'ನೆನಪಿರಲಿ' ರತ್ನಜ ಅವರ ಹೊಸ ಚಿತ್ರ 'ಪ್ರೀತಿಯಲ್ಲಿ ಸಹಜ'
ನಿರ್ದೇಶಕ ರತ್ನಜ ನಿಮಗೆ ನೆನಪಿರಬೇಕಲ್ಲ, ನೆನಪಿರಲೇ ಬೇಕು, ಯಾಕಂದ್ರೆ ಅವರ ನೆನಪು ನಿಮಗೆ ಇರಲಿ ಅಂತ 'ನೆನಪಿರಲಿ' ಹಿಟ್ ಚಿತ್ರವನ್ನು ಸ್ಯಾಂಡಲ್ ವುಡ್ ಗೆ ಕಾಣಿಕೆಯಾಗಿ ನೀಡಿದ್ರಲ್ವಾ. ಇದೀಗ ಅದೇ 'ನೆನಪಿರಲಿ' ರತ್ನಜ ಮತ್ತೆ ವಾಪಸಾಗಿದ್ದಾರೆ.
ಹೊಸ ಪ್ರತಿಭೆಗಳಿಗೆ ಮಣೆ ಹಾಕುವ ನಿರ್ದೇಶಕ ರತ್ನಜ 'ನೆನಪಿರಲಿ' ಚಿತ್ರದಲ್ಲಿ ಪ್ರೇಮ್ ಗೆ, ಅವರ ಚಿತ್ರರಂಗದ ಕೆರಿಯರ್ ನಲ್ಲಿ ಒಂದೊಳ್ಳೆ ಬ್ರೇಕ್ ಸಿಗುವಂತೆ ಮಾಡಿದ್ದರು. ಇದೀಗ ಮತ್ತೆ ಹೊಸತೊಂದು ಹೆಸರಿನ ಮೂಲಕ, ಹೊಸ ಪ್ರತಿಭೆಗಳ ಜೊತೆಯಲ್ಲಿ ಸುಮಾರು ಐದು ವರ್ಷಗಳ ನಂತರ ಗಾಂಧಿನಗರದ ಕಡೆ ಮುಖ ಮಾಡಿದ್ದಾರೆ.

ತಮ್ಮ ಕೊನೆ ಚಿತ್ರ 'ಪ್ರೇಮಿಸಂ' ನಂತರ 'ಪ್ರೀತಿಯಲ್ಲಿ ಸಹಜ' ಎನ್ನುವ ಹೆಸರಿನ ಚಿತ್ರದ ಮೂಲಕ ಹೊಸ ಪ್ರತಿಭೆಗಳಾದ ಸೂರ್ಯ ಮತ್ತು ಅಕ್ಷಾ ಭಟ್ ರನ್ನು ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಪರಿಚಯಿಸುತ್ತಿದ್ದಾರೆ.
'ಪ್ರೇಮಿಸಂ' ಚಿತ್ರದ ಸೋಲು ಮತ್ತು ನಾಯಕಿ ನಟಿ ಅಮೂಲ್ಯ ಜೊತೆ ಸ್ವಲ್ಪ ಮಟ್ಟಿಗೆ ಕಿರಿಕ್ ಮಾಡಿಕೊಂಡರು ಕೂಡ ಅದ್ಯಾವುದಕ್ಕೂ ಸೊಪ್ಪು ಹಾಕದೆ ಮತ್ತೆ ತಮ್ಮ ನಿರ್ದೇಶನದ ಕಡೆ ಗಮನ ಹರಿಸಿದ್ದಾರೆ.

'ಪ್ರೀತಿಯಲ್ಲಿ ಸಹಜ' ಚಿತ್ರದ ಔಟ್ ಡೋರ್ ಶಾಟ್ ಗಳು ಈಗಾಗಲೇ ಸದ್ದಿಲ್ಲದೇ ಮುಗಿದಿದ್ದು, ಕರ್ನಾಟಕ ಸೇರಿದಂತೆ ಇನ್ನುಳಿದ ಪ್ರಮುಖ ಸುಂದರ ತಾಣಗಳಾದ ಕೇರಳ, ತಮಿಳುನಾಡು ಮುಂತಾದೆಡೆ ಚಿತ್ರೀಕರಣ ಮಾಡಲಾಗಿದೆ. ಇನ್ನೇನು ಚಿತ್ರದ ಒಂದು ಹಾಡಿನ ಶೂಟಿಂಗ್ ಬಾಕಿ ಇದ್ದು ಇದೇ ಸೆಪ್ಟೆಂಬರ್ ಗೆ ತೆರೆಗೆ ತರುವ ಆಲೋಚನೆ ಮಾಡಿದ್ದಾರೆ ನಿರ್ದೇಶಕ ರತ್ನಜ.
ಗಣೇಶ್ ಹಾಗೂ ಎಮ್.ಎಲ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಪ್ರೀತಿಯಲ್ಲಿ ಸಹಜ' ಚಿತ್ರದಲ್ಲಿ ರಘುಮುಖರ್ಜಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ರವಿರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನುಳಿದಂತೆ ದೇವರಾಜ್, ಸುಹಾಸಿನಿ, ಅವಿನಾಶ್ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದಾರೆ.


Click it and Unblock the Notifications











