ನೀರ್ ದೋಸೆ 'ತಗಡು' ಚಿತ್ರ! ರಾಜ್ಯ ಪ್ರಶಸ್ತಿ ಬಗ್ಗೆ ವಿಜಯಪ್ರಸಾದ್ ವ್ಯಂಗ್ಯ.!
2016ನೇ ಸಾಲಿನ ಪ್ರತಿಷ್ಟಿತ ರಾಜ್ಯ ಚಲನಚಿತ್ರ ಪ್ರಶಸ್ತಿ ನಿನ್ನೆಯಷ್ಟೇ (ಏಪ್ರಿಲ್ 11) ಪ್ರಕಟವಾಯ್ತು. ಪ್ರಶಸ್ತಿ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ 'ಅಮರಾವತಿ' ಚಿತ್ರದ್ದೇ ಮೇಲುಗೈ. ಪ್ರಥಮ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿರುವ 'ಅಮರಾವತಿ' ಚಿತ್ರದ ಅಭಿನಯಕ್ಕಾಗಿ ಅಚ್ಯುತ್ ಕುಮಾರ್ ಗೆ 'ಅತ್ಯುತ್ತಮ ನಟ' ಪ್ರಶಸ್ತಿ ಲಭಿಸಿದೆ. ಇನ್ನೂ ಇದೇ ಚಿತ್ರದ ಸಂಭಾಷಣೆಗಾಗಿ ಬಿ.ಎಂ.ಗಿರಿರಾಜು ರವರಿಗೂ ಅವಾರ್ಡ್ ಸಿಕ್ಕಿದೆ.[2016 ರಾಜ್ಯ ಪ್ರಶಸ್ತಿ: 'ಅಮರಾವತಿ' ಅತ್ಯುತ್ತಮ ಚಿತ್ರ, ಅಚ್ಯುತ್ ಕುಮಾರ್ ಅತ್ಯುತ್ತಮ ನಟ]
2016ರ ರಾಜ್ಯ ಚಲನಚಿತ್ರ ಪ್ರಶಸ್ತಿ ಕೆಲವರಿಗೆ ಸಂತಸ ನೀಡಿದ್ರೆ, ಕೆಲವರ ಮನದಲ್ಲಿ ಅಸಮಾಧಾನ ಮೂಡಿಸಿದೆ. ಅದಕ್ಕೆ ಸಾಕ್ಷಿ ನಿರ್ದೇಶಕ ವಿಜಯ ಪ್ರಸಾದ್ ರವರ ಫೇಸ್ ಬುಕ್ ಸ್ಟೇಟಸ್.!

ಫೇಸ್ ಬುಕ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ ವಿಜಯ ಪ್ರಸಾದ್
2016ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗುತ್ತಿದ್ದಂತೆಯೇ, 'ನೀರ್ ದೋಸೆ' ಚಿತ್ರದ ನಿರ್ದೇಶಕ ವಿಜಯ ಪ್ರಸಾದ್ ಫೇಸ್ ಬುಕ್ ನಲ್ಲಿ ವ್ಯಂಗ್ಯವಾಡುವ ಮೂಲಕ ತಮ್ಮ ಅಸಮಾಧಾನವನ್ನ ಹೊರಹಾಕಿದ್ದಾರೆ.

ವಿಜಯ ಪ್ರಸಾದ್ ಫೇಸ್ ಬುಕ್ ಸ್ಟೇಟಸ್ ನಲ್ಲಿ ಏನಿದೆ.?
''ನೀರ್ ದೋಸೆ 'ತಗಡು' ಚಿತ್ರವೆಂದು ಕೆಲವರ ದೃಷ್ಟಿಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ನಮ್ಮ ಕಣ್ಣು ತೆರೆಸಿದ ಪ್ರಶಸ್ತಿ ಸಮಿತಿಯ ವೃಂದರಿಗೆ ಪ್ರಣಾಮಗಳು'' ಎಂದು ಫೇಸ್ ಬುಕ್ ಪುಟದಲ್ಲಿ ನಿರ್ದೇಶಕ ವಿಜಯ ಪ್ರಸಾದ್ ಬರೆದುಕೊಂಡಿದ್ದಾರೆ.

ಪ್ರಶಸ್ತಿ ನಿರೀಕ್ಷಿಸಿದ್ದ 'ನೀರ್ ದೋಸೆ' ಚಿತ್ರತಂಡ
ವಿಭಿನ್ನ ಚಿತ್ರಕಥೆ ಹೊಂದಿದ್ದ 'ನೀರ್ ದೋಸೆ' ಚಿತ್ರಕ್ಕೆ ಪ್ರಶಸ್ತಿ ಲಭಿಸುತ್ತದೆ ಎಂಬ ನಂಬಿಕೆ ಚಿತ್ರತಂಡಕ್ಕಿತ್ತು. ಆ ನಂಬಿಕೆ ಸುಳ್ಳಾಗಿದ್ರಿಂದ ಸಹಜವಾಗಿ ನಿರ್ದೇಶಕ ವಿಜಯ ಪ್ರಸಾದ್ ಬೇಸರಗೊಂಡಿದ್ದಾರೆ.

ಐಫಾ ಪ್ರಶಸ್ತಿ ವಿರುದ್ಧ 'ನೀರ್ ದೋಸೆ' ನಿರ್ಮಾಪಕ ಸಿಡಿಮಿಡಿ
ಐಫಾ ಪ್ರಶಸ್ತಿ 2016-17 ವಿರುದ್ಧ 'ನೀರ್ ದೋಸೆ' ನಿರ್ಮಾಪಕ ಪ್ರಸನ್ನ ಕೂಡ ಫೇಸ್ ಬುಕ್ ನಲ್ಲಿ ವ್ಯಂಗ್ಯವಾಡಿದ್ದು ನಿಮಗೆ ನೆನಪಿರಬಹುದು. ''ಪ್ರಶಸ್ತಿ ನಿರ್ಣಾಯಕ ಸಮಿತಿಗೆ ಯಾವ ಪ್ರಶಸ್ತಿ ಕೂಟ್ಟರೂ ಸಾಲದು. ಅವರಿಗೆ ಜ್ಞಾನಪೀಠ ಪ್ರಶಸ್ತಿಯೂ ಕಡಿಮೆ'' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸನ್ನ ಕಿಡಿಕಾರಿದ್ದರು.[ಐಫಾ ಅವಾರ್ಡ್ಸ್ 2016-17 ಕುರಿತು 'ನೀರ್ ದೋಸೆ' ನಿರ್ಮಾಪಕ ವ್ಯಂಗ್ಯ]

ಜಗ್ಗೇಶ್ ಕೂಡ ಆಕ್ರೋಶ
''ಐಫಾ ಅವಾರ್ಡ್ಸ್ - ಇದು ಇತ್ತೀಚಿನ ಒಂದು ಡಿಗಿಲ್ ಅವಾರ್ಡ್ ಸಂಸ್ಥೆ. ಯಾರಿಗೆ ಬೇಕೋ ಅವರಿಗೆ ಅವಾರ್ಡ್ ಫಿಕ್ಸ್. 'ನೀರ್ ದೋಸೆ' ಜನ ಮೆಚ್ಚಿದ ಚಿತ್ರ. ಬೇಕಂತಲೇ ಅವಾಯ್ಡ್ ಮಾಡಿದ್ದಾರೆ'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.[ಐಫಾ ಅವಾರ್ಡ್ಸ್ 2016-17 ವಿರುದ್ಧ ಜಗ್ಗೇಶ್ ಬಹಿರಂಗ ಆಕ್ರೋಶ.!]

ಈಗ ರಾಜ್ಯ ಪ್ರಶಸ್ತಿ ವಿರುದ್ಧ ವ್ಯಂಗ್ಯ
ಅಂದು ಐಫಾ ಅವಾರ್ಡ್ಸ್ ವಿರುದ್ಧ ಕಣ್ಣು ಕೆಂಪಗೆ ಮಾಡಿಕೊಂಡಿದ್ದ 'ನೀರ್ ದೋಸೆ' ಚಿತ್ರತಂಡ ಇದೀಗ ರಾಜ್ಯ ಪ್ರಶಸ್ತಿ ವಿರುದ್ಧ ಸಿಡಿಮಿಡಿಗೊಂಡಿದೆ.

'ನೀರ್ ದೋಸೆ' ಚಿತ್ರದಲ್ಲಿ ಅಂಥದ್ದೇನಿದೆ.?
ನಟಿ ಹರಿಪ್ರಿಯಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿರುವ 'ನೀರ್ ದೋಸೆ' ಚಿತ್ರ A ಸರ್ಟಿಫಿಕೇಟ್ ಪಡೆದುಕೊಂಡಿರಬಹುದು. ಆದ್ರೆ. ಚಿತ್ರದಲ್ಲಿ ಮಾನವೀಯ ಮೌಲ್ಯಗಳು ಸಾಕಷ್ಟಿವೆ. ಪ್ರೇಕ್ಷಕರಿಗೆ ಸಿನಿಮಾದಲ್ಲಿ ಉತ್ತಮ ಸಂದೇಶ ಕೂಡ ಇದೆ. ಹೀಗಾಗಿ ಚಿತ್ರತಂಡ 'ಪ್ರಶಸ್ತಿ'ಯನ್ನ ನಿರೀಕ್ಷಿಸಿತ್ತು. 'ನೀರ್ ದೋಸೆ' ಚಿತ್ರದ ವಿಮರ್ಶೆ ಇಲ್ಲಿದೆ ಓದಿರಿ...[ವಿಮರ್ಶೆ : ಬಾಡೂಟದ ಜೊತೆ 'ನೀರ್ ದೋಸೆ' ಸವಿದಂತೆ ಇದೇ ಜಗ್ಗೇಶ.!]


Click it and Unblock the Notifications











