'ಪೊಗರು' ನಂತರ ಯುವನಟನಿಗೆ ಆಕ್ಷನ್-ಕಟ್ ಹೇಳಲಿರುವ ನಂದ ಕಿಶೋರ್
ಧ್ರುವ ಸರ್ಜಾ ನಟನೆಯ 'ಪೊಗರು' ಸಿನಿಮಾ ಮಿಶ್ರ ಪ್ರತಿಕ್ರಿಯೆಗೆ ಗುರಿಯಾದರೂ ಕಲೆಕ್ಷನ್ ಲೆಕ್ಕದಲ್ಲಿ ನಿರ್ಮಾಪಕರಿಗೆ ಒಳ್ಳೆಯ ಲಾಭವನ್ನೇ ಮಾಡಿಕೊಟ್ಟಿತು.
'ಪೊಗರು' ಸಿನಿಮಾ ಬಿಡುಗಡೆ ಬಳಿಕ ಸಿನಿಮಾದ ನಿರ್ದೇಶಕ ನಂದ ಕಿಶೋರ್ಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು, ಬ್ರಾಹ್ಮಣ ಸಮುದಾಯವನ್ನು ಹೀನವಾಗಿ ಚಿತ್ರಿಸಲಾಗಿದೆ ಎಂದು ಹಲವರು ಪ್ರತಿಭಟನೆ ಮಾಡಿ ದೂರು ನೀಡಿದರು. ನಂದ ಕಿಶೋರ್ ಅವರು ನೇರವಾಗಿ ಮೂದಲಿಕೆಗೆ ಗುರಿಯಾದರು.
ಆದರೆ ಈಗ 'ಪೊಗರು' ಪ್ರಭೆಯಿಂದ ಮುಂದಕ್ಕೆ ಸರಿದಿರುವ ನಂದ ಕಿಶೋರ್, ಕನ್ನಡದ ಯುವ ನಾಯಕ ನಟನಿಗೆ ಸಿನಿಮಾ ನಿರ್ದೇಶನ ಮಾಡುವುದಾಗಿ ಪ್ರಕಟಿಸಿದ್ದಾರೆ. ಸಿನಿಮಾದ ಘೋಷಣೆಯನ್ನೂ ಮಾಡಿ ಆಗಿದೆ.

ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಅವರ ಮುಂದಿನ ಸಿನಿಮಾವನ್ನು ನಂದ ಕಿಶೋರ್ ನಿರ್ದೇಶನ ಮಾಡಲಿದ್ದಾರೆ. ನಿನ್ನೆ (ಮಾರ್ಚ್ 05) ಶ್ರೇಯಸ್ ಹಟ್ಟುಹಬ್ಬವಿದ್ದು ಅದೇ ದಿನದಂದು ಹೊಸ ಸಿನಿಮಾದ ಘೋಷಣೆ ಮಾಡಲಾಗಿದೆ.
'ಪಡ್ಡೆಹುಲಿ' ಸಿನಿಮಾದ ಮೂಲಕ ಗಮನ ಸೆಳೆದಿರುವ ಶ್ರೇಯಸ್ ಎರಡನೇ ಸಿನಿಮಾ 'ವಿಷ್ಣುಪ್ರಿಯ'ದ ಬಿಡುಗಡೆಗೆ ಕಾಯುತ್ತಿದ್ದಾರೆ. 'ವಿಷ್ಣುಪ್ರಿಯ' ಸಿನಿಮಾದ ಟ್ರೇಲರ್ ಗಮನ ಸೆಳೆಯುತ್ತಿದೆ. ಈ ನಡುವೆ ನಂದ ಕಿಶೋರ್, ಶ್ರೇಯಸ್ ಒಟ್ಟಾಗಿ ಸಿನಿಮಾ ಮಾಡುವ ಘೋಷಣೆ ಹೊರಬಿದ್ದಿದೆ.
ನಂದ ಕಿಶೋರ್-ಶ್ರೇಯಸ್ ಸಿನಿಮಾವನ್ನು ಗುಜ್ಜಲ್ ಪುರುಷೋತ್ತಮ್ ನಿರ್ಮಾಣ ಮಾಡಲಿದ್ದಾರೆ. ಗುಜ್ಜಲ್ ನಿರ್ಮಿಸುತ್ತಿರುವ ಮೊದಲ ಸಿನಿಮಾ ಇದು. ಈ ಮೊದಲು 'ಟಗರು' ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ ಅನುಭವವನ್ನು ಅವರು ಹೊಂದಿದ್ದಾರೆ.
ಶ್ರೇಯಸ್-ನಂದ ಕಿಶೋರ್ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ ಆದರೆ ತಾಂತ್ರಿಕ ವರ್ಗದ ಆಯ್ಕೆ ಬಹುತೇಕ ಅಂತಿಮವಾಗಿದೆ. ಸಿನಿಮಾದ ಛಾಯಾಗ್ರಹಣವನ್ನು ಶೇಖರ್ ಚಂದ್ರು, ಕೆ.ಎಂ.ಪ್ರಕಾಶ್ ಸಂಕಲನ, ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆಯಲಿದ್ದಾರೆ. ಕೆಲವೇ ದಿನಗಳಲ್ಲಿ ಸಿನಿಮಾದ ಶೀರ್ಷಿಕೆ ಘೋಷಿಸುವುದಾಗಿ ಹೇಳಿದೆ ಚಿತ್ರತಂಡ.
Recommended Video
'ಪೊಗರು' ಬಳಿಕ ಧ್ರುವ ಸರ್ಜಾಗೆ 'ದುಬಾರಿ' ಸಿನಿಮಾ ನಿರ್ದೇಶನ ಮಾಡುವುದಾಗಿ ನಂದ ಕಿಶೋರ್ ಹೇಳಿದ್ದರು. ಶಿವರಾಜ್ ಕುಮಾರ್ ಅವರಿಗೂ ಒಂದು ಸಿನಿಮಾ ನಿರ್ದೇಶನ ಮಾಡುವುದಾಗಿ ನಂದ ಕಿಶೋರ್ ಹೇಳಿದ್ದರು. ಆದರೆ ಈಗ ಅಚಾನಕ್ಕಾಗಿ ಶ್ರೇಯಸ್ ಜೊತೆ ಕೈ ಜೋಡಿಸಿದ್ದಾರೆ.


Click it and Unblock the Notifications











