ಕನ್ನಡಿಗರ ಸ್ವಾಭಿಮಾನ, ಸಹನೆ ಕೆಣಕಬೇಡಿ: ನಿಖಿಲ್ ಕುಮಾರಸ್ವಾಮಿ
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಅಡ್ಡಿಪಡಿಸುತ್ತಿರುವ ಕನ್ನಡ ವಿರೋಧಿ ಸಂಘಟನೆಗಳ ವಿರುದ್ಧ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ದನಿ ಎತ್ತಿದ್ದಾರೆ.
Recommended Video
ಬೆಳಗಾವಿಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಟಾಪನೆಗೆ ಎಂಇಎಸ್ ಸಂಘಟನೆ ವಿರೋಧ ವ್ಯಕ್ತಿಪಡಿಸಿದ್ದು, ಕನ್ನಡ ಸಂಘಟನೆಗಳ ಮೇಲೆ ಎಂಇಎಸ್ ಪುಂಡರು ಕಲ್ಲು ತೂರಾಟ ಸಹ ನೆಡೆಸಿದರು. ಪೊಲೀಸರು ಲಾಠಿ ಪ್ರಹಾರ ಸಹ ನಡೆಸಿದರು.
ಈ ವಿಷಯವಾಗಿ ಟ್ವೀಟ್ ಮಾಡಿರುವ ನಿಖಿಲ್ ಕುಮಾರಸ್ವಾಮಿ, 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕರ್ನಾಟಕದ ಅಸ್ಮಿತೆ. ಅಂತಹವರ ಪ್ರತಿಮೆ ಸ್ಥಾಪನೆಗೆ ವಿರೋಧಿಸುವುದು ನಾಡದ್ರೋಹದ ಕೆಲಸ. ನಮ್ಮದೇ ನೆಲದಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪನೆ ಮಾಡಲು ಕನ್ನಡಿಗರು ಇಷ್ಟು ಹರಸಾಹಸ ಪಡಬೇಕೇ?' ಎಂದು ಪ್ರಶ್ನೆ ಮಾಡಿದ್ದಾರೆ.

ಪುಂಡ ಸಂಘಟನೆಗಳನ್ನು ಸರ್ಕಾರ ಮಟ್ಟ ಹಾಕಬೇಕು: ನಿಖಿಲ್
ಬೆಳಗಾವಿ ಜಿಲ್ಲೆ ಪೀರನವಾಡಿಯಲ್ಲಿ ನಮ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಪ್ರತಿಷ್ಠಾಪನೆ ವಿರೋಧಿಸಿ ಪುಂಡಾಟಿಕೆ ಮಾಡುತ್ತಿರುವ ಕೆಲವು ಸಂಘಟನೆಗಳನ್ನು ಸರ್ಕಾರ ಕೂಡಲೇ ಮಟ್ಟ ಹಾಕಬೇಕು ಎಂದು ಹೇಳಿದ್ದಾರೆ.

'ಕನ್ನಡಿಗರ ಸ್ವಾಭಿಮಾನ ಹಾಗೂ ಸಹನೆಯನ್ನು ಕೆಣಕಿದಂತೆಯೇ'
ನಮ್ಮದೇ ನಾಡಿನಲ್ಲಿ ನಮ್ಮ ನೆಲದ ಕ್ರಾಂತಿವೀರರ ಪ್ರತಿಮೆ ಸ್ಥಾಪನೆಗೆ ವಿರೋಧ ಮಾಡುವುದು ಕನ್ನಡಿಗರ ಸ್ವಾಭಿಮಾನ ಹಾಗೂ ಸಹನೆಯನ್ನು ಕೆಣಕಿದಂತೆಯೇ. ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ವಿಶೇಷ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ ಎಂದು ಸಿಎಂ ಗೆ ಮನವಿ ಸಹ ಮಾಡಿದ್ದಾರೆ ನಿಖಿಲ್.

ಬೆಳಗಾವಿಯಲ್ಲಿ ಬಿಗುವಿನ ವಾತಾವರಣ
ಬೆಳಗಾವಿಯಲ್ಲಿ ಪ್ರಸ್ತುತ ಬಿಗುವಿನ ವಾತಾವರಣವಿದ್ದು, ಪಿನರವಾಡಿಯಲ್ಲಿ ಪೊಲೀಸರ ತುಕಡಿ ಬೀಡು ಬಿಟ್ಟಿದೆ. ಸ್ಥಳೀಯ ಜಿಲ್ಲಾಧಿಕಾರಿಗಳು ಎಂಇಎಸ್ ಹಾಗೂ ಕನ್ನಡ ಸಂಘಟನೆಗಳ ನಡುವೆ ಸಂಧಾನಕ್ಕೆ ಯತ್ನಿಸಿದ್ದಾರೆ.

ಸಕ್ರಿಯ ರಾಜಕಾರಣಕ್ಕೆ ಮರಳುತ್ತಿರುವ ನಿಖಿಲ್
ಲಾಕ್ಡೌನ್ ವೇಳೆಯಲ್ಲಿ ಪತ್ನಿ, ಕುಟುಂಬದೊಂದಿಗೆ ಸಮಯ ಕಳೆದ ನಿಖಿಲ್ ಕುಮಾರಸ್ವಾಮಿ ನಿಧಾನಕ್ಕೆ ಸಕ್ರಿಯ ರಾಜಕಾರಣದ ಕಡೆಗೆ ಮತ್ತೆ ಗಮನ ಹರಿಸುತ್ತಿದ್ದು, ಪ್ರವಾಹಕ್ಕೆ ಈಡಾಗಿದ್ದ ಕೊಡಗಿಗೆ ಹೋಗಿ ಸಂತ್ರಸ್ತರನ್ನು ಭೇಟಿಯಾಗಿ ಧೈರ್ಯ ತುಂಬುವ ಕಾರ್ಯ ಮಾಡಿದರು ನಿಖಿಲ್.


Click it and Unblock the Notifications











