ನಿಖಿಲ್ ಕುಮಾರ್ ಮದುವೆ: ಬೆಂಗಳೂರಿನಲ್ಲಿ ನಿಶ್ಚಿತಾರ್ಥ, ರಾಮನಗರದಲ್ಲಿ ವಿವಾಹ
ಸ್ಯಾಂಡಲ್ ವುಡ್ ನಟ ಮತ್ತು ರಾಜಕಾರಣಿ ನಿಖಿಲ್ ಕುಮಾರ್ ಗೆ ಮದುವೆ ಫಿಕ್ಸ್ ಆಗಿರುವ ವಿಚಾರ ಈಗಾಗಲೆ ಎಲ್ಲರಿಗೂ ಗೊತ್ತಿದೆ. ಕುಟುಂಬದವರು ನೋಡಿದ ಹುಡುಗು ರೇವತಿ ಜೊತೆ ನಿಖಿಲ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಆದರೆ ಯಾವಾಗ, ಎಲ್ಲಿ, ನಿಶ್ಚಿತಾರ್ಥ ಯಾವಾಗ ನಡೆಯುತ್ತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಆದರೆ ಈ ಎಲ್ಲಾ ಕುತೂಹಲ ಕಾತರತೆಗೆ ಮಾಜಿ ಸಿಎಂ ಕುಮಾರಸ್ವಾಮಿ ತೆರೆ ಎಳೆದಿದ್ದಾರೆ.
ನಿಖಿಲ್ ನಿಶ್ಚಿತಾರ್ಥ ಬೆಂಗಳೂರಿನಲ್ಲಿ ನಡೆಯಲಿದ್ದು, ರಾಮನಗರದಲ್ಲಿ ಮದುವೆ ಮಾಡುವ ಪ್ಲಾನ್ ಮಾಡಿದ್ದಾರೆ ಕುಮಾರಸ್ವಾಮಿ ಕುಟುಂಬ. ಈಗಾಗಲೆ ನಿಶ್ಚಿತಾರ್ಥದ ತಯಾರಿ ಜೋರಾಗಿ ನಡೆದಿದ್ದು, ಇದೆ ತಿಂಗಳು 10ಕ್ಕೆ ನಿಖಿಲ್ ಮತ್ತು ರೇವತಿ ಎಂಗೇಜ್ ಆಗಲಿದ್ದಾರೆ. ಹಾಗಾದರೆ ಎಲ್ಲಿ? ಮದುವೆ ಯಾವಾಗ? ಮುಂದೆ ಓದಿ..

ತಾಜ್ ವೆಸ್ಟೆಂಡ್ ನಲ್ಲಿ ನಿಶ್ಚಿತಾರ್ಥ
ನಿಖಿಲ್ ಕುಮಾರ್ ನಿಶ್ಚಿತಾರ್ಥದ ದಿನಾಂಕ ಈಗ ನಿಗದಿಯಾಗಿದೆ. ಇದೆ ತಿಂಗಳು ಫೆಬ್ರವರಿ 10 ರಂದು ನಿಖಿಲ್ ಮತ್ತು ರೇವತಿ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆಯಲಿದೆ. ಬೆಂಗಳೂರಿನ ತಾಜ್ ವೆಸ್ಟೆಂಡ್ ನಲ್ಲಿ ಸಂಪ್ರದಾಯ ಬದ್ಧವಾಗಿ ನಿಖಿಲ್ ನಿಶ್ಚಿತಾರ್ಥ ನಡೆಯಲಿದ್ದು, ಕುಟುಂಬದವರು, ಸ್ನೇಹಿತರು ಮತ್ತು ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ.

ರಾಮನಗರದಲ್ಲಿ ಮದುವೆ
ಮದುವೆ ದಿನಾಂಕ ಇನ್ನು ನಿಗದಿಯಾಗಿಲ್ಲ. ಆದರೆ ಮದುವೆ ರಾಮನಗರದಲ್ಲಿ ಮಾಡುವ ಪ್ಲಾನ್ ಮಾಡಿದ್ದಾರೆ ಕುಮಾರಸ್ವಾಮಿ ಕುಟುಂಬ. ಈ ಬಗ್ಗೆ ಇಂದು ಚನ್ನಪಟ್ಟಣದಲ್ಲಿ ಮಾತನಾಡಿದ ಕುಮಾರಸ್ವಾಮಿ "ಮದುವೆ ರಾಮನಗರ - ಚನ್ನಪಟ್ಟಣ ಮಧ್ಯದಲ್ಲಿ ನಡೆಯಲಿದೆ. ನಾನು ಬೆಂಗಳೂರಿನಲ್ಲಿ ಮದುವೆ ಮಾಡಲ್ಲ. ಎಲ್ಲಾ ನಾಯಕರು ಬೆಂಗಳೂರಿನಲ್ಲಿ ಮಾಡ್ತಾರೆ. ಆದರೆ ನನಗೆ ರಾಜಕೀಯವಾಗಿ ಜನ್ಮ ಕೊಟ್ಟ ರಾಮನಗರ - ಚನ್ನಪಟ್ಟಣ ಮಧ್ಯೆ ಮಾಡ್ತೀನಿ" ಎಂದು ಹೇಳಿದ್ದಾರೆ.

'ರಾಮನಗರ ಜನರ ಋಣ ನನ್ನ ಮೇಲಿದೆ'
"ರಾಮನಗರ ಜನರ ಋಣ ವಿದೆ. ನನ್ನ ಮನೆಯಲ್ಲಿ ಸಮಾರಂಭ ಮಾಡಲು ಇದೊಂದೆ ಅವಕಾಶವಿರೋದು. ಹಾಗಾಗಿ ನನ್ನ ಜನರಿಗೆ ಮದುವೆ ಊಟ ಹಾಕಬೇಕಿದೆ. ಪ್ರತಿ ಮನೆಗೂ ಮದುವೆ ಆಹ್ವಾನ ಪತ್ರಿಕೆ ಕೊಡುವ ವ್ಯವಸ್ಥೆ ಮಾಡಿದ್ದೇನೆ. ನಾನು ಹುಟ್ಟಿದ್ದು ಹಾಸನ ಜಿಲ್ಲೆ, ಆದರೆ ಬೆಳೆಸಿದ್ದು ರಾಮನಗರ ಜಿಲ್ಲೆಯಲ್ಲಿ. ಹಾಗಾಗಿ ಈ ಜನರಿಗೆ ಊಟ ಹಾಕಿ ಋಣ ತೀರಿಸುವ ಅವಕಾಶ ಸಿಕ್ಕಿದೆ" ಎಂದು ಹೇಳಿದರು.

ಏಪ್ರಿಲ್ ನಲ್ಲಿ ಮದುವೆ ಸಾಧ್ಯತೆ
ನಿಶ್ಚಿತಾರ್ಥದ ಎರಡು ತಿಂಗಳ ನಂತರ ಮದುವೆ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ ನಲ್ಲಿ ನಿಖಿಲ್ ಕಲ್ಯಾಣೋತ್ಸವ ಜರುಗಲಿದೆ ಎನ್ನುವ ಸುದ್ದಿ ಇದೆ. ಆದರೆ ನಿಶ್ಚಿತಾರ್ಥದ ನಂತರ ಮದುವೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ. ಮದುವೆ ದಿನಾಂಕ ನಿಗದಿಯಾದ ನಂತರ ಬಹಿರಂಗ ಪಡಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಕುಮಾರಸ್ವಾಮಿ ಕನಸಿನಂತೆ ಮದುವೆ ನಡೆಯಲಿದೆ.


Click it and Unblock the Notifications











