ಉಪಚುನಾವಣೆ ಅಖಾಡಕ್ಕೆ ಇಳಿದ ನಿಖಿಲ್ ಕುಮಾರಸ್ವಾಮಿ
ಲಾಕ್ಡೌನ್ ಅವಧಿಯಲ್ಲಿ ವಿವಾಹವಾಗಿ ಸಂಸಾರದ ಮಧುರ ಕ್ಷಣಗಳನ್ನು ಕಳೆಯುತ್ತಿದ್ದ ನಿಖಿಲ್ ಕುಮಾರಸ್ವಾಮಿ, ಆ ನಡುವೆಯೇ ಕೃಷಿ, ವ್ಯಾಯಾಮಗಳಲ್ಲಿ ತೊಡಗಿಸಿಕೊಂಡಿದ್ದರು.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರೂ ಆಗಿರುವ ನಿಖಿಲ್ ಕುಮಾರಸ್ವಾಮಿ, ಈ ನಡುವೆ ರಾಜಕಾರಣದಿಂದ ತುಸು ಅಂತರ ಕಾಯ್ದುಕೊಂಡಿದ್ದರು. ಆದರೆ ಈಗ ಮತ್ತೆ ರಾಜಕೀಯ ಅಖಾಡಕ್ಕೆ ಇಳಿಯುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ.
ಶಿರಾ ಹಾಗೂ ಆರ್ಆರ್ ನಗರ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಉಪಚುನಾವಣೆ ಅಂಕಣ ಭರ್ಜರಿಯಾಗಿ ರಂಗೇರಿದೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾಗಿದ್ದರೂ ಸಹ ಪ್ರಚಾರದಿಂದ ದೂರ ಉಳಿದಿದ್ದ ನಿಖಿಲ್ ಬಗ್ಗೆ ಅಲ್ಲಲ್ಲಿ ಗುಸು-ಗುಸು ಸುದ್ದಿಗಳು ಹರಿದಾಡುತ್ತಿದ್ದವು. ಈಗ ಎಲ್ಲ ಗಾಳಿ ಸುದ್ದಿಗಳಿಗೆ ಪೂರ್ಣವಿರಾಮವಿಟ್ಟು ಅಖಾಡಕ್ಕೆ ಇಳಿದಿದ್ದಾರೆ ನಿಖಿಲ್ ಕುಮಾರಸ್ವಾಮಿ.

ಉಪಚುನಾವಣೆ ಪ್ರಚಾರ ಅಖಾಡಕ್ಕೆ ನಿಖಿಲ್
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನಾಳೆ ಅಂದರೆ ಅಕ್ಟೋಬರ್ 24 ರಂದು ಉಪಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉಪಚುನಾವಣೆ ಘೋಷಣೆ ಆದ ಬಳಿಕ ಇದೇ ಮೊದಲ ಬಾರಿಗೆ ಪ್ರಚಾರ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ ನಿಖಿಲ್.

20 ಹಳ್ಳಿಗಳಲ್ಲಿ ನಿಖಿಲ್ ಪ್ರಚಾರ
ನಾಳೆ (ಶನಿವಾರ) ಶಿರಾ ಕ್ಷೇತ್ರಕ್ಕೆ ಭೇಟಿ ನೀಡಲಿರುವ ನಿಖಿಲ್ ಕುಮಾರಸ್ವಾಮಿ, ಮೊದಲಿಗೆ ಪಟ್ಟದನಾಯಕನಹಳ್ಳಿಯಲ್ಲಿ ನಂಜಾವಧೂತ ಸ್ವಾಮಿಗಳನ್ನು ಭೇಟಿ ಮಾಡಲಿದ್ದಾರೆ. ಆ ನಂತರ ಕ್ಷೇತ್ರದ 20 ಹಳ್ಳಿಗಳಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಬಿ ಸತ್ಯನಾರಾಯಣ ಪರ ಮತ ಕೇಳಲಿದ್ದಾರೆ. ಸಂಜೆ ಆರು ಗಂಟೆ ವರೆಗೆ ಪ್ರಚಾರ ಮಾಡಲಿದ್ದಾರೆ ನಿಖಿಲ್.

ಆರ್ಆರ್ ನಗರದಲ್ಲಿ ವಿ.ಕೃಷ್ಣಮೂರ್ತಿ ಅಭ್ಯರ್ಥಿ
ಭಾನುವಾರ ಅಥವಾ ಸೋಮವಾರದಂದು ನಿಖಿಲ್ ಕುಮಾರಸ್ವಾಮಿ ಅವರು ಆರ್ಆರ್ ನಗರ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಆರ್ಆರ್ ನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ವಿ.ಕೃಷ್ಣಮೂರ್ತಿ ಕಣಕ್ಕೆ ಇಳಿದಿದ್ದಾರೆ.
Recommended Video

ಶಿರಾ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಪ್ರಚಾರ
ಶಿರಾ ಕ್ಷೇತ್ರದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಸತತವಾಗಿ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಆ ಕ್ಷೇತ್ರದ ಜವಾಬ್ದಾರಿ ಹೊತ್ತಿರುವ ಕಾರಣದಿಂದಲೇ ನಿಖಿಲ್ ಕುಮಾರಸ್ವಾಮಿ ಪ್ರಚಾರಕ್ಕೆ ಹೋಗಿಲ್ಲ ಎನ್ನಲಾಗುತ್ತಿತ್ತು. ಆದರೆ ಈಗ ಗಾಳಿ ಸುದ್ದಿ ಸುಳ್ಳು ಮಾಡಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳಿದ್ದಾರೆ ನಿಖಿಲ್.


Click it and Unblock the Notifications











