ಅಂತೂ ಚಿತ್ತಾರದ ಬೆಡಗಿ ಅಮೂಲ್ಯಗೆ ಸೂಕ್ತ ವರ ಸಿಕ್ಕ!
'ಚೆಲುವಿನ ಚಿತ್ತಾರ'ದ ಬೆಡಗಿ ಅಮೂಲ್ಯಗೆ ಸೂಕ್ತ ವರ ಸಿಕ್ಕಿದ್ದಾನೆ! 'ಮದುವೆಯ ಮಮತೆಯ ಕರೆಯೋಲೆ'ಗೆ ಶುಭ ಮುಹೂರ್ತ ನಿಗದಿಯಾಗಿದೆ. ಹೀಗಂತ ಹೇಳಿದ ತಕ್ಷಣ ಅಮೂಲ್ಯಗೆ ಮದುವೆ ಫಿಕ್ಸ್ ಆಗಿದೆ ಅಂತ ಭಾವಿಸಬೇಕಿಲ್ಲ. ನಾವು ಹೇಳುತ್ತಿರುವುದು ರೀಲ್ ಸುದ್ದಿ ಅಷ್ಟೆ.
ಗೀತ ಸಾಹಿತಿ ಕವಿರಾಜ್ ಚೊಚ್ಚಲ ನಿರ್ದೇಶನದ 'ಮದುವೆಯ ಮಮತೆಯ ಕರೆಯೋಲೆ' ಚಿತ್ರದಲ್ಲಿ ಅಮೂಲ್ಯ ಗಂಡುಬೀರಿ ಪಾತ್ರ ಮಾಡುತ್ತಿರುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ರಿ. [ಗಂಡುಬೀರಿಯಾದ ಚಿತ್ತಾರದ ಬೆಡಗಿ 'ಅಮೂಲ್ಯ']

ನಾಯಕಿ ಪಾತ್ರಕ್ಕೆ ಅಮೂಲ್ಯ ಫಿಕ್ಸ್ ಆಗಿದ್ದರೂ, ನಾಯಕ ಅರ್ಥಾತ್ ವರನ ಪಾತ್ರಕ್ಕೆ ಅನ್ವೇಷಣೆ ನಡೆಯುತ್ತಿತ್ತು. ಯುವ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಅನ್ನುವ ಇಂಗಿತ ವ್ಯಕ್ತಪಡಿಸಿದ್ದ ಕವಿರಾಜ್, ಪ್ರತಿಭಾ ಶೋಧ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದರು. ['ಆಕ್ಷನ್ ಕಟ್ ರಾಜ'ನಾಗಲಿರುವ ಚಿತ್ರಸಾಹಿತಿ ಕವಿರಾಜ್]
ಮಾರ್ಚ್ 1 ಮತ್ತು 2 ನೇ ತಾರೀಖು ಬೆಂಗಳೂರಿನಲ್ಲಿ ಆಡಿಷನ್ ಮಾಡಿದ್ದ 'ಮದುವೆಯ ಮಮತೆಯ ಕರೆಯೋಲೆ' ಚಿತ್ರತಂಡ ಸೂಕ್ತ 'ವರ'ನನ್ನ ಸೆಲೆಕ್ಟ್ ಮಾಡುವಲ್ಲಿ ಯಶಸ್ವಿಯಾಗಿದೆ. ಆ ಯುವ ಪ್ರತಿಭೆಯೆ ಈತ.

ಹೆಸರು - ಸೂರಜ್. ಊರು - ಮೈಸೂರು. ನಟನಾಗಬೇಕು ಅಂತ ಬಯಸುತ್ತಿದ್ದ ಸೂರಜ್ ಗೆ ನಿರ್ದೇಶಕ ಕವಿರಾಜ್ ಮತ್ತು ನಿರ್ಮಾಪಕ ದಿನಕರ್ ತೂಗುದೀಪ ಚಾನ್ಸ್ ಕೊಟ್ಟಿದ್ದಾರೆ.
ಆಡಿಷನ್ಸ್ ನಲ್ಲಿ ಪಾಲ್ಗೊಂಡ 5000 ಯುವಕರ ಪೈಕಿ ಸೆಲೆಕ್ಟ್ ಆಗಿರುವ ಏಕೈಕ ಯುವ ಪ್ರತಿಭೆ ಸೂರಜ್. ಅಂದ್ಮೇಲೆ, ಅದೃಷ್ಟ ಮತ್ತು ಟ್ಯಾಲೆಂಟ್. ಎರಡೂ ಸೂರಜ್ ಗಿದೆ ಅಂತರ್ಥ. [ಸಹಸ್ರ ಸಂಭ್ರಮದಲ್ಲಿ ಕನ್ನಡ ಗೀತಸಾಹಿತಿ 'ಕವಿರಾಜ್']

'ಜೊತೆ ಜೊತೆಯಲಿ', 'ನವಗ್ರಹ' ಮತ್ತು 'ಬುಲ್ ಬುಲ್' ನಂತರ ಹ್ಯಾಟ್ರಿಕ್ ಚಿತ್ರಗಳ ನಂತ್ರ 'ತೂಗುದೀಪ ಪ್ರೊಡಕ್ಷನ್ಸ್' ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಸಿನಿಮಾ 'ಮದುವೆಯ ಮಮತೆಯ ಕರೆಯೋಲೆ'. ವರ ಮತ್ತು ವಧು ಸಿಕ್ಕಾಯ್ತು. ಮುಹೂರ್ತ ದಿನಾಂಕ ಆದಷ್ಟು ಬೇಗ ಗೊತ್ತುಮಾಡಿದರೆ, ಸಿನಿಮಾ ಸೆಟ್ಟೇರುತ್ತದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











