ಪ್ರಧಾನಿಯಾಗಿ ತಾತನ ಸಾಧನೆಗಳನ್ನು ಬಣ್ಣಿಸಿದ ನಟ ನಿಖಿಲ್ ಕುಮಾರಸ್ವಾಮಿ
ಮಣ್ಣಿನ ಮಗ ಖ್ಯಾತಿಯ ಎಚ್ ಡಿ ದೇವೇಗೌಡ ಅವರು ದೇಶದ ಪ್ರಧಾನಿಯಾಗಿ ಇಂದಿಗೆ (ಜೂನ್ 1) 25 ವರ್ಷ. ದೇಶದ ಮಹೋನ್ನತ ಸ್ಥಾನವನ್ನು ಅಲಂಕರಿಸಿದ ಕನ್ನಡದ ಮೊದಲ ಮತ್ತು ಏಕೈಕ ವ್ಯಕ್ತಿ ಎಂಬ ಹೆಮ್ಮೆ ಅವರದು. ಎಚ್ ಡಿ ದೇವೇಗೌಡ ಅವರು ಪ್ರಧಾನಿಯಾಗಿ 25 ವರ್ಷ ತುಂಬಿದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಅನೇಕ ಗಣ್ಯರು ಅವರಿಗೆ ಶುಭ ಹಾರೈಸಿದ್ದಾರೆ.
Recommended Video
ದೇವೇಗೌಡ ಅವರ ಮೊಮ್ಮಗ, ನಟ ನಿಖಿಲ್ ಕುಮಾರ್ ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಅವರಿಗೆ ಶುಭ ಹಾರೈಸಿದ್ದಾರೆ. ಜತೆಗೆ ಪ್ರಧಾನಿಯಾಗಿದ್ದ ಅಲ್ಪಾವಧಿಯಲ್ಲಿಯೇ ದೇವೇಗೌಡರು ಮಾಡಿರುವ ಕಾರ್ಯಗಳ ಸುದೀರ್ಘ ಪಟ್ಟಿಯನ್ನು ಅವರು ನೀಡಿದ್ದಾರೆ. ದೇವೇಗೌಡರ ಸಾಧನೆ ಪ್ರತಿಯೊಬ್ಬ ಕನ್ನಡಿಗರಿಗೂ ಸ್ಫೂರ್ತಿಯಾಗಬೇಕು ಎಂದು ಹೇಳಿದ್ದಾರೆ. ಮುಂದೆ ಓದಿ...

ಗಂಗಾ ನದಿ ವಿವಾದ ಬಗೆಹರಿಸಿದ್ದು
ಕನ್ನಡನಾಡಿನ ಸಾಮಾನ್ಯ ರೈತಕುಲದಲ್ಲಿ ಜನಿಸಿದ ಹೆಚ್.ಡಿ ದೇವೇಗೌಡರು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಇಂದಿಗೆ 25 ವರ್ಷಗಳು. ಇಡೀ ದೇಶದಲ್ಲಿ ಐಟಿ ಉದ್ಯಮಕ್ಕೆ ಹತ್ತು ವರ್ಷಗಳ ಕಾಲ ಟ್ಯಾಕ್ಸ್ ಹಾಲಿಡೇ ನೀಡಿದ್ದರು. ಬಾಂಗ್ಲಾದೇಶ ಹಾಗೂ ಭಾರತದ ನಡುವಿನ ಗಂಗಾ ನದಿ ವಿವಾದ ಬಗೆಹರಿಸಿದ್ದು, ಈಶಾನ್ಯದ ಏಳು ರಾಜ್ಯಗಳಿಗೆ ಭೇಟಿ ನೀಡಿ ಒಟ್ಟು 6 ಸಾವಿರ ಕೋಟಿಯ ಪ್ಯಾಕೇಜ್ ಘೋಷಣೆ ಮಾಡಿದ್ದರು. ಏರ್ಪೋರ್ಟ್, ರೈಲ್ವೇ ಯೋಜನೆ ರಾಷ್ಟ್ರೀಯ ಹೆದ್ದಾರಿಗಳನ್ನು ಘೋಷಿಸಿದ್ದರು ಎಂದು ನಿಖಿಲ್ ತಿಳಿಸಿದ್ದಾರೆ.

ಕಾಶ್ಮೀರಕ್ಕೆ ಅನುದಾನ
ವಿಶ್ವವಿದ್ಯಾಲಯಗಳನ್ನು ನಿರ್ಮಿಸಲು ಈಶಾನ್ಯ ರಾಜ್ಯಗಳಿಗೆ ವಿಶೇಷ ಅನುದಾನ ಮಂಜೂರು ಮಾಡಿದ್ದರು. ಕಾಶ್ಮೀರಕ್ಕೆ ಐದು ಬಾರಿ ಭೇಟಿ ನೀಡಿ 3 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದ್ದರು. ನನೆಗುದಿಗೆ ಬಿದ್ದಿದ್ದ ದೆಹಲಿ ಮೆಟ್ರೋಗೆ ಚಾಲನೆ ನೀಡಿದ್ದರು. ನಾಗಾ ಬಂಡುಕೋರರೊಂದಿಗೆ ಶಾಂತಿ ಮಾತುಕತೆ ನಡೆಸಿ ಯುದ್ಧ ವಿರಾಮ ಘೋಷಿಸಿದ್ದರು. ಮುಂದಿನ ದಶಕಗಳಲ್ಲಿ ಬೆಂಗಳೂರಿಗೆ ನೀರಿನ ಅಭಾವವಾಗುವ ಸಾಧ್ಯತೆ ಮನಗಂಡು ಕಾವೇರಿಯಿಂದ 9 ಟಿಎಂಸಿ ನೀರು ಒದಗಿಸಿದ್ದಲ್ಲದೆ, ರಾಜ್ಯದಲ್ಲಿ ಹಲವಾರು ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ನೀಡಿದ್ದರು ಎಂದು ಹೇಳಿದ್ದಾರೆ.

ಕೃಷ್ಣ ಮೇಲ್ದಂಡೆಗೆ ಅನುದಾನ
ವಾಲೆಂಟರಿ ಡಿಸ್ಕೋಸರ್ ಸ್ಕೀಮ್ ಮೂಲಕ ಹತ್ತು ಸಾವಿರ ಕೋಟಿ ಕಪ್ಪು ಹಣವನ್ನು ದೇಶದ ಬೊಕ್ಕಸಕ್ಕೆ ಸೇರಿಸಿದ್ದರು. ದೇಶದ 36 ಕೋಟಿ ಜನತೆಗೆ ಬಿಪಿಎಲ್ ಕಾರ್ಡ್ ಮೂಲಕ ಮೂರು ರೂಪಾಯಿ ದರದಲ್ಲಿ ಹತ್ತು ಕೆಜಿ ಅಕ್ಕಿ, ಎರಡು ರೂಪಾಯಿ ದರದಲ್ಲಿ ಐದು ಕೆಜಿ ಗೋಧಿ, ಮೂರು ರೂಪಾಯಿಗೆ ಸೀಮೆಎಣ್ಣೆ ದೊರಕುವಂತೆ ಕ್ರಮ ಕೈಗೊಂಡಿದ್ದರು. ಕೇಂದ್ರ ಸರ್ಕಾರ ರಾಜ್ಯದ ನೀರಾವರಿ ಯೋಜನೆಗಳಿಗೆ ಅನುದಾನ ನೀಡದಿರುವ ನೀತಿಯನ್ನು ಬದಲಾಯಿಸಿ ಕೃಷ್ಣ ಮೇಲ್ದಂಡೆ ಯೋಜನೆಗೆ ಪ್ರಧಾನಿಯಾದ ತಕ್ಷಣ 1 ಸಾವಿರ ಕೋಟಿ ಬಿಡುಗಡೆ ಮಾಡಿದ್ದರು.

ಕನ್ನಡಿಗರಿಗೆ ಸ್ಫೂರ್ತಿಯಾಗಲಿ
ಹೀಗೆ ಪ್ರಧಾನ ಮಂತ್ರಿಯಾಗಿ ಕೆಲವೇ ಅವಧಿಯಲ್ಲಿ ಭಾರತದ ಹಾಗೂ ಈ ಮಣ್ಣಿನ ಇತಿಹಾಸ ಎಂದೂ ಮರೆಯದ ಸಾಧನೆ ಮಾಡಿರುವ ಮಣ್ಣಿನ ಮಗ ದೇವೇಗೌಡರು ದೆಹಲಿಯ ಗದ್ದುಗೆ ಏರಿ ಇಂದಿಗೆ 25 ವರ್ಷಗಳಾದವು. ಅವರ ಈ ಅಪ್ರತಿಮ ಸಾಧನೆ ಪ್ರತಿಯೊಬ್ಬ ಕನ್ನಡಿಗನಿಗೂ ಸ್ಪೂರ್ತಿಯಾಗಲಿ ಎಂದು ನಿಖಿಲ್ ಹೇಳಿದ್ದಾರೆ.


Click it and Unblock the Notifications











