ಮಗನಿಗೆ ಮರುನಾಮಕರಣ ಮಾಡಿದ ಕುಮಾರಸ್ವಾಮಿ..!
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಅವರ ಚೊಚ್ಚಲ ಚಿತ್ರ 'ಜಾಗ್ವಾರ್' ಶೂಟಿಂಗ್ ಶುರುವಾಗುವುದಕ್ಕೆ ಕೌಂಟ್ ಡೌನ್ ಶುರುವಾಗಿದೆ. ಸಿನಿಮಾ ಇದೇ ಡಿಸೆಂಬರ್ 16 ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ಧೂರಿ ಸಮಾರಂಭದಲ್ಲಿ ಅಧಿಕೃತವಾಗಿ ಆರಂಭವಾಗಲಿದೆ.
ಅಂದಹಾಗೆ ತಮ್ಮ ಚೊಚ್ಚಲ ಚಿತ್ರ ಆರಂಭವಾಗುವ ಬೆನ್ನಲ್ಲೇ, ನಿಖಿಲ್ ಗೌಡ ಎಂದು ಕರೆಸಿಕೊಳ್ಳುತ್ತಿದ್ದ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

ಇದಕ್ಕೆ ಕಾರಣ ಖುದ್ದು ಕುಮಾರ್ ಸ್ವಾಮಿ ಅವರೇ ಅಂದರೆ ನೀವು ನಂಬಲೇಬೇಕು. ಹೌದು ಮಾಜಿ ಮುಖ್ಯಮಂತ್ರಿಗಳಿಗೆ ತಮ್ಮ ಮಗ ನಿಖಿಲ್ ಗೌಡ ಅಂತ ಎಲ್ಲರಿಂದ ಕರೆಸಿಕೊಳ್ಳುವುದು ಇಷ್ಟವಿರಲಿಲ್ಲ. ಅಲ್ಲದೇ ಗೌಡ ಎಂಬುದು ಜಾತಿ ಸೂಚಕ ಪದವಾದ್ದರಿಂದ, ಅವರಿಗೆ ಮಗನನ್ನು ನಿಖಿಲ್ ಗೌಡ ಎಂದು ಕರೆಯಲು ಸ್ವಲ್ಪವೂ ಇಷ್ಟವಿರಲಿಲ್ಲ.
ಅದಕ್ಕೆ ಒಂದಿಷ್ಟು ಜ್ಯೋತಿಷಿಗಳ ಹತ್ತಿರ ವಿಚಾರಿಸಿದ ಮೇಲೆ, ನಿಖಿಲ್ ಗೌಡ ಎಂಬ ಹೆಸರಿಗಿಂತ ನಿಖಿಲ್ ಕುಮಾರ್ ಎಂಬ ಹೆಸರು ತುಂಬಾ ಚೆನ್ನಾಗಿದೆ ಎಂಬ ಅಭಿಪ್ರಾಯ ಕೇಳಿ ಬಂದಿದ್ದು, ಅದಕ್ಕೆ ನಿಖಿಲ್ ಗೌಡ ಬದಲು ಈಗ ನಿಖಿಲ್ ಕುಮಾರ್ ಎಂದು ಮರುನಾಮಕರಣ ಮಾಡಲಾಗಿದೆ.

ಅಂದಹಾಗೆ ಡಿಸೆಂಬರ್ 16 ರಂದು ಚಿತ್ರ ಸೆಟ್ಟೇರುತ್ತಿದ್ದು, ಅಂದು ಕುಮಾರಸ್ವಾಮಿ ಅವರು ತಮ್ಮ ಹುಟ್ಟುಹಬ್ಬವನ್ನು ಕೂಡ ಆಚರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಆ ದಿನದಂದೇ ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಕಾರ್ಯಕ್ರಮದಲ್ಲಿ ನಟ ಅಂಬರೀಶ್, ರವಿಚಂದ್ರನ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಹಿರಿಯ ನಟಿ ಜಯಂತಿ, ಬಿ.ಸರೋಜಾದೇವಿ, ಲೀಲಾವತಿ, ಭಾರತಿ ವಿಷ್ಣುವರ್ಧನ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ಇನ್ನು ನಿಖಿಲ್ ಕುಮಾರ್ ಅಭಿನಯದ 'ಜಾಗ್ವಾರ್' ಸಿನಿಮಾದ ಪೋಸ್ಟರ್ ಗಳು ಬಿಡುಗಡೆಯಾಗಿ ಎಲ್ಲೆಡೆ ರಾರಾಜಿಸುತ್ತಿದ್ದು, ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪೋಸ್ಟರ್ ನಲ್ಲಿ ಮೆಚ್ಚಿದಂತೆ, ಸಿನಿಮಾ ನೋಡಿ ಕೂಡ ಬಹುಪರಾಕ್ ಹೇಳ್ತಾರ ನಮ್ಮ ಅಭಿಮಾನಿಗಳು ಅಂತ ಕಾದು ನೋಡಬೇಕಿದೆ.


Click it and Unblock the Notifications











