ಪುರುಷ ಪ್ರಧಾನ ಚಿತ್ರರಂಗದಲ್ಲಿ ನಟಿಯರ ಸಾಧನೆ ದಾಖಲಾಗಬೇಕು: ನಾಗತಿಹಳ್ಳಿ ಚಂದ್ರಶೇಖರ್
ನಟ ಅನಿರುದ್ಧ ನಿರ್ದೇಶಿಸಿ, ನಿರ್ಮಿಸಿರುವ ನಟಿ ಭಾರತ ಜೀವನ ಕುರಿತ ಸಾಕ್ಷ್ಯಚಿತ್ರ 'ಬಾಳೆ ಬಂಗಾರ' ವೀಕ್ಷಿಸಿದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅನಿರುದ್ಧರ ಪ್ರಯತ್ನವನ್ನು ಕೊಂಡಾಡಿದ್ದಾರೆ.
Recommended Video
ಸಾಕ್ಷ್ಯಚಿತ್ರದ ವಿಶೇಷ ಪ್ರದರ್ಶನ ವೀಕ್ಷಿಸಿ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್, ''ಬಾಳೆ ಬಂಗಾರ ಸಾಕ್ಷ್ಯಚಿತ್ರವು ಒಂದು ಫೀಚರ್ ಫಿಲಂ ನೋಡಿದಷ್ಟೆ ಸಂತೋಷ ನೀಡಿತು ಮತ್ತು ಭಾವಸ್ಪರ್ಷಿಯಾಗಿತ್ತು. ಚಲನಚಿತ್ರ ಕ್ಷೇತ್ರ ಪುರುಷ ಪ್ರಧಾನ. ಕಲಾವಿದೆಯ ಬಗ್ಗೆ ಇಷ್ಟು ಸುಧೀರ್ಘವಾಗಿ ಸಾಕ್ಷ್ಯಚಿತ್ರ ಮಾಡಿರುವುದು ಇದೇ ಮೊದಲ ಎಂದೆನಿಸುತ್ತದೆ. ದೊಡ್ಡ ನಟಿಯರು, ಬಹುಭಾಷೆಗಳಲ್ಲಿ ನಟಿಸಿದ ಕಲಾವಿದೆಯರ ಸಾಧನೆಯನ್ನು ಬಗ್ಗೆ ನಮ್ಮ ಪುರುಷ ಪ್ರಧಾನ ವ್ಯವಸ್ಥೆ ಗುರುತಿಸುತ್ತಿಲ್ಲವಲ್ಲ ಎಂದು ಇತ್ತೀಚೆಗೆ ಕಲಾವಿದೆ ಜಯಂತಿ ನಿಧನರಾದಾಗ ನನಗೆ ಅನ್ನಿಸಿದ್ದುಂಟು. ಈ ಕೊರತೆಯನ್ನು ಅನಿರುದ್ಧ ನೀಗಿಸಿದ್ದಾರೆ'' ಎಂದಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್.
''ಒಬ್ಬ ಕಲಾವಿದೆ 50-60 ವರ್ಷ ಉದ್ಯಮದಲ್ಲಿ ಇರುವುದು ಕಡಿಮೆ ಮಾತಲ್ಲ. ಹೊಸ ತಲೆಮಾರಿಗೆ ನೆನಪುಗಳು ಇಲ್ಲದಂತಾಗಿಬಿಟ್ಟಿವೆ. ಹೊಸ ತಲೆಮಾರಿಗೆ ಮಾದರಿಗಳಿಲ್ಲ. ಭಾರತಿ ಅವರ ಬದುಕಿನ ಏರಿಳಿತದಿಂದ ಹೊಸ ತಲೆಮಾರು ತಿಳಿಯಬೇಕಾದ್ದು, ಕಲಿಯಬೇಕಾದ್ದು ಸಾಕಷ್ಟಿದೆ'' ಎಂದರು ನಾಗತಿಹಳ್ಳಿ ಚಂದ್ರಶೇಖರ್.
''ನಾನು ಚಿತ್ರಮಂದಿರ ಒಂದರಲ್ಲಿ ಗೇಟ್ ಕೀಪರ್ ಆಗಿದ್ದೆ. ಸಿನಿಮಾ ಪ್ರಾರಂಭವಾದಾಗ ಒಳಗೆ ಹೋಗಿ ನೋಡುತ್ತಿದ್ದೆ. ಹೀಗೆ ಭಾರತಿ ಅವರು ನಟಿಸಿದ್ದ ಹಲವು ಕನ್ನಡ, ಹಿಂದಿ ಸಿನಿಮಾಗಳನ್ನು ಆಗ ನಾನು ನೋಡಿದ್ದೆ'' ಎಂದು ನೆನಪು ಬಿಚ್ಚಿಟ್ಟರು ನಾಗತಿಹಳ್ಳಿ.

ಅನಿರುದ್ಧ ಮಾಡಿರುವುದು ಸಾಮಾನ್ಯ ಕಾರ್ಯವಲ್ಲ: ನಾಗತಿಹಳ್ಳಿ ಚಂದ್ರಶೇಖರ್
''ಅನಿರುದ್ಧ ಕೇರಳ, ತಮಿಳುನಾಡು, ಮುಂಬೈಗಳಿಗೆಲ್ಲ ಹೋಗಿ ಭಾರತಿ ಅವರ ಸಿನಿಮಾಗಳ ಕುರಿತಾದ ದಾಖಲೆಗಳನ್ನು, ಚಿತ್ರಗಳನ್ನು ಸಂಗ್ರಹಿಸಿ ಅದನ್ನು ಒಟ್ಟುಗೂಡಿಸಿ ಪ್ರದರ್ಶಿಸಿರುವುದು ಸಾಮಾನ್ಯ ಸಂಗತಿಯಲ್ಲ. ಇದು ಕೇವಲ ಕೌಟುಂಬಿಕ ಕಾರಣಕ್ಕೆ ಮಾಡಿದ ಕಾರ್ಯ ಎಂದುಕೊಳ್ಳಬಾರದು. ಅದರಲ್ಲಿರುವ ಸಾಮಾಜಿಕ ಸಂದೇಶ, ಚಿತ್ರರಂಗಕ್ಕೆ ನೀಡಿರುವ ಸಂದೇಶ ಬಹಳ ದೊಡ್ಡದ್ದು'' ಎಂದು ಅನಿರುದ್ಧ ಶ್ರಮವನ್ನು ಹೊಗಳಿದರು ನಾಗತಿಹಳ್ಳಿ ಚಂದ್ರಶೇಖರ್.

ಈ ಸಾಕ್ಷ್ಯಚಿತ್ರ ಅವಶ್ಯಕವಾಗಿತ್ತು: ನಾಗತಿಹಳ್ಳಿ ಚಂದ್ರಶೇಖರ್
''ಭಾರತಿ ಹಾಗೂ ಅವರಂಥಹಾ ಕಲಾವಿದೆಯರ ಬಗ್ಗೆ ಇಂಥಹಾ ಸಾಕ್ಷ್ಯಚಿತ್ರಗಳಾಗಬೇಕು. ಕಲಾವಿದೆಯರ ಸಾಧನೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಪ್ರಯತ್ನಗಳು ಆಗಬೇಕು. ಪುರುಷ ಪ್ರಧಾನ ವ್ಯವಸ್ಥೆಯನ್ನು ನಾವು ಕಲಾವಿದೆಯರನ್ನ ಮರೆತುಬಿಡುತ್ತೇವೆ. ಅಥವಾ ಎರಡನೇ ಸ್ಥಾನದಲ್ಲಿಟ್ಟು ನೋಡುವ ಪರಿಪಾಟ ಸಹ ಇದೆ. ಹಾಗಾಗಿ ಈ ಸಾಕ್ಷ್ಯಚಿತ್ರ ಬಹಳ ಅವಶ್ಯಕವಾಗಿತ್ತು'' ಎಂದು ಕಲಾವಿದೆಯರ ಸಾಧನೆ ದಾಖಲು ಮಾಡುವ ಕಾರ್ಯ ಆಗಬೇಕೆಂದರು.

ಸಾಕ್ಷ್ಯಚಿತ್ರ ನಿರ್ಮಾಣದ ಹಿಂದಿನ ಎಲ್ಲರಿಗೂ ನಾಗತಿಹಳ್ಳಿ ಅಭಿನಂದನೆ
''ಇಂಥಹಾ ಒಂದು ಸಾಕ್ಷ್ಯಚಿತ್ರ ಕೊಟ್ಟಿದ್ದಕ್ಕೆ ಅನಿರುದ್ಧ, ಅವರ ಕುಟುಂಬ ಮತ್ತು ವಿಭಾ ಟ್ರಸ್ಟ್ ಅನ್ನು ನಾನು ಅಭಿನಂದಿಸುತ್ತೇನೆ. ಸಾಕ್ಷ್ಯಚಿತ್ರದ ಹಿಂದೆ ಕೆಲಸ ಮಾಡಿದ ಎಲ್ಲ ತಂತ್ರಜ್ಞರಿಗೂ ನನ್ನ ಅಭಿನಂದನೆಗಳು. ಭಾರತಿ ಅವರು ಇನ್ನಷ್ಟು ವರ್ಷ ಆರೋಗ್ಯದಿಂದ ಕ್ರಿಯಾಶೀಲರಾಗಿ ನಮ್ಮೊಡನೆ ಇರಲಿ'' ಎಂದು ಹಾರೈಸಿದರು ನಾಗತಿಹಳ್ಳಿ ಚಂದ್ರಶೇಖರ್.

ಒಟಿಟಿಯಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ
ಹಿರಿಯ ನಟಿ ಭಾರತಿ ಅವರ ಸಿನಿ ಪಯಣದ ಜೊತೆಗೆ ಅವರ ಜೀವನದ ಏಳು-ಬೀಳುಗಳನ್ನು ದಾಖಲಿಸುವ ವಿನೂತನ ಪ್ರಯತ್ನವನ್ನು ನಟ ಅನಿರುದ್ಧ ಮಾಡಿದ್ದು, ಭಾರತಿ ಸಿನಿ ಜೀವನ, ವೈಯಕ್ತಿಕ ಜೀವನದ ಏಳು-ಬೀಳುಗಳನ್ನು ಒಳಗೊಂಡ 'ಬಾಳೆ ಬಂಗಾರ' ಹೆಸರಿನ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ್ದಾರೆ. ಭಾರತಿ ಅವರ ಸಿನಿಮಾಗಳಿಗೆ ಸಂಬಂಧಿಸಿದ ಹಲವು ಅಪರೂಪದ ಚಿತ್ರಗಳು, ವಿಡಿಯೋಗಳನ್ನು ಸಂಗ್ರಹಿಸಿರುವ ಅನಿರುದ್ಧ, ಭಾರತಿ ಅವರೊಟ್ಟಿಗೆ ನಟಿಸಿರುವ ಶಿವರಾಂ, ನಿರ್ದೇಶಕ ಭಗವಾನ್ ಭಾರತಿ ಅವರೊಟ್ಟಿಗೆ ತೆರೆ ಹಂಚಿಕೊಂಡಿರುವ ಮಲಯಾಳಂ ಸ್ಟಾರ್ ನಟ ಮಮ್ಮುಟಿ, ನಟ ಅನಂತ್ನಾಗ್, ಹೇಮಾ ಚೌಧರಿ ಆಪ್ತ ಸಂಬಂಧ ಹೊಂದಿರುವ ನಟ ಶಿವರಾಜ್ ಕುಮಾರ್ ಇನ್ನೂ ಹಲವರ ಅಭಿಪ್ರಾಯಗಳನ್ನು ಸಹ ಸಾಕ್ಷ್ಯಚಿತ್ರದಲ್ಲಿ ದಾಖಲಿಸಿದ್ದಾರೆ. ಸಾಕ್ಷ್ಯಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವ ಯೋಜನೆ ಅನಿರುದ್ಧಗಿದೆ.


Click it and Unblock the Notifications











