ಕರ್ನಾಟಕ ಚಲನಚಿತ್ರ ಪ್ರಾದೇಶಿಕ ಸೆನ್ಸಾರ್ ಮಂಡಳಿಗೆ ಹೊಸ ಮುಖ್ಯಸ್ಥ.?
ಕೊನೆಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಗೆದ್ದಿದ್ದಾರೆ. ಕರ್ನಾಟಕ ಚಲನಚಿತ್ರ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯ ಮುಖ್ಯಸ್ಥೆ ನತಾಶ ಡಿ'ಸೋಜಾ ಸ್ಥಾನಕ್ಕೆ ಕನ್ನಡ ತಿಳಿದಿರುವ ನೂತನ ಅಧಿಕಾರಿ ನೇಮಿಸುವ ಪ್ರಯತ್ನದಲ್ಲಿ ನಿರ್ಮಾಪಕ ಸಾ.ರಾ.ಗೋವಿಂದು ಯಶಸ್ವಿ ಆಗಿದ್ದಾರೆ.
ಮೂಲಗಳ ಪ್ರಕಾರ, ಕರ್ನಾಟಕ ಚಲನಚಿತ್ರ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ನತಾಶ ಡಿ'ಸೋಜಾ ಎತ್ತಂಗಡಿಯಾಗಿದ್ದಾರೆ. ಅವರ ಬದಲು ಪ್ರಾದೇಶಿಕ ಸೆನ್ಸಾರ್ ಮಂಡಳಿಯ ನೂತನ ಅಧ್ಯಕ್ಷರಾಗಿ ಶ್ರೀನಿವಾಸಪ್ಪ ಎನ್ನುವವರು ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಸೆನ್ಸಾರ್ ಮಂಡಳಿಯ ಕಾರ್ಯವೈಖರಿಯ ಬಗ್ಗೆ ಹಲವರು ಗುಡುಗಿದ್ದರು. ಅದರಲ್ಲೂ ಅಧ್ಯಕ್ಷೆ ನತಾಶ ಡಿ'ಸೋಜಾಗೆ ಕನ್ನಡ ಬರುವುದಿಲ್ಲ ಮತ್ತು ಅದರಿಂದ ಸಾಕಷ್ಟು ಸಮಸ್ಯೆಗಳು ಆಗುತ್ತಿವೆ ಎಂಬ ಕೂಗು ಕೇಳಿ ಬಂದಿತ್ತು. ಅದು ತಾರಕಕ್ಕೇರಿದ್ದು 'ಕಿರಗೂರಿನ ಗಯ್ಯಾಳಿಗಳು' ಚಿತ್ರದ ಬಿಡುಗಡೆ ಸಂದರ್ಭದಲ್ಲಿ.
'ಕಿರುಗೂರಿನ ಗಯ್ಯಾಳಿಗಳು' ಚಿತ್ರತಂಡದವರು, ಸೆನ್ಸಾರ್ ವಿರುದ್ಧ ಸಮರವನ್ನೇ ಸಾರಿದ್ದರು. ಅದಕ್ಕೆ ಬೆಂಬಲಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಕೂಡಾ, ನತಾಶ ಅವರನ್ನು ಸರ್ಕಾರ ವಾಪಸ್ ಕರೆಯಿಸಿಕೊಳ್ಳಬೇಕು ಮತ್ತು ಅವರ ಜಾಗಕ್ಕೆ ಕನ್ನಡ ಬಲ್ಲ ಅಧಿಕಾರಿಯನ್ನು ನೇಮಿಸಬೇಕು ಎಂದು ಮನವಿ ಮಾಡಿದ್ದರು. ಇದೀಗ ಅವರ ಮನವಿಗೆ ಮನ್ನಣೆ ಸಿಕ್ಕಂತಾಗಿದೆ.


Click it and Unblock the Notifications











