'ಬ್ರೇಕಿಂಗ್ ನ್ಯೂಸ್' ರಾಧಿಕಾ ಕೇಶ ಸೌಂದರ್ಯ ಬಯಲು!
ಅವರ ಕೇಶ ಸೌಂದರ್ಯದ ಗುಟ್ಟನ್ನು ಗ್ರಹಿಸಿರುವ ತೈಲ ಕಂಪನಿಯೊಂದು ಅವರಿಗೆ ಭರ್ಜರಿ ಆಫರ್ ನೀಡಿದೆ. ರಾಧಿಕಾ ಪಂಡಿತ್ ಈಗ ಕೆಎಲ್ಎಫ್ ನಿರ್ಮಲ್ ಕ್ಲಿಯರ್ ಕೊಬ್ಬರಿ ಎಣ್ಣೆಯ ಪ್ರಚಾರ ರಾಯಭಾರಿ. ಪಾರದರ್ಶಕ ಪ್ಯಾಕ್ನಲ್ಲಿ ಬರುತ್ತಿರುವ ಭಾರತದ ಮೊಟ್ಟಮೊದಲ ನಿರ್ಮಲ್ ಕ್ಲೀಯರ್ ಕೊಬ್ಬರಿ ಎಣ್ಣೆ ಇದಾಗಿದೆ.
ಕರ್ನಾಟಕದ ಅತ್ಯಂತ ಜನಪ್ರಿಯ ಕೊಬ್ಬರಿ ಎಣ್ಣೆಗಳಲ್ಲಿ ನಿರ್ಮಲ್ ಕೂಡ ಒಂದು. ಕೆಎಲ್ಎಫ್ ತನ್ನ ಪರ್ಸನಲ್ ಕೇರ್ ಸೌಂದರ್ಯ ವಿಭಾಗದ ಈ ಉತ್ಪನ್ನಕ್ಕೆ ರಾಧಿಕಾ ಅವರನ್ನು ಪ್ರಚಾರ ರಾಯಭಾರಿಯಾಗಿ ಆಯ್ಕೆ ಮಾಡಿಕೊಂಡಿರುವುದು ವಿಶೇಷ.
ಈ ಬಗ್ಗೆ ರಾಧಿಕಾ ಪಂಡಿತ್ ಮಾತನಾಡುತ್ತಾ, "ನನ್ನ ಹೇರ್ ಸ್ಟೈಲನ್ನು ಆಗಾಗ ಬದಲಾಯಿಸುತ್ತಿರುತ್ತೇನೆ. ಇದಕ್ಕಾಗಿ ಹಲವಾರು ರಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸಬೇಕಾಗುತ್ತದೆ. ಆದರೆ ಇದರಿಂದ ಕೂದಲು ತನ್ನ ಹೊಳಪು ಕಳೆದುಕೊಳ್ಳುತ್ತದೆ. ಆದರೆ ನಿರ್ಮಲ್ ಕೊಬ್ಬರಿ ಎಣ್ಣೆ ಕೂದಲಿಗೆ ಹೊಸ ಹೊಳಪು ನೀಡುತ್ತದೆ. ಕೂದಲು ಆರೋಗ್ಯಯುತವಾಗಿರಲು ಸಹಕರಿಸುತ್ತದೆ"
"ಇಷ್ಟೇಲ್ಲಾ ಗುಣಗಳನ್ನು ಹೊಂದಿರುವ ನಿರ್ಮಲ್ ಕೊಬ್ಬರಿ ಎಣ್ಣೆಗೆ ಪ್ರಚಾರ ರಾಯಭಾರಿ ಆಗಿರುವುದಕ್ಕೆ ತುಂಬಾ ಸಂತಸವಾಗುತ್ತಿದೆ" ಎಂದಿದ್ದಾರೆ ರಾಧಿಕಾ. ಭಾರತದ ಕೇಶತೈಲಗಳ ಉದ್ಯಮ ಸುಮಾರು ರು. 300 ಕೋಟಿ ವಹಿವಾಟು ನಡೆಸುತ್ತಿದೆ. ಅದರಲ್ಲಿ ಶೇ.72ರಷ್ಟು ಪಾಲನ್ನು ಕೊಬ್ಬರಿ ಎಣ್ಣೆ ಹೊಂದಿದೆ. ಪ್ರತಿ ವರ್ಷ ಶೇ.30ರಷ್ಟು ಏರಿಕೆಯಾಗುತ್ತಿದೆ ಎನ್ನುತ್ತಾರೆ ಕೆಎಲ್ಎಫ್ ನಿರ್ಮಲ್ ನಿರ್ದೇಶಕ ಸನ್ನಿ ಫ್ರಾನ್ಸಿಸ್.
ನಿರ್ಮಲ್ ಕೊಬ್ಬರಿ ಎಣ್ಣೆ ಮೂರು ವಿಭಿನ್ನ ಪ್ಯಾಕ್ಗಳಲ್ಲಿ ಭಾರತದಲ್ಲಿ ದೊರೆಯುತ್ತದೆ. 100, 200 ಹಾಗೂ 500 ಎಂಎಲ್ ಪ್ಯಾಕ್ಗಳಲ್ಲಿ ನಿರ್ಮಲ್ ಕೊಬ್ಬರಿ ಎಣ್ಣೆ ಲಭ್ಯ. ಮುಂಬರುವ ದಿನಗಳಲ್ಲಿ ಪರಿಶುದ್ಧ ಕೊಬ್ಬರಿ ಎಣ್ಣೆ ಹಾಗೂ ಜಾಸ್ಮಿನ್ ಕೊಬ್ಬರಿ ಎಣ್ಣೆಗಳನ್ನು ಆಯ್ದ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ರಾಧಿಕಾ ಪಂಡಿತ್ ಅಭಿನಯದ ಇತ್ತೀಚಿನ 'ಬ್ರೇಕಿಂಗ್ ನ್ಯೂಸ್' ಪ್ರೇಕ್ಷಕರನ್ನು ಸೆಳೆಯಲಿಲ್ಲ. ಪ್ರಸ್ತುತ ಯೋಗರಾಜ್ ಭಟ್ ನಿರ್ದೇಶನದ 'ಡ್ರಾಮಾ' ಚಿತ್ರದಲ್ಲಿ ರಾಧಿಕಾ ಪಂಡಿತ್ ಬಿಜಿಯಾಗಿದ್ದಾರೆ. ಸಕ್ಕರೆ, ಕಡ್ಡಿಪುಡಿ, ಅದ್ದೂರಿ ಸೇರಿದಂತೆ ಮುಂತಾದ ಚಿತ್ರಗಳು ಅವರ ಕೈಯಲ್ಲಿವೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












