ಆಂಧ್ರ ಸಿಎಂ ಜಗನ್ ಭೇಟಿ ಮಾಡಿದ ನಿಖಿಲ್ ಕುಮಾರ್: ಕಾರಣವೇನು?
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ನಿಖಿಲ್ ಕುಮಾರ್ ರಾಜಕೀಯದಲ್ಲಿ ಮತ್ತಷ್ಟು ಸಕ್ರೀಯರಾಗಿದ್ದಾರೆ. ಪಕ್ಷಾತೀತವಾಗಿ ಹಿರಿಯ ನಾಯಕರನ್ನ ಭೇಟಿ ಮಾಡುತ್ತಿದ್ದಾರೆ. ಇದೀಗ, ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಜಗನ್ ಮೋಹನ್ ರೆಡ್ಡಿ ಅವರನ್ನ ಕರ್ನಾಟಕ ಸಿಎಂ ಪುತ್ರ ಭೇಟಿ ಮಾಡಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಫೋಟೋ ಹಂಚಿಕೊಂಡಿರುವ ನಿಖಿಲ್, ಜಗನ್ ಅವರಿಗೆ ಶುಭ ಕೋರಿದ್ದಾರೆ. ''ಅಂಧ್ರದಲ್ಲಿ 'ಜಗನ್ ಅಣ್ಣಾ' ಎಂದೇ ಜನಪ್ರಿಯರಾಗಿರುವ ಜಗನ್ ಮೋಹನ್ ರೆಡ್ಡಿಯವರ ರಾಜಕೀಯ ಜೀವನ, ರಾಜಕೀಯ ಕ್ಷೇತ್ರದಲ್ಲಿರುವ ಎಲ್ಲ ಯುವಕರಿಗೆ, ಕಾರ್ಯಕರ್ತರಿಗೆ ಪ್ರೇರಣೆ ನೀಡುವಂಥದ್ದು. ಹತ್ತು ವರ್ಷಗಳಿಗೂ ಹೆಚ್ಚು ಸುಧೀರ್ಘ ಕಾಲದ ಅವರ ಹೋರಾಟದ ದಾರಿ ಎಲ್ಲ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ''
''ಜನರ ಸೇವೆಗಾಗಿ ಅವರ ಬದ್ದತೆ ಮತ್ತು ಎದುರಾದ ಎಲ್ಲ ಅಡೆತಡೆ, ಸೋಲು, ಸವಾಲುಗಳನ್ನು ಮೀರಿ, ಗುರಿಮುಟ್ಟುವವರೆಗೂ ವಿರಮಿಸದ ಅವರ ಛಲ, ದಿಟ್ಟತನ, ಹೋರಾಟಗಳಿಗೆ ಜನ ಆಶೀರ್ವಾದ ಮಾಡಿದ್ದಾರೆ. ಈ ಅವಕಾಶವನ್ನು ಅವರು ಸಂಪೂರ್ಣವಾಗಿ ಬಳಸಿಕೊಂಡು, ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾಗಿ ಅವರು, ಜನರ ನಿರೀಕ್ಷೆಗೆ ತಕ್ಕಂತೆ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ'' ಎಂದು ಶುಭ ಕೋರಿದ್ದಾರೆ.

ಇನ್ನು 'ಕರ್ನಾಟಕದ ರಾಜಕಾರಣವನ್ನು ಕೂಡ ಚೆನ್ನಾಗಿ ತಿಳಿದಿರುವ ಜಗನ್ ರವರು ಪ್ರಸಕ್ತ ರಾಜಕೀಯ ಸನ್ನಿವೇಶಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿದರು. ಇಂತಹ ಸಂದರ್ಭದಲ್ಲಿ ನನ್ನಂತಹ ಯುವ ರಾಜಕಾರಣಿಗಳಿಗೆ ಉತ್ತಮ ಅವಕಾಶಗಳಿವೆ, ಸಾರ್ವಜನಿಕ ಜೀವನದಲ್ಲಿ, ಯಾವುದಕ್ಕೂ ಹಿಂಜರಿಯದೆ ಜನಸೇವೆಯೊಂದನ್ನೇ ಗುರಿಯಾಗಿಟ್ಟುಕೊಂಡು ಮುಂದುವರಿಯುವಂತೆ ನನಗೆ ಸಲಹೆ ನೀಡಿ, ರಾಜಕೀಯದಲ್ಲಿ ಉತ್ತಮ ಭವಿಷ್ಯವನ್ನು ಹಾಗು ಯಶಸ್ಸನ್ನು ಹಾರೈಸಿದರು'' ಎಂದು ಹಂಚಿಕೊಂಡಿದ್ದಾರೆ.
ರಾಜಕೀಯದ ಜೊತೆಗೆ ಸಿನಿಮಾರಂಗದಲ್ಲೂ ಮುಂದುವರಿಯಲಿದ್ದು, ಲೈಕಾ ಪ್ರೊಡಕ್ಷನ್ ಜೊತೆ ಮುಂದಿನ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಚಿತ್ರವನ್ನ ತೆಲುಗಿನ ಸ್ಟಾರ್ ನಿರ್ದೇಶಕರೊಬ್ಬರು ನಿರ್ದೇಶನ ಮಾಡುತ್ತಿದ್ದು, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದೆಯಂತೆ.

ಲೋಕಸಭೆ ಚುನಾವಣೆಯಲ್ಲಿ ಮತ್ತು ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಚಂದ್ರಬಾಬು ನಾಯ್ದು ಸಾರಥ್ಯದ ಟಿಡಿಪಿ ಪಕ್ಷಕ್ಕೆ ಬೆಂಬಲ ನೀಡಿದ್ದರು. ಟಿಡಿಪಿ ವಿರುದ್ಧ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಗೆದ್ದು ಬೀಗಿತ್ತು. ಟಿಡಿಪಿ ಬೆಂಬಲಿಸಿದ್ದರೂ ಜಗನ್ ಅವರನ್ನ ಭೇಟಿ ಮಾಡಿದ್ದು ನಿಜಕ್ಕೂ ಚರ್ಚೆಗೆ ಕಾರಣವಾಗಿದೆ.
ಮತ್ತೊಂದು ಕಡೆಯಿಂದ ಯೋಚಿಸಿದರೆ, ಈ ಭೇಟಿ ಹಿಂದೆ ರಾಜಕೀಯ ಕಾರಣನಾ ಅಥವಾ ಸಿನಿಮಾ ಕಾರಣನಾ ಎಂಬುದರ ಬಗ್ಗೆಯೂ ಕುತೂಹಲ ಮೂಡಿಸಿದೆ.


Click it and Unblock the Notifications











