನ ಯಾರ ಕಾರ್ಯಕ್ರಮ
ಸೆಪ್ಟೆಂಬರ್ 27ರಂದು ಶ್ರೀಧರ್ ಜೈನ್ ನೃತ್ಯ ತಂಡದಿಂದ ಕಾರ್ಯಕ್ರಮ, ಗಾಯಕರಾದ ರಘು ಧೀಕ್ಷಿತ್ ಹಾಗೂ ಗಾಯಕಿ ಮಂಗ್ಲಿ ಅವರಿಂದ ಗಾಯನ. 28ರಂದು ಅಪ್ಪು ನಮನ: ಯುವ ದಸರಾದ 2ನೇ ದಿನದ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ಕುಮಾರ್ಗೆ ಗೌರವ ಸಲ್ಲಿಸಲಾಗುತ್ತಿದ್ದು, ಗಾಯಕರಾದ ಗುರುಕಿರಣ್, ವಿಜಯಪ್ರಕಾಶ್, ಕುನಾಲ್ ಗಾಂಜಾವಾಲ ಗಾಯನದ ಮೂಲಕ ಅಪ್ಪು ಅವರಿಗೆ ನಮನ ಸಲ್ಲಿಸಲಿದ್ದಾರೆ.
ಸೆ.29ರಂದು ಲೇಸರ್ ಶೋ, ಸಿಗ್ನೇಚರ್ ಗ್ರೂಪ್ ನೃತ್ಯ ತಂಡ, ಕನ್ನಿಕಾ ಕಪೂರ್ ಮತ್ತು ಅಸೆಂಟ್ ತಂಡದಿಂದ ಕಾರ್ಯಕ್ರಮ ನಡೆಯಲಿದೆ. ಸೆಪ್ಟೆಂಬರ್ 30: ಸ್ಯಾಂಡಲ್ವುಡ್ ನೈಟ್ ಇರಲಿದ್ದು, ಕನ್ನಡ ಚಿತ್ರರಂಗದ ನಟಿ ನಟಿಯರು ಭಾಗವಹಿಸಲಿದ್ದಾರೆ. ಅಕ್ಟೋಬರ್ 1: ಗಾಯಕಿ ಡಾ.ಶಮಿತ ಮಲ್ನಾಡ್ ತಮ್ಮ ಗಾಯನದ ಮೂಲಕ ರಂಜಿಸಲಿದ್ದಾರೆ. ಅಕ್ಟೋಬರ್ 2: ಪವನ್ ಡ್ಯಾನ್ಸರ್, ನಟಿ ಹರ್ಷಿಕಾ ಪೂಣಚ್ಚ, ನಟ ವಿಜಯ ರಾಘವೇಂದ್ರ, ಅಮಿತ್ ತ್ರಿವೇದಿಯಿಂದ ಕಾರ್ಯಕ್ರಮ. ಅಕ್ಟೋಬರ್ 3: ಸುಪ್ರಿಯಾ ರಾಮ್ ಮತ್ತು ಮಹಿಳಾ ಬ್ಯಾಂಡ್ ತಂಡ ಕಾರ್ಯಕ್ರಮ ನಡೆಸಿಕೊಡಲಿದೆ. ಬಳಿಕ ಪ್ಯಾಷನ್ ಶೋ ನಡೆಯಲಿದೆ.


Click it and Unblock the Notifications











