ಜೆಡಿಎಸ್ ಕಾರ್ಯಗಾರದಲ್ಲಿ ಚಿತ್ರರಂಗ ನೆನಪಿಸಿಕೊಂಡ ನಿಖಿಲ್ ಕುಮಾರಸ್ವಾಮಿ
ಜೆಡಿಎಸ್ ಪಕ್ಷವು ಬಿಡದಿಯಲ್ಲಿ ನಾಲ್ಕು ದಿನಗಳ ಕಾರ್ಯಾಗಾರ ಆಯೋಜಿಸಿದ್ದು, ಪಕ್ಷದ ವರ್ತಮಾನ, ಭವಿಷ್ಯದ ಬಗ್ಗೆ ಹಲವು ಚರ್ಚೆಗಳನ್ನು ಕಾರ್ಯಕರ್ತರು, ಮುಖಂಡರೊಟ್ಟಿಗೆ ಮಾಡಲಾಗಿದೆ.
ದೇವೇಗೌಡ, ಎಚ್ಡಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ರೇವಣ್ಣ ಸೇರಿ ಇಡೀಯ ಕುಟುಂಬ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು ಕಾರ್ಯಕರ್ತರು, ಮುಖಂಡರನ್ನುದ್ದೇಶಿಸಿ ಮಾತನಾಡಿದ್ದಾರೆ.
ಕಾರ್ಯಾಗಾರದ ಕೊನೆಯ ದಿನ ಇಂದಾಗಿದ್ದು, ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು, ಮುಖಂಡರನ್ನುದ್ದೇಶಿಸಿ ಮಾತನಾಡಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಸಿನಿಮಾ ರಂಗವನ್ನು ನೆನಪಿಸಿಕೊಂಡಿದ್ದಾರೆ.

ಜೆಡಿಎಸ್ ರಾಜ್ಯ ಯುವಘಟಕದ ಅಧ್ಯಕ್ಷರೂ ಆಗಿರುವ ನಿಖಿಲ್ ಕುಮಾರಸ್ವಾಮಿ, ''ಚಿತ್ರರಂಗದಲ್ಲಿ ನನ್ನ ವ್ಯಕ್ತಿತ್ವ ವಿಕಾಸ ಆಗಿದೆ. ರಾಜ್ಯದ ಜನ ನನ್ನನ್ನು ಒಬ್ಬ ನಟನಾಗಿ ಸ್ವೀಕರಿಸಿದ್ದಾರೆ. ಇದು ನನಗೆ ಸಿಕ್ಕಿರುವ ಅದೃಷ್ಟ ಎಂದ ಅವರು, ಜಾಗ್ವಾರ್ ಸಿನಿಮಾ ನಮ್ಮ ತಂದೆ ಕೊಟ್ಟ ಉಡುಗೊರೆ. ನಟನೆಯ ಜತೆಗೆ ಜನರ ಕೆಲಸವನ್ನು ಕೂಡ ಮಾಡುತ್ತೇನೆ ಎಂದಿದ್ದಾರೆ.
ರಾಜಕೀಯ ಹಾಗೂ ಪಕ್ಷದ ವಿಷಯವಾಗಿ ಮಾತನಾಡುತ್ತಾ, ''ಇನ್ನೂ ಒಂದೂವರೆ ವರ್ಷದಲ್ಲಿ ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂಚರಿಸಿ ಜೆಡಿಎಸ್ ಹಾಗೂ ಯುವ ಜನತಾ ದಳವನ್ನು ಬಲಿಷ್ಠವಾಗಿ ಸಂಘಟನೆ ಮಾಡುವುದಾಗಿ'' ನಿಖಿಲ್ ಕುಮಾರಸ್ವಾಮಿ ಅವರು ಘೋಷಿಸಿದರು.
''ಜಗತ್ತು ವೇಗವಾಗಿ ಸಾಗುತ್ತಿದೆ. ಸೋಷಿಯಲ್ ಮೀಡಿಯಾ ಬೆರಳ ತುದಿಯಲ್ಲಿ ಇದೆ. ನಾವು ಎಲ್ಲಿ ಎಡವಿದ್ದೇವೆ ಅನ್ನೋದನ್ನು ನೋಡಿಕೊಂಡು ಪಕ್ಷದ ಕೆಲಸ ಮಾಡೋಣ ಎಂದ ಅವರು; ತಾವು ರಾಜ್ಯ ಯುವ ಜನತಾದಳ ಅಧ್ಯಕ್ಷರಾದ ಸಂದರ್ಭವನ್ನು ಸ್ಮರಿಸಿಕೊಂಡರು.
''ಆವತ್ತು ಬೆಳಗ್ಗೆ ನನಗೆ ಒಂದು ಮೊಬೈಲ್ ಕರೆ ಬರುತ್ತೆ, ನೀವು 11 ಗಂಟೆಗೆ ಪಕ್ಷದ ಕಚೇರಿಗೆ ಬರಬೇಕು ಅಂತ. ನಾನು ಅಲ್ಲಿಗೆ ಹೋದೆ. ಏನೆಂದು ಗೊತ್ತಾಗಲಿಲ್ಲ. ಅಲ್ಲಿ ಹೋದ ಮೇಲೆ ನನಗೆ ಅಚ್ಚರಿ ಆಯಿತು. ದೊಡ್ಡವರು ನನಗೆ ಯುವ ಜನತಾದಳದ ಜವಾಬ್ದಾರಿ ನೀಡಿದರು. ನನಗೆ ಪಕ್ಷ ಕಟ್ಟುವ ಬಗ್ಗೆಯೂ ಗೊತ್ತಿರಲಿಲ್ಲ. ನನಗೆ ನನ್ನ ದೇವರು (ದೇವೇಗೌಡರು) ಮಾರ್ಗದರ್ಶನ ಮಾಡಿದರು. ನಾನು ಎಂದೂ ಅವರನ್ನು ಹೆಸರಿಟ್ಟು ಕರೆಯಲ್ಲ. ದೇವರು ಎಂದೇ ನಂಬಿದ್ದೇನೆ'' ಎಂದು ನಿಖಿಲ್ ಅಂದಿನ ದಿನವನ್ನು ನೆನಪು ಮಾಡಿಕೊಂಡರು.
ನಮ್ಮ ತಂದೆಯ ಬಗ್ಗೆ ಮಗನಾಗಿ ನಾನಿಲ್ಲಿ ಮಾತನಾಡುತ್ತಿಲ್ಲ. ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ. ಅವರ ಸರಳತೆ, ತಾಯಿ ಹೃದಯ ಎಲ್ಲರಿಗೂ ಅಚ್ಚುಮೆಚ್ಚು ಮತ್ತು ಅನುಕರಣೀಯ ಎಂದರು ನಿಖಿಲ್.
ಭಾಷಣದುದ್ದಕ್ಕೂ ದೊಡ್ಡಗೌಡರನ್ನು ಮತ್ತೆ ಮತ್ತೆ ದೇವರು ಎಂದೇ ಕರೆದ ನಿಖಿಲ್, ಕಷ್ಟಪಟ್ಟು ಈ ಪಕ್ಷ ಕಟ್ಟಿದ್ದಾರೆ. ನಮ್ಮ ತಂದೆಯವರು 15 ವರ್ಷದಿಂದ ಒಬ್ಬರೇ ಈ ಪಕ್ಷ ಉಳಿಸಿಕೊಂಡು ಬಂದಿದ್ದಾರೆ ಎಂದು ಅವರು ಹೇಳಿದರು.
ಹೆಚ್ಡಿಕೆ ಅವರು ರೈತರ ಸಾಲ ಮನ್ನಾ ಮಾಡಿದರು. ಕೊಟ್ಟ ಮಾತನ್ನು ಉಳಿಸಿಕೊಂಡರು. ಆತ್ಮಸಾಕ್ಷಿಗೆ ದ್ರೋಹ ಮಾಡಿಕೊಳ್ಳಲ್ಲ. ನಾವೆಲ್ಲರೂ ಅವರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡೋಣ. ಈ ಕ್ಷಣವೇ ನಾವೆಲ್ಲಾ ಸಂಕಲ್ಪ ತೊಟ್ಟು ಪ್ರತಿ ತಾಲೂಕಿನಲ್ಲಿ ಮೆಂಬರ್ ಶಿಪ್ ಡ್ರೈವ್ ಶುರು ಮಾಡೋಣ ಎಂದು ಯುವ ಜನತಾದಳ ಪಡೆಗೆ ಸ್ಪೂರ್ತಿ ತುಂಬಿದರು ನಿಖಿಲ್.
''ನಾವೆಲ್ಲಾ ಸಜ್ಜಾಗಬೇಕು. 18 ತಿಂಗಳು ಮಾತ್ರ ಚುನಾವಣೆಗೆ ಬಾಕಿ ಇದೆ. ನಾವೆಲ್ಲಾ ಸೇರಿ ಪಕ್ಷ ಕಟ್ಟಬೇಕು. 30 ಪರ್ಸೆಂಟ್ ಮಹಿಳೆಯರಿಗೆ ಮೀಸಲಾತಿ ಅಂತ ತಂದೆಯವರು ಹೇಳಿದ್ದಾರೆ. ಯುವಕರಿಗೆ ಟಿಕೆಟ್ ಹಂಚಿಕೆಯಲ್ಲಿ 25 ಪರ್ಸೆಂಟ್ ಅವಕಾಶ ನೀಡಬೇಕು ಎಂದು ಕೋರುತ್ತೇನೆ'' ಎಂದು ಅವರು ನುಡಿದರು
ಬಿಡದಿಯ ತೋಟದ ಮನೆಯಲ್ಲಿ ನಡೆಯುತ್ತಿರುವ ಜನತಾ ಪರ್ವ 1.O ಹಾಗೂ ಮಿಷನ್ 123 ಕಾರ್ಯಾಗಾರದ ನಾಲ್ಕನೇ ದಿನ ಯುವ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 2023ರಲ್ಲಿ ಪಕ್ಷ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗುತ್ತಾರೆ. ಅದಕ್ಕಾಗಿ ಯುವ ಜನತಾದಳ ರಾಜ್ಯಾದ್ಯಂತ ಕೆಲಸ ಮಾಡಲಿದೆ ಎಂದರು.


Click it and Unblock the Notifications











