ಪ್ರಧಾನಿ ಮೋದಿಗೆ 'ಅಭಿಮನ್ಯು' ವಿಶೇಷ ಪ್ರದರ್ಶನ
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ 'ಅಭಿಮನ್ಯು' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಎಲ್ಲರೂ ಅರ್ಜುನ್ ಅವರ ನಟನೆ, ನಿರ್ದೇಶನವನ್ನು ಕೊಂಡಾಡುತ್ತಿದ್ದಾರೆ.
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಂತಹ ಪ್ರಚಲಿತ ಸಮಸ್ಯೆಯೊಂದನ್ನು ಎತ್ತಿಕೊಂಡು ಅರ್ಜುನ್ ಸರ್ಜಾ ಅವರು ಪರಿಹಾರ ಹುಡುಕುವ ಪ್ರಯತ್ನವನ್ನು ಚಿತ್ರದಲ್ಲಿ ಮಾಡಿದ್ದಾರೆ. ಸೋಮವಾರ (ನ.10) ಮಧ್ಯಾಹ್ನ ಈ ಚಿತ್ರಕ್ಕೆ ಸಂಬಂಧಿಸಿದಂತೆ ಅರ್ಜುನ್ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. [ಅಭಿಮನ್ಯು ಚಿತ್ರ ವಿಮರ್ಶೆ]

ಬೆಂಗಳೂರಿನ ಹೋಟೆಲ್ ಶೆರಟಾನ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅರ್ಜುನ್ ಸರ್ಜಾ, ತಮ್ಮ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶೀಘ್ರದಲ್ಲೇ ತೋರಿಸುತ್ತಿರುವುದಾಗಿ ಹೇಳಿದರು.
ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹತ್ತು ಹಲವು ಗಣ್ಯರಿಗೂ ವಿಶೇಷ ಪ್ರದರ್ಶನ ಏರ್ಪಡಿಸುವ ಬಗ್ಗೆ ಸಿದ್ಧತೆಗಳು ನಡೆಯುತ್ತಿವೆ ಎಂದರು. ತಮ್ಮ ಚಿತ್ರಕ್ಕೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರೇ ಸ್ಫೂರ್ತಿ ಎನ್ನುವ ಸರ್ಜಾ ಅವರು, ನಿಯತಕಾಲಿಕೆಯೊಂದರಲ್ಲಿ ಅವರು ಬರೆದಿದ್ದ ಲೇಖನವೇ ತಾವು ಈ ಚಿತ್ರ ಕೈಗೆತ್ತಿಕೊಳ್ಳಲು ಕಾರಣ ಎನ್ನುತ್ತಾರೆ.
ನಮ್ಮ ಶಿಕ್ಷಣ ವ್ಯವಸ್ಥೆ ಬಗ್ಗೆ ಸಾಕಷ್ಟು ಅಧ್ಯಯನವನ್ನೂ ಮಾಡಿ ಕಥೆಗೆ ಒಂದು ಸುಂದರ ಚೌಕಟ್ಟು ಹಾಕಿದ್ದಾರೆ. ಬೆಳ್ಳಿ ತೆರೆಯ ಮೇಲೆ ಪ್ರತಿಯೊಬ್ಬ ಭಾರತೀಯ ನಾಗರೀಕನೂ ನೋಡಲೇಬೇಕಾದ ರಿಯಲಿಟಿ ಸಿನೆಮಾ ಇದು ಎನ್ನುತ್ತಾರೆ ಸರ್ಜಾ. ಶೀಘ್ರದಲ್ಲೇ ಅವರು ಅಬ್ದುಲ್ ಕಲಾಂ ಅವರನ್ನೂ ಭೇಟಿ ಮಾಡಿ 'ಅಭಿಮನ್ಯು' ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸುವ ಬಗ್ಗೆ ಮಾತನಾಡುವುದಾಗಿಯೂ ಹೇಳಿದರು.


Click it and Unblock the Notifications











