ನೆನಪಿರಲಿ; ಮತ್ತೆ ಪುಟಿದೆದ್ದ ಮರೆಯಾಗಿದ್ದ ಪ್ರೇಮ್

ಎರಡು ಬಾರಿ ಬಿಡುಗಡೆಯಾಗಿ ನೆಲಕಚ್ಚಿದ ಚಿತ್ರ 'ಐ ಯಾಮ್ ಸಾರಿ, ಮತ್ತೆ ಬನ್ನಿ ಪ್ರೀತ್ಸೋಣ' ತುಂಬಾ ಉತ್ತಮ ಚಿತ್ರವೇ ಆಗಿತ್ತು. ಸಾಕಷ್ಟು ಪ್ರೇಕ್ಷಕರಲ್ಲದೇ ವಿಮರ್ಶಕರೂ ಕೂಡ ಮೆಚ್ಚಿದ್ದ ಆ ಚಿತ್ರ ಅದ್ಯಾಕೋ ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗಿತ್ತು. ಆಗ ಪ್ರೇಮ್ ಹಣೆಬರಹ ಮುಗಿಯಿತು ಎಂದೇ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಆದರೆ ಈಗ ಪ್ರೇಮ್ ಮತ್ತೆ ಫಿನಿಕ್ಸ್ ನಂತೆ ಎದ್ದುಬಂದಿದ್ದಾರೆ.
ಪ್ರಾಣ್ ಎಂಬ ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಪ್ರೇಮ್ ಮೊದಲು ಬಿಡುಗಡೆಯಾದ 'ನೆನಪಿರಲಿ' ಚಿತ್ರದ ಮೂಲಕ ಕರ್ನಾಟಕದ ಸಿನಿಪ್ರೇಕ್ಷಕರಿಗೆ ಅಚ್ಚುಮೆಚ್ಚು ಅನ್ನಿಸಿಕೊಂಡವರು. ನಂತರ ಬಂದ ಜೊತೆ ಜೊತೆಯಲಿ' ಗೆದ್ದಾಗಲಂತೂ ಕನ್ನಡಕ್ಕೊಬ್ಬ ಸ್ಪುರದ್ರೂಪಿ ನಟ ದಕ್ಕಿದ್ದಾರೆ ಎನಿಸಿತ್ತು. ಆದರೆ, ಆಮೇಲೆ ಬಂದ 'ಗುಣವಂತ, ಸವಿಸವಿ ನೆನಪು, ಪಲ್ಲಕ್ಕಿ, ಹೊಂಗನಸು, ಗೌತಮ್, ಜೊತೆಗಾರ ಹೀಗೆ ಸಾಲು ಸಾಲು ಚಿತ್ರಗಳು ಸೋತು ಪ್ರೇಮ್ ತೆರೆಮೆರೆಗೆ ಸರಿಯತೊಡಗಿದ್ದರು.
ಧನ್ ಧನಾ ಧನ್, ಸಿಹಿಮುತ್ತು, ಇದೊಂಥರಾ ಲವ್ ಸ್ಟೋರಿ, ನಾವು ಯಾರಿಗೇನು ಕಮ್ಮಿಯಿಲ್ಲ, ಶತ್ರು, ಕೆಟ್ಟವನು ಮುಂತಾದ ಆಫರುಗಳು ಪ್ರೇಮ್ ಅವರಿಗೆ ಇದೆಯಾದರೂ ಅದ್ಯಾವುದೂ ತೀರಾ ನಿರೀಕ್ಷೆ ಮೂಡಿಸಬಹುದಾದ ಚಿತ್ರಗಳೇನಲ್ಲ. ಪ್ರೇಮ್ ಅವರಿಗೆ ಮುರುಜನ್ಮ ನೀಡಲು ಅವುಗಳಿಗೆ ಸಾಧ್ಯವಿರಲಿಲ್ಲ. ಈಗ ಸಿಕ್ಕ ಅವಕಾಶ ಪ್ರೇಮ್ ಗೆ ಮರುಜನ್ಮ ನೀಡುವುದರ ಜೊತೆಗೆ ಸ್ಟಾರ್ ಪಟ್ಟ ತಂದುಕೊಡುವುದು ಖಂಡಿತ ಎಂಬುದು ಎಲ್ಲರ ಅನಿಸಿಕೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











