'ಎದೆಯೊಳಗಿನ ತಮಟೆ' ಗಾಯಕ ನವೀನ್ ಈಗ ಹೀರೋ
ಹೀರೋಗಳು ಗಾಯಕರಾಗಿರುವ ಉದಾಹರಣೆಗಳು ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟಿವೆ. ಆದ್ರೆ, ಗಾಯಕರು ಹೀರೋಗಳಾಗಿರುವ ನಿದರ್ಶನ ತೀರಾ ಕಡಿಮೆ. ಅಂಥವರ ಸಾಲಿಗೆ ಈಗ ಹೊಸ ಸೇರ್ಪಡೆಯಾಗುತ್ತಿರುವುದು ಗಾಯಕ ನವೀನ್ ಸಜ್ಜು.
'ಲೂಸಿಯಾ' ಚಿತ್ರದ ಜನಪ್ರಿಯ 'ಎದೆಯೊಳಗಿನ ತಮಟೆ' ಹಾಡಿನ ಗಾಯಕ ನವೀನ್ ಸಜ್ಜು ಈಗ ಬಣ್ಣ ಹಚ್ಚಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅದು 'ಎದೆಯೊಳಗಿನ ತಮಟೆ' ಅನ್ನುವ ಸಿನಿಮಾದ ಮೂಲಕವೇ.

ಗಾಯನಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದಿರುವ ನವೀನ್ ಸಜ್ಜು ಅಭಿನಯದ 'ಎದೆಯೊಳಗಿನ ತಮಟೆ' ಚಿತ್ರದ ಸಾಂಗ್ ರೆಕಾರ್ಡಿಂಗ್ ಪೂಜೆ ಬೆಂಗಳೂರಿನ ಶ್ರೀ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿದೆ.
ಫ್ಯೂಚರ್ ಫ್ರೇಮ್ ಮೀಡಿಯಾ ಲಾಂಛನದಲ್ಲಿ 'ಎದೆಯೊಳಗಿನ ತಮಟೆ' ಏಕಕಾಲಕ್ಕೆ ಕನ್ನಡ ಹಾಗು ತಮಿಳಿನಲ್ಲಿ ತಯಾರಾಗಲಿದೆ. 'ತರ್ಲೆ ನನ್ ಮಕ್ಳು' ಚಿತ್ರಕ್ಕೆ ಸಂಗೀತ ನೀಡಿದ್ದ ಡಿ.ಜೆ. ಸೂರ್ಯವಂಶಿ 'ಎದೆಯೊಳಗಿನ ತಮಟೆ' ಚಿತ್ರದ ಏಳು ಹಾಡುಗಳ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಹಳ್ಳಿಯಲ್ಲಿ ನಡೆಯುವ ಪ್ರೇಮಕಥೆ 'ಎದೆಯೊಳಗಿನ ತಮಟೆ' ಚಿತ್ರದ ಹೂರಣ. ನವೀನ್ ಸಜ್ಜು ಅಭಿನಯದ ಕೆಲ ನಾಟಕಗಳನ್ನ ನೋಡಿ ನಿರ್ದೇಶಕ ಇರಾನ್ ಗೌಡ ಹೀರೋ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.
ಜೂನ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಮಂಡ್ಯ, ಶಿವಮೊಗ್ಗ, ಸಾಗರ, ಚಿಕ್ಕಮಗಳೂರು ಮತ್ತು ರಾಯಚೂರಿನ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಯಲಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











